ಕೊರೋನಾ ಸಾಂಕ್ರಾಮಿಕ ಜಗತ್ತಿಗೆ ಆವರಿಸಿಕೊಂಡ ಬಳಿಕ ಮನುಷ್ಯನ ಜೀವನ ಕ್ರಮದಲ್ಲೇ ಬದಲಾವಣೆಯ ಗಾಳಿ ಬೀಸಿದೆ. ಸಮಾಜದ ಹೆಚ್ಚಿನ ಕ್ಷೇತ್ರಗಳಲ್ಲಿ ಬದಲಾವಣೆಗಳು ಆಗಿವೆ, ಆಗುತ್ತಲೇ ಇವೆ. ಶಿಕ್ಷಣ ಕ್ಷೇತ್ರ ಸಹ ಇದಕ್ಕೆ ಹೊರತಾಗಿಲ್ಲ.
ಭಾರತದ ಶಿಕ್ಷಣ ಕ್ರಮದಲ್ಲಿ ಸಹ ಮಹತ್ವದ ಬದಲಾವಣೆಗಳಾಗುವುದಕ್ಕೂ ಕೊರೋನಾ ಸೋಂಕು ಕಾರಣವಾಗಿದೆ. ಕೊರೋನಾ ಕಪಿಮುಷ್ಟಿಯ ಕಾರಣಕ್ಕೆ ಶಾಲಾ ಕಾಲೇಜುಗಳ ಆರಂಭ ತಡವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಆನ್ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ನರ್ಸರಿ ಮಕ್ಕಳಿಂದ ಹಿಡಿದು, ಉನ್ನತ ಶಿಕ್ಷಣ ವಲಯದಲ್ಲಿಯೂ ಆನ್ಲೈನ್ ಪಾಠ ಪ್ರವಚನಗಳು ನಡೆಯುತ್ತಿವೆ. ಶಿಕ್ಷಣ ಮಕ್ಕಳ ಜೀವನದ ಅತೀ ಮುಖ್ಯ ಭಾಗವೇ ಹೌದು. ಆದರೆ ಕೊರೋನಾ ಸಂಕಷ್ಟದ ಕಾರಣದಿಂದ ನಡೆಯುತ್ತಿರುವ ಆನ್ಲೈನ್ ತರಗತಿಗಳು ಮಕ್ಕಳ ಶೈಕ್ಷಣಿಕ ಅಭಿವೃದ್ಧಿ, ಆರೋಗ್ಯ, ಜ್ಞಾನ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಎಷ್ಟರ ಮಟ್ಟಿಗೆ ಪೂರಕ ಎಂಬ ಅಂಶದ ಬಗ್ಗೆಯೂ ನಾವು ಗಮನ ಹರಿಸಬೇಕಿದೆ. ಇದು ಕರ್ತವ್ಯ ಸಹ ಹೌದು.
ಇತ್ತೀಚೆಗೆ ಸಾಮಾಜಿಕ ಜನರಿಗೆ ಜಾಲತಾಣದಲ್ಲಿ ಕಣ್ಣಾಡಿಸುತ್ತಿದ್ದಾಗ ಓದಿದ ಸುದ್ದಿ, ಆನ್ಲೈನ್ ತರಗತಿಯ ಸಂದರ್ಭದಲ್ಲಿ ತನ್ನ ಮಗು ಅಧ್ಯಾಪಕರು ಕೇಳಿದ ಪ್ರಶ್ನೆಗೆ ಉತ್ತರ ನೀಡಿಲ್ಲ ಎಂದು ಪೆನ್ಸಿಲ್ ನಿಂದ ಆ ಮಗುವಿಗೆ ಚುಚ್ಚಿ ಹಿಂಸೆ ನೀಡಿದ ಘಟನೆ. ಮಕ್ಕಳು ತರಗತಿಯಲ್ಲಿ ಕಲಿಯುವುದಕ್ಕೂ, ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಕಲಿಯುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೇಲಿನ ಘಟನೆ ನೋಡಿದಾಗ, ಸದ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಮಕ್ಕಳಿಗೆ ಹೊಡೆದರೆ ದೊಡ್ಡ ಅಪರಾಧ ಎಂಬಂತೆ ಇದೆ. ಆದರೆ ಆನ್ಲೈನ್ ತರಗತಿ ನೆಪದಲ್ಲಿ ಮನೆಯವರೇ ಮಕ್ಕಳನ್ನು (ಕೆಲವು ಕಡೆಗಳಲ್ಲಿ) ಹಿಂಸಿಸಿದರೆ ಅದಕ್ಕೇನು ಹೇಳುವುದು. ಇದು ಒಂದೇ ಘಟನೆಯಲ್ಲ. ಬದಲಾಗಿ ಆನ್ಲೈನ್ ತರಗತಿಗಳ ಸಂದರ್ಭದಲ್ಲಿ ಇಂತಹ ಅದೆಷ್ಟೋ ಘಟನೆಗಳು ನಮ್ಮ ಸುತ್ತ ಮುತ್ತಲಲ್ಲೇ ನಡೆಯುತ್ತಿರಬಹುದು. ಈ ವಿಚಾರವನ್ನು ಗಮನಿಸಿದಾಗ ಏನೂ ಅರಿಯದ ಪುಟ್ಟ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಅವರ ಮಾನಸಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದೇ ಹೇಳಬಹುದು.
ಕೊರೋನಾ ಪೂರ್ವದಲ್ಲಿ ಮಕ್ಕಳು ಶಾಲಾ ಕಾಲೇಜುಗಳಿಗೆ ಮೊಬೈಲ್ ಕೊಂಡುಹೋಗುವಂತಿಲ್ಲ ಎಂಬ ಕಾನೂನುಗಳೇ ಇತ್ತು. ಆದರೆ ಈಗ ಶಿಕ್ಷಣವೇ ಮೊಬೈಲ್ ಮೂಲಕ ಎಂಬಷ್ಟರ ಮಟ್ಟಿಗೆ ಬದಲಾವಣೆಯಾಗಿದೆ. ಇದು ಶಾಲೆಯ ಕೊಠಡಿಯೊಳಗೆ, ಅಧ್ಯಾಪಕರ ಸಾಂಗತ್ಯದಲ್ಲಿ ದೊರೆಯುವ ಮೌಲ್ಯಯುತ ಶಿಕ್ಷಣಕ್ಕೆ ಸರಿಸಮವಾಗಬಲ್ಲದೇ ಎಂದು ಯೋಚಿಸಿದರೆ, ಅಲ್ಲಿ ಶಿಕ್ಷಣ ದೊರೆಯುವುದೇನೋ ನಿಜ. ಆದರೆ ತರಗತಿಗಳ ನಡುವೆ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೂಲಕ ತಿಳಿಯುತ್ತಿದ್ದ ಅನುಭವ, ಅನುಭಾವದ ಪಾಠಗಳು ದೊರೆಯುವುದು ಸಾಧ್ಯವೇ ಎಂಬ ಬಗ್ಗೆಯೂ ನಾವು ಚಿಂತನೆ ಮಾಡಬೇಕಾಗಿದೆ.
ಇನ್ನು ಆರೋಗ್ಯದ ವಿಚಾರಕ್ಕೆ ಬಂದರೆ ಆನ್ಲೈನ್ ತರಗತಿಯ ಸಂದರ್ಭದಲ್ಲಿ ಮೊಬೈಲ್ ಅಥವಾ ಇನ್ಯಾವುದೇ ಸಾಧನಗಳ ಮೂಲಕ ಹೊರಡುವ ವಿಕಿರಣಗಳು ಕಣ್ಣು, ಮೆದುಳಿನ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಉಂಟು ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿಯೂ ಆನ್ಲೈನ್ ತರಗತಿಗಳು ಮಕ್ಕಳಿಗೆ ಪೂರಕವಲ್ಲ ಎಂದೇ ಹೇಳಬಹುದಾಗಿದೆ. ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿರುವ ಮಕ್ಕಳಿಗೆ ಹೇಳುವುದಾದರೆ ಅವರಿಗೆ ಯಾವುದನ್ನು, ಯಾವ ಮಿತಿಯಲ್ಲಿ ಬಳಸಬೇಕು ಎಂಬ ಜ್ಞಾನವಿರುತ್ತದೆ. ಸರಿ, ತಪ್ಪುಗಳನ್ನು ತಿಳಿದುಕೊಳ್ಳುವ ಶಕ್ತಿಯೂ ಇರುತ್ತದೆ. ಆದರೆ ಅವರ ಆರೋಗ್ಯದ ದೃಷ್ಟಿಯಿಂದ ಗಮನಿಸಿದರೆ ಕಣ್ಣಿಗೆ ಮೊಬೈಲ್, ಟ್ಯಾಬ್, ಕಂಪ್ಯೂಟರ್ ಏನೇ ಇರಲಿ ಹೆಚ್ಚು ಬಳಕೆ ಮಾಡುವುದರಿಂದ ಹಾನಿ ಸಂಭವಿಸುತ್ತದೆ. ಇದು ವೈದ್ಯಕೀಯ ಲೋಕವೇ ಸಂಶೋಧನೆಗಳ ಮೂಲಕ ಕಂಡುಕೊಂಡ ಸತ್ಯ. ಪುಟಾಣಿ ಮಕ್ಕಳಿಗೆ ಈ ಬಗ್ಗೆ ಅರಿವಿರುವುದಿಲ್ಲ. ಅಲ್ಲದೆ ಎಳೆಯ ದೇಹಗಳ ಮೇಲೆ ಇಂತಹ ಅಡ್ಡ ಪರಿಣಾಮ ಬೀರುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
ಜೊತೆಗೆ ಆನ್ಲೈನ್ ತರಗತಿಗಳ ಕಾರಣದಿಂದ ಮಕ್ಕಳು ಮೊಬೈಲ್ ದಾಸರಾಗಿಯೂ ಬದಲಾಗುತ್ತಿದ್ದಾರೆ. ಒಂದು ಮನೆಯಲ್ಲಿ ಎಷ್ಟು ಮಕ್ಕಳಿದ್ದಾರೆಯೋ, ಕೊರೋನಾ ನಂತರದಲ್ಲಿ ಆನ್ಲೈನ್ ತರಗತಿಗಳ ಹೆಸರಿನಲ್ಲಿ ಅಷ್ಟೂ ಮಕ್ಕಳ ಕೈಯಲ್ಲಿ ಇಂದು ಮೊಬೈಲ್ ರಾರಾಜಿಸುತ್ತಿದೆ. ಇದಕ್ಕೆ ವಯಸ್ಸಿನ ಹಂಗಿಲ್ಲ. ಹೀಗಿರುವಾಗ ಹೆತ್ತವರಿಗೆ ಸಹ ತಮ್ಮ ಮಕ್ಕಳು ಮೊಬೈಲ್ ಅನ್ನು ಯಾವ ರೀತಿಯಲ್ಲಿ ಬಳಕೆ ಮಾಡುತ್ತಿದ್ದಾರೆ. ಕೇವಲ ಆನ್ಲೈನ್ ತರಗತಿಗಷ್ಟೇ ಉಪಯೋಗಿಸುತ್ತಿದ್ದಾರೆಯೋ ಅಥವಾ ಬೇರಿನ್ನೇನಾದರೂ ಚಟುವಟಿಕೆ ನಡೆಸುತ್ತಿದ್ದಾರೆಯೋ ಎಂಬುದರ ಬಗ್ಗೆ ಗಮನ ಹರಿಸುವುದು ಸಹ ಸವಾಲಿನ ವಿಚಾರವಾಗಿ ಪರಿಣಮಿಸಿದೆ ಎಂದರೂ ತಪ್ಪಾಗಲಾರದು.
ಕೊರೋನಾ ಇದೆ, ಮಕ್ಕಳ ಬದುಕಿನ ಅವಶ್ಯಕತೆ ಮತ್ತು ಅನಿವಾರ್ಯತೆಯಾದ ಶಿಕ್ಷಣವನ್ನು ಅವರಿಗೆ ಒದಗಿಸುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಸಹ ಬೇಕು. ಆನ್ಲೈನ್ ಶಿಕ್ಷಣ ಕ್ರಮವನ್ನು ಈ ನಿಟ್ಟಿನಲ್ಲಿಯೇ ಪೂರಕ ಪೂರ್ವ ಸಿದ್ಧತೆ, ಮುಂಜಾಗ್ರತಾ ಕ್ರಮಗಳ ಮೂಲಕವೇ ಜಾರಿಗೆ ತಂದಿದೆ ನಮ್ಮ ಸರ್ಕಾರ. ಆದರೆ ಮಕ್ಕಳ ಮಾನಸಿಕ, ದೈಹಿಕ ಆರೋಗ್ಯದ ಮೇಲೆಯೂ ಇದು ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಜೊತೆಗೆ ಕೆಲವು ಹೆತ್ತವರು ತಾವು ಆರ್ಥಿಕ ಕಷ್ಟ ಅನುಭವಿಸುತ್ತಿದ್ದರೂ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆ ಆಗಬಾರದು ಎಂಬ ದೃಷ್ಟಿಯಿಂದ ಮೊಬೈಲ್ ಕೊಡಿಸಿದ್ದಾರೆ. ಆದರೆ ಇಂದು ಹೆಚ್ಚಿನ ಕಡೆಗಳಲ್ಲಿ ಮಕ್ಕಳು ನಿದ್ದೆ, ಹಸಿವು ಮರೆತು ಮೊಬೈಲ್ ಮುಂದೆ ಕೂರುವಂತಾಗಿದೆ ಎಂಬುದು ಕಣ್ಣಿಗೆ ಕಾಣುವ ಸತ್ಯ.
ಇನ್ನೊಂದು ವಿಚಾರ ತೀರಾ ಬಡ ಮಕ್ಕಳಿಗೆ ಮೊಬೈಲ್ ಕೊಳ್ಳಲು ಸಾಧ್ಯವಾಗುವುದಿಲ್ಲ. ಗ್ರಾಮೀಣ ಭಾಗಗಳಲ್ಲಿ ಇಂಟರ್ನೆಟ್ ಸಮಸ್ಯೆ ಮೊದಲಾದವುಗಳಿಂದ ಆನ್ಲೈನ್ ಶಿಕ್ಷಣದಿಂದ ಕೆಲವು ಮಕ್ಕಳು ವಂಚಿತರಾಗುವಂತಾಗಿದೆ. ಈ ದೃಷ್ಟಿಯಿಂದ ನೋಡಿದಾಗಲೂ ಆನ್ಲೈನ್ ಶಿಕ್ಷಣ ಕೆಲವು ಮಕ್ಕಳ ಶಿಕ್ಷಣದ ಅವಕಾಶವನ್ನು ಸರಿಯಾದ ರೀತಿಯಲ್ಲಿ ತುಂಬಿ ಕೊಡಲು ಅಸಮರ್ಥ ಎನ್ನಬಹುದು. ಆದರೆ ಇಂತಹ ವಿಚಾರಗಳು ಗಮನಕ್ಕೆ ಬಂದ ತಕ್ಷಣ ಕೇಂದ್ರ, ರಾಜ್ಯ ಸರ್ಕಾರಗಳು ಅಂತಹ ವಿದ್ಯಾರ್ಥಿಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸಿಕೊಡಲು ಮುಂದಾಗಿರುವುದು ಸ್ವಾಗತಾರ್ಹ.
ಅದೇನೇ ಇರಲಿ, ಕೊರೋನಾಗೆ ಸೂಕ್ತ ಪರಿಹಾರ ಸಿಗುವ ವರೆಗೂ ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆ ತೊಳಲಾಟ ಇದ್ದೇ ಇದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವುದು ನಾವಂದುಕೊಂಡಷ್ಟು ಸರಳ ವಿಚಾರವಲ್ಲ. ಹಾಗೆಂದು ಶಾಲಾರಂಭ ಮಾಡುವ ಪರಿಸ್ಥಿತಿಯೂ ನಿರ್ಮಾಣವಾಗಿಲ್ಲ. ನಾವು ಜಾಗರೂಕರಾದಲ್ಲಿ ಮಾತ್ರ ಕೊರೋನಾ ನಿಯಂತ್ರಣ, ಮತ್ತೆ ನಮ್ಮ ಮಕ್ಕಳಿಗೆ ಆರೋಗ್ಯಪೂರ್ಣ ಶಿಕ್ಷಣ ದೊರೆಯುವುದು ಸಾಧ್ಯವಾಗುತ್ತದೆ.
ಇದೆಲ್ಲಕ್ಕೂ ಇರುವ ಏಕೈಕ ಪರಿಹಾರ ಜನಸಾಮಾನ್ಯರು ಕೊರೋನಾಗೆ ಲಸಿಕೆ ದೊರೆಯುವ ವರೆಗಾದರೂ ಆದಷ್ಟು ಸಾರ್ವಜನಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಅನವಶ್ಯಕವಾಗಿ ಸಾರ್ವಜನಿಕ ಪ್ರದೇಶದಲ್ಲಿ ಓಡಾಟ ನಡೆಸದೇ ಇರುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಜೊತೆಗೆ ಸರ್ಕಾರ, ಆರೋಗ್ಯ ಇಲಾಖೆ ತಿಳಿಸಿದ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಮೂಲಕ ಸೋಂಕು ತಡೆಗೆ ಎಚ್ಚರಿಕೆ ವಹಿಸುವುದು.
ಹೀಗಾದಲ್ಲಿ ಮಾತ್ರ ಕೊರೋನಾ ಸೋಂಕಿನಿಂದ ನಾವು ರಕ್ಷಣೆ ಮಾಡಿಕೊಳ್ಳಲು ಸಾಧ್ಯ. ಜೊತೆಗೆ ನಮ್ಮ ಮಕ್ಕಳು ಮತ್ತೆ ಮೊದಲಿನಂತೆ ಆರೋಗ್ಯಪೂರ್ಣ ಶಿಕ್ಷಣ ಪಡೆಯುವುದು ಸಾಧ್ಯವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.