ಬೆಂಗಳೂರು: ತುರ್ತು ಅಗತ್ಯದ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ, ಆಂಬ್ಯುಲೆನ್ಸ್ ಸೇವೆಗೆ ಏಕಕಾಲಕ್ಕೆ ಕರೆ ಮಾಡಿ ನೆರವು ಪಡೆಯುವ ಅನುಕೂಲವನ್ನು ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಮಾಡಿಕೊಟ್ಟಿದ್ದು, ಒಂದೇ ಭಾರತ, ಒಂದೇ ತುರ್ತು ಕರೆ ಸಂಖ್ಯೆ 112 ಅನ್ನು ಜಾರಿಗೆ ತಂದಿದೆ.
ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನೊಳಗೊಂಡಂತೆ 5 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಈ ಸೇವೆಯನ್ನು ಸಮರ್ಪಕವಾಗಿ ನೀಡುವ ನಿಟ್ಟಿನಲ್ಲಿ 112 ಆ್ಯಪ್ ಅನ್ನು ಸಹ ಬಿಡುಗಡೆ ಮಾಡಲಾಗಿದ್ದು, ಸ್ಮಾರ್ಟ್ ಫೋನ್ನಲ್ಲಿ ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಬಳಕೆ ಮಾಡಲು ಅವಕಾಶ ನೀಡಲಾಗಿದೆ.
ಅಪಘಾತ, ಅಪರಾಧ, ವಿಪತ್ತುಗಳು ಸಂಭವಿಸಿದಾಕ್ಷಣ ಈ ಮಾಹಿತಿ ತಕ್ಷಣವೇ ಪೊಲೀಸ್ ಇಲಾಖೆ, ಆಂಬ್ಯುಲೆನ್ಸ್, ಅಗ್ನಿಶಾಮಕ ಸಿಬ್ಬಂದಿಗಳಿಗೆ ತಲುಪಿಸಿ ತುರ್ತಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. 112 ಆ್ಯಪ್ನಲ್ಲಿ ಬಳಕೆದಾರರು ತಮ್ಮ ವಿಳಾಸ, ಸಂಬಂಧಿಕರು, ಸ್ನೇಹಿತರ ಮೊಬೈಲ್ ಸಂಖ್ಯೆ ದಾಖಲು ಮಾಡಿರಬೇಕು. ಬಳಕೆದಾರರು ಯಾವುದೇ ಅಪಾಯಕ್ಕೆ ಒಳಗಾದ ಸಂದರ್ಭದಲ್ಲಿ ಈ ಆ್ಯಪ್ ತೆರೆದು ಕರೆ ಮಾಡಿದಾಗ ಕೇಂದ್ರ ಕಂಟ್ರೋಲ್ ರೂಂನಲ್ಲಿ ಲೊಕೇಷನ್ ಸಹಿತ ಕರೆ ಹೋಗುತ್ತದೆ. ಮೂರು ಸ್ಟೇಷನ್ಗೆ ಒಂದರಂತೆ ಎಮರ್ಜೆನ್ಸಿ ವಾಹನ ನೀಡಲಾಗಿದ್ದು, ಬಳಕೆದಾರರ ಲೊಕೇಷನ್ಗೆ ಸಮೀಪದಲ್ಲಿರುವ ಸ್ಟೇಷನ್ನ ವಾಹನದ ಮೂಲಕ ಅಪಾಯದಿಂದ ರಕ್ಷಣೆ ಮಾಡಲಾಗುತ್ತದೆ. ಯಾವ ರೀತಿಯ ತೊಂದರೆ ಸಂಭವಿಸಿದೆ ಎಂಬುದರ ಮೇಲೆ ಕರೆಯನ್ನು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಅಥವಾ ಆಂಬ್ಯುಲೆನ್ಸ್ ಸೇವೆಗೆ ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಇದು ಒಳಗೊಂಡಿದೆ.
ಇನ್ನು ಪ್ಯಾನಿಕ್ ಅಲರ್ಟ್ಗಾಗಿ ಸಾಮಾನ್ಯ ಮೊಬೈಲ್ನಲ್ಲಿ 5 ಮತ್ತು 9 ನ್ನು ದೀರ್ಘವಾಗಿ ಒತ್ತಬೇಕು. ಸ್ಮಾರ್ಟ್ ಫೋನ್ನಲ್ಲಿ 3-5 ಬಾರಿ ಒತ್ತಿದಲ್ಲಿ ಬಳಕೆದಾರರ ಕರೆ ಕಂಟ್ರೋಲ್ ರೂಂಗೆ ಸಂಪರ್ಕಿಸುತ್ತದೆ. ಲೊಕೇಷನ್ ಆಧಾರದಲ್ಲಿ ರಕ್ಷಣಾ ಕಾರ್ಯ ನಡೆಯುತ್ತದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.