ಉಡುಪಿ: ಆಕೆ ಎಂಬಿಎ ಪದವೀಧರೆ. ಮಹಾರಾಷ್ಟ್ರದ ಮುಂಬೈನ ಪ್ರತಿಷ್ಠಿತ ಕಾರ್ಪೋರೇಟ್ ಸಂಸ್ಥೆಯಲ್ಲಿ ಉತ್ತಮ ಉದ್ಯೋಗ, ಕೈತುಂಬಾ ಸಂಬಳ. ಆದರೂ ಮನದಲ್ಲಿ ತಾನು ಮತ್ತೇನೋ ಮಾಡಬೇಕಲ್ಲಾ ಎಂಬ ಮಹತ್ವಾಕಾಂಕ್ಷೆ. ಇದು ಉಡುಪಿ ಕನಸು ಕಂಗಳ ಯುವತಿ, ಉಡುಪಿಯ ಸೀರೆಗಳಿಗೆ ಆಧುನಿಕ ಸ್ಪರ್ಶ ನೀಡಿ, ಮಗ್ಗದ ಸೀರೆಗಳಿಗೆ ದೇಶದೆಲ್ಲೆಡೆ ಮನ್ನಣೆ ದೊರೆಯುವಂತೆ ಮಾಡಿದ ಮಹಾಲಸಾ ಕಿಣಿ ಅವರ ಮಾದರಿ ಬದುಕಿನ ಕಥೆ.
ಮಹಾಲಸಾ ಕಿಣಿ ಅವರು ಮಣಿಪಾಲದ ಪ್ರತಿಷ್ಟಿತ ಕಾಲೇಜೊಂದರಲ್ಲಿ ಎಂಬಿಎ ಪದವಿ ಮುಗಿಸಿದವರು. ಮುಂಬೈನಲ್ಲಿ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೈತುಂಬಾ ಸಂಬಳ ಬರುವ ಕೆಲಸ. ಆದರೂ ತಾನೇನೋ ಮಾಡಬೇಕಲ್ಲಾ ಎಂಬ ಬಯಕೆ. ಅದಕ್ಕಾಗಿ ಅವರು ಮಾಡಿಕೊಂಡ ಆಯ್ಕೆ ತನ್ನೂರಿನ ಮಗ್ಗದ ಸೀರೆಗಳಿಗೆ ಅತ್ಯಾಧುನಿಕ ಸ್ಪರ್ಶ ನೀಡಿ, ಆನ್ಲೈನ್ ಮೂಲಕ ಗ್ರಾಹಕರನ್ನು ಸೆಳೆಯುವುದು. ಆ ಮೂಲಕ ಉಡುಪಿಯ ಸೀರೆಗಳನ್ನು ಹೆಚ್ಚು ಜನಪ್ರಿಯಗೊಳಿಸುವುದು. ಇದನ್ನೇ ತನ್ನ ಮುಖ್ಯ ಗುರಿ ಎಂಬುದಾಗಿ ನಿರ್ಧರಿಸಿ ಕೈ ತುಂಬಾ ಕಾಂಚಾಣ ಬರುವ ಉದ್ಯೋಗಕ್ಕೆ ರಾಜೀನಾಮೆ ನೀಡಿ ಮರಳಿ ಉಡುಪಿಗೆ ಬರುತ್ತಾರೆ. ಬಂದವರೇ ಕೈಮಗ್ಗದಿಂದ ತಯಾರಾಗುವ ಉಡುಪಿಯ ಸೀರೆಗಳ ಮಾಡರ್ನ್ ಲುಕ್ಗೆ ಪೂರಕವಾಗುವಂತೆ ಯೋಚನೆ-ಯೋಜನೆಗಳನ್ನು ಸಿದ್ಧಗೊಳಿಸುತ್ತಾರೆ. ಕಾರ್ಯಪ್ರವೃತ್ತರಾಗುತ್ತಾರೆ.
ಮಹಾಲಸಾ ಸ್ವತಃ ತಾವೇ ಮಗ್ಗದಲ್ಲಿ ಸೀರೆ ನೇಯ್ಗೆ ಮಾಡುವ ಕಲೆಯನ್ನು ಕಲಿತುಕೊಳ್ಳುತ್ತಾರೆ. ಹೊಸ ವಿನ್ಯಾಸಗಳ, ಮನಸೂರೆಗೊಳ್ಳುವಂತ ಆಧುನಿಕರನ್ನು ಸೆಳೆಯಬಲ್ಲ ಮನಮೋಹಕ ಸೀರೆಗಳನ್ನು ತಯಾರು ಮಾಡುತ್ತಾರೆ. ಈ ಸೀರೆಗಳನ್ನು ನೀರೆಯರಿಗೆ ತಲುಪುವಂತೆ ಮಾಡಲೋಸುಗ ಆನ್ಲೈನ್ ಮಾರಾಟ ಪ್ರಕ್ರಿಯೆ ಆರಂಭ ಮಾಡುತ್ತಾರೆ. ಆಧುನಿಕ ಚಿಂತನೆಗಳಿಂದ ಹೊರಬಂದ ಕಲಾಕಾರಕ ಸೀರೆಗಳ ಅತ್ಯಾಕರ್ಷಕ ವಿನ್ಯಾಸ ರಾಜ್ಯದ, ಹೊರ ರಾಜ್ಯದ ಮಹಿಳೆಯರನ್ನು ಸೆಳೆಯುತ್ತದೆ. ಒಂದರ್ಥದಲ್ಲಿ ಮಹಾಲಸಾ ಅವರ ಕನಸಿಗೆ ಸಾರ್ವಜನಿಕ ವಲಯದಲ್ಲಿ ಬಹು ಬೇಡಿಕೆ ಸೃಷ್ಟಿಯಾಗುತ್ತದೆ. ಮಾಡರ್ನ್ ಮನಮೋಹಕ ಉಡುಪಿಯ ಸೀರೆಗಳು ದೇಶದೆಲ್ಲೆಡೆ ಮಿಂಚಲು ಆರಂಭವಾಗುತ್ತದೆ.
ಸದ್ಯ ಮಹಾಲಸಾ ಕಿಣಿ ಅವರು ಮಾಡರ್ನ್ ಟಚ್ ಇರುವ ಕೈ ಮಗ್ಗದ ಕಲಾ ಶ್ರೀಮಂತಿಕೆಯ ಉಡುಪಿ ಸೀರೆಗಳನ್ನು ಉಡುಪಿಯ ಪ್ರಾಥಮಿಕ ನೇಕಾರರ ಸಂಘ, ಶಿವಳ್ಳಿ ಪ್ರಾಥಮಿಕ ನೇಕಾರರ ಸಂಘ ಮೊದಲಾದೆಡೆಗಳಲ್ಲಿ ತಯಾರಿಸಿ ಅದನ್ನು ಆನ್ಲೈನ್ ಮೂಲಕ ರಾಷ್ಟ್ರವ್ಯಾಪಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಪೂರಕ ಸಹಕಾರವೂ ಸಾರ್ವಜನಿಕ ವಲಯದಿಂದ ದೊರೆಯುವುದಾಗಿಯೂ ಅವರು ಹೇಳುತ್ತಾರೆ. ಈ ವರೆಗೆ ರಾಜ್ಯದೊಳಗೆ ಮಾರಾಟವಾಗುತ್ತಿದ್ದ ಅಥವಾ ಸೀಮಿತ ಮಾರುಕಟ್ಟೆ ಹೊಂದಿದ್ದ ಉಡುಪಿಯ ಪಾರಂಪರಿಕ ಸೀರೆಗಳು ಇಂದು ಮಹಾಲಸಾ ಅವರ ಕೈಚಳಕದಿಂದ ಮತ್ತು ಮಹತ್ವಾಕಾಂಕ್ಷೆಯ ಕಾರಣಗಳಿಂದ ದೇಶದೆಲ್ಲೆಡೆ ಗ್ರಾಹಕರನ್ನು ಸೆಳೆಯುವಂತಾಗಿದೆ.
ತಾನೇನೋ ಮಾಡಬೇಕು. ಅದು ತನಗೆ ಮತ್ತು ತನ್ನವರಿಗೆ ಸಹಾಯವಾಗುವಂತಿರಬೇಕು ಎಂಬ ಆಶಯದ ಜೊತೆಗೆ ಕನಸು ಕಂಗಳ ಚೆಲುವೆ ಆರಂಭಿಸಿದ ಹೊಸ ಕೆಲಸ ಇಂದು ಉಡುಪಿಯ ಸೀರೆಗಳಿಗೆ ಪ್ರಖ್ಯಾತಿ ತಂದುಕೊಟ್ಟಿದೆ. ಜೊತೆಗೆ ಹಲವು ಜನರಿಗೆ ಹೀಗೂ ಸಾಧ್ಯ ಎಂಬಂತೆ ಹೊಸ ಹೊಳಹುಗಳನ್ನು ನೀಡುವಲ್ಲಿಯೂ ಮಹಾಲಸ ಅವರ ಈ ಕಾರ್ಯ ಮಾದರಿಯಾಗಿದೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.