ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಸಪ್ತಪದಿ’ಗೆ ಇದೀಗ ಕಂಕಣ ಕೂಡಿ ಬಂದಿದೆ. ಕೊರೋನಾ ಪೂರ್ವದಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ನಡೆಸಲು ಯೋಚನೆ, ಯೋಜನೆ ಸಿದ್ಧಪಡಿಸಿದ್ದ ಸಾಮೂಹಿಕ ವಿವಾಹವನ್ನು ಇದೀಗ ಕೆಲವು ಷರತ್ತುಗಳ ಜೊತೆಗೆ ನಡೆಸಲು ಸರ್ಕಾರ ಹಸಿರು ನಿಶಾನೆ ನೀಡಿದೆ.
ಕೊರೋನಾ ಹಿನ್ನೆಲೆಯಲ್ಲಿ ಐದು ಜೋಡಿಗಿಂತ ಕಡಿಮೆ ನೋಂದಣಿಯಾಗಿರುವ ದೇವಾಲಯಗಳಲ್ಲಿ ಒಂದೇ ದಿನದಲ್ಲಿ ಮದುವೆ ಮುಗಿಸುವಂತೆ ಸೂಚಿಸಲಾಗಿದೆ. 12-23 ಜೋಡಿಗಳಿದ್ದರೆ 2, 3 ದಿನಗಳಲ್ಲಿ ಸಾಮೂಹಿಕ ವಿವಾಹ ನಡೆಸುವುದು, 60 ಕ್ಕಿಂತ ಹೆಚ್ಚು ವಿವಾಹಗಳ ನೋಂದಣಿ ನಡೆದಿದ್ದರೆ ಬೇರೆ ಬೇರೆ ದಿನಾಂಕಗಳನ್ನು ಗೊತ್ತುಪಡಿಸಿ ಅದರನ್ವಯ ವಿವಾಹ ಕಾರ್ಯ ನಡೆಸಲು ಸರ್ಕಾರ ದೇವಾಲಯಗಳಿಗೆ ಸೂಚನೆ ನೀಡಿದೆ.
ಸಪ್ತಪದಿ ವಿವಾಹಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ದಿನಾಂಕಗಳನ್ನು ಗೊತ್ತು ಮಾಡಿದ್ದು ನ. 19, ನ. 27, ಡಿ. 2, ಡಿ. 7, ಡಿ. 10 ರಂದು ಈ ವಿವಾಹಗಳನ್ನು ನಡೆಸಬಹುದಾಗಿದೆ ಎಂದು ಸೂಚಿಸಿದೆ.
ಇನ್ನು ವಿವಾಹದಲ್ಲಿ ಅವರವರ ಸಂಪ್ರದಾಯಕ್ಕೆ ಅನುಗುಣವಾಗಿ ಅಗತ್ಯ ವಸ್ತುಗಳನ್ನು ವಧೂ-ವರರೇ ತರಬೇಕು. ದೇವಾಲಯದಿಂದ ಊಟದ ವ್ಯವಸ್ಥೆ ಇದೆ. ಜೊತೆಗೆ ಚಿನ್ನದ ತಾಳಿ, ವಧುವಿಗೆ 10 ಸಾವಿರ ರೂ., ವರನಿಗೆ 5 ಸಾವಿರ ರೂ. ಸೇರಿದಂತೆ ಒಟ್ಟು 55 ಸಾವಿರ ರೂ. ಗಳ ಪ್ರೋತ್ಸಾಹ ಧನವನ್ನು ಸರ್ಕಾರ ನೀಡಲಿದೆ. ಈ ಮೊತ್ತ ವಿವಾಹವಾದ 2-3 ದಿನಗಳಲ್ಲಿ ಅವರ ಖಾತೆಗೆ ಜಮೆಯಾಗಲಿದೆ ಎಂದೂ ಸರ್ಕಾರ ಮಾಹಿತಿ ನೀಡಿದೆ.
ಕೊರೋನಾ ಪೂರ್ವದಲ್ಲಿ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಸೋಂಕು ಹಬ್ಬುತ್ತಿರುವ ಕಾರಣ ಲಾಕ್ಡೌನ್ ಹೇರಲಾಗಿದ್ದು, ಸಪ್ತಪದಿ ವಿವಾಹ ಮುಂದೂಡಲ್ಪಟ್ಟಿತ್ತು. ಇದೀಗ ಮತ್ತೆ ಸಪ್ತಪದಿಗೆ ದಿನಾಂಕ ನಿಗದಿ ಮಾಡಲಾಗಿದ್ದು ಅಗತ್ಯ ಕೊರೋನಾ ಮುಂಜಾಗ್ರತಾ ಕ್ರಮಗಳ ಜೊತೆಗೆ ಈ ಕಾರ್ಯಕ್ರಮ ನಡೆಸಲು ಸರ್ಕಾರ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.