ಬೆಂಗಳೂರು: ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ವಲಯ ಅಂಚೆ ಕಛೇರಿಯು ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಯಂತ್ರವನ್ನು ಬಳಕೆ ಮಾಡಲಾರಂಭಿಸಿದೆ.
ಕೊರೋನಾ ಸಂಕಷ್ಟದ ಸಮಯದಲ್ಲಿ ಜನರ ಸಮಯ ಉಳಿಕೆ ಮತ್ತು ಪತ್ರಗಳ ತ್ವರಿತ ವಿಲೇವಾರಿಗೆ ಸಂಬಂಧಿಸಿದಂತೆ ಈ ಕ್ರಮವನ್ನು ಅಂಚೆ ಇಲಾಖೆ ಕೈಗೊಂಡಿದೆ. ನಗರದ ಮ್ಯೂಸಿಯಂ ರಸ್ತೆಯಲ್ಲಿನ ಪೂರ್ವ ವಲಯದ ಅಂಚೆ ಕಛೇರಿಯಲ್ಲಿ ಈ ಯಂತ್ರ ಅಳವಡಿಸಲಾಗಿದೆ. ಇದು ಎಟಿಎಂ ಮಾದರಿಯಲ್ಲಿದೆ. ಜೊತೆಗೆ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಆ್ಯಪ್ ಅನ್ನು ಸಹ ಅಂಚೆ ಇಲಾಖೆ ಅಭಿವೃದ್ಧಿ ಮಾಡಿದೆ. ಇದು ನಿನ್ನೆಯಿಂದಲೇ ಗ್ರಾಹಕರ ಬಳಕೆಗೂ ತೆರೆದುಕೊಂಡಿದೆ.
ಇದನ್ನು ಡಿಜಿಟಲ್ ಇಂಡಿಯಾ ಯೋಜನೆಯಡಿ ಸಿ-ಡಾಕ್ ಬೆಂಗಳೂರು ಮತ್ತು ಕರ್ನಾಟಕ ವೃತ್ತ ಅಂಚೆ ಇಲಾಖೆಗಳ ಸಹಯೋಗದಲ್ಲಿ ರೂಪಿಸಲಾಗಿದೆ. ಈ ಆ್ಯಪ್ ಅನ್ನು ಬಳಸಿ ಜನರು ತಾವಿದ್ದಲ್ಲಿಂದಲೇ ಸುಲಭವಾಗಿ ಅಂಚೆ ವ್ಯವಹಾರಗಳಲ್ಲಿ ತೊಡಗುವುದು ಸಾಧ್ಯ ಎಂದೂ ಅಂಚೆ ಇಲಾಖೆ ಮಾಹಿತಿ ನೀಡಿದೆ. ಇದು ಮಾನವ ಸಂಪರ್ಕ ರಹಿತ ವ್ಯವಸ್ಥೆಯಾಗಿದ್ದು ಕೊರೋನಾ ತಡೆಗಟ್ಟುವಲ್ಲಿಯೂ ಪೂರಕವಾಗಿ ಕೆಲಸ ಮಾಡಲಿದೆ. ನಗರದಲ್ಲಿ ಮೂಲ ಮಾದರಿಯಲ್ಲಿಯೇ ಇದನ್ನು ಅಳವಡಿಸಲಾಗಿದೆ.
ಮುಂದಿನ ದಿನಗಳಲ್ಲಿ ಹೈಕೋರ್ಟ್ ಆವರಣದಲ್ಲಿ ಹಾಗೂ ಇತರ ಪ್ರದೇಶಗಳಲ್ಲಿ ಅಳವಡಿಕೆ ಮಾಡಲು ಪೂರಕ ಚಿಂತನೆಗಳು ನಡೆಯುತ್ತಿವೆ ಎಂದು ಇಲಾಖೆ ತಿಳಿಸಿದೆ. ಈ ಕಿಯೋಸ್ಕ್ ಕನ್ನಡ, ಇಂಗ್ಲಿಷ್, ಹಿಂದಿ ಈ ಮೂರು ಭಾಷೆಗಳಿಗೆ ಪ್ರತಿಕ್ರಿಯೆ ನೀಡುತ್ತದೆ. ಸ್ಪೀಡ್ ಪೋಸ್ಟ್ ಕಾಯ್ದಿರಿಸಲು ನಾವಿದನ್ನು ಬಳಕೆ ಮಾಡಬಹುದು. ಡಿಜಿಟಲ್ ಪಾವತಿಯ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.