ನವದೆಹಲಿ: ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜಸ್ಥಾನ, ಗುಜರಾತ್, ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳು ಜಲಾವೃತಗೊಂಡಿದ್ದು, 81 ಜನ ಸಾವನ್ನಪ್ಪಿದರೆ 80 ಲಕ್ಷಕ್ಕೂ ಅಧಿಕ ಜನರು ಪ್ರವಾಹದ ಸಮಸ್ಯೆಗೆ ಸಿಲುಕಿದ್ದಾರೆ.
ಭಾರೀ ಮಳೆಯಿಂದಾಗಿ ಗುಜರಾತ್ನ 14 ಜಿಲ್ಲೆಗಳ ಸುಮಾರು 40 ಲಕ್ಷ ಮಂದಿ ಪ್ರವಾಹಕ್ಕೆ ಸಿಲುಕಿದ್ದಾರೆ. 10 ಲಕ್ಷಕ್ಕೂ ಅಧಿಕ ಆಹಾರ ಪೊಟ್ಟಣಗಳನ್ನು ಪ್ರವಾಹ ಸಂತ್ರಸ್ತರಿಗೆ ವಿತರಿಸಲಾಗಿದ್ದು, ಪೀಡಿತರಿಗೆ ತಾತ್ಕಾಲಿಕ ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ ಹಾಗೂ ಅವಶ್ಯಕತೆಯ ಆಧಾರದ ಮೇಲೆ ಆಹಾರ ಒದಗಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಒಟ್ಟು 17 ತಂಡಗಳನ್ನು ಕಾರ್ಯಾಚರಣೆಗಾಗಿ ನಿಯೋಜನೆ ಮಾಡಲಾಗಿದೆ.
ರಾಜಸ್ಥಾನದಲ್ಲಿ 28 ಜನರು ಸಾವನ್ನಪ್ಪಿದ್ದು, 630 ಜನರನ್ನು ರಕ್ಷಿಸಿರುವ ಬಗ್ಗೆ ವರದಿಯಾಗಿದೆ. ಇಲ್ಲಿಯ ಜಲೋರ್, ಝಲಾವರ್, ಬಾರನ್, ಸಿರೊಹಿ, ಬರ್ಮೇರ್, ದಂಗರ್ಪುರ ಮತ್ತಿತರ ಜಿಲ್ಲೆಗಳಲ್ಲಿ ವಿಪರೀತ ಮಳೆ ಸಂಭವಿಸಿದೆ.
ಪಶ್ಚಿಮ ಬಂಗಾಳದಲ್ಲಿ 48 ಹಾಗೂ ಒಡಿಶಾದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ಬಂಗಾಳದ 12 ಜಿಲ್ಲೆಗಳ 210 ಬ್ಲಾಕ್ಗಳು, ಹಾಗೂ 9,691 ಹಳ್ಳಿಗಳು ಪ್ರವಾಹದಿಂದ ಜಲಾವೃತಗೊಂಡಿವೆ. ಇದರಲ್ಲಿ 36,90,627 ಜನರು ಪ್ರವಾಹ ಪೀಡಿತರಾಗಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರವು ಈ ಭಾರೀ ಮಳೆಗೆ ಕೊಮೆನ್ ಚಂಡಮಾರುತ ಕಾರಣವಾಗಿದೆ ಎಂದು ವರದಿ ಮಾಡಿದೆ.
ಬಂಗಾಳ ಸರ್ಕಾರವು 1537 ಪರಿಹಾರ ಶಿಬಿರಗಳು ಹಾಗೂ 120 ದೋಣಿಗಳನ್ನು ನಿಯೋಜಿಸಿದೆ.
ಒಡಿಶಾದ ಜಾಜ್ಪುರ್, ಮಯೂರ್ಭಂಜ್,ಕ್ಯೋಂಜರ್, ಭದ್ರಕ್, ಬಾಳಾಸೊರ್, ಝಾರ್ಸುಗುಡಾ ಹಾಗೂ ದಿಯೋಗರ್ ಜಿಲ್ಲೆಗಳು ಜಲಾವೃತಗೊಂಡರೆ, 644 ಹಳ್ಳಿಗಳ 4,80,399 ಜನರು ಪ್ರವಾಹ ಪೀಡಿತವಾಗಿದ್ದರೆ. 132 ದೋಣಿಗಳನ್ನೂ ನಿಯೋಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.