ಬೆಂಗಳೂರು: ರಾಜ್ಯದ ಬಡವರ, ನಿರ್ಗತಿಕರ ನೆರವಿಗಾಗಿ ಎಟಿಎಂ ವಿಧಾನದಲ್ಲಿ ಅಕ್ಕಿ ಪೂರೈಕೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ. ಈಗಾಗಲೇ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನೀರು ವಿತರಣಾ ವ್ಯವಸ್ಥೆಯಂತೆಯೇ, ನಾಣ್ಯಗಳನ್ನು ಹಾಕಿದಾಗ ನಿರ್ದಿಷ್ಟ ಪ್ರಮಾಣದ ಅಕ್ಕಿ ನೀಡುವ ಯಂತ್ರಗಳನ್ನು ಸ್ಥಾಪಿಸುವ ಮೂಲಕ ಸಾರ್ವಜನಿಕರಿಗೆ ನೆರವಾಗುವತ್ತ ಚಿತ್ತ ಹರಿಸಿದೆ.
ಈ ಯೋಜನೆ ಜಾರಿಯಾದಲ್ಲಿ ಸದ್ಯ ಪಿಡಿಎಸ್ (ಸಾರ್ವಜನಿಕ ವಿತರಣಾ ವ್ಯವಸ್ಥೆ) ಮೂಲಕ ಅಕ್ಕಿ ಪಡೆದುಕೊಳ್ಳುತ್ತಿರುವ ಜನರು, ಪಡಿತರ ವಿತರಣಾ ಕೇಂದ್ರಗಳಿಗೆ ತೆರಳದೆಯೇ ಯಾವುದೇ ಸಂದರ್ಭದಲ್ಲಿ ಬೇಕಾದರೂ ಅಕ್ಕಿ ಪಡೆಯುವುದಕ್ಕೆ ಸಾಧ್ಯವಾಗಲಿದೆ. ಪ್ರಸ್ತುತ ಈ ತಂತ್ರಜ್ಞಾನ ಬಳಕೆ ಇಂಡೋನೇಷ್ಯಾ ಮತ್ತು ವಿಯೆಟ್ನಾಂಗಳಲ್ಲಿ ಜಾರಿಯಲ್ಲಿದೆ. ಕೊರೋನಾ ಸಂಕಷ್ಟದ ಅವಧಿಯಲ್ಲಿ ಈ ದೇಶಗಳು ಬಡ ಸಾರ್ವಜನಿಕರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಈ ತಂತ್ರಜ್ಞಾನವನ್ನು ಜಾರಿಗೊಳಿಸಿದ್ದವು. ಸದ್ಯ ಇದೇ ವ್ಯವಸ್ಥೆಯನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸುವ ನಿಟ್ಟಿನಲ್ಲಿ ಚಿಂತನೆಗಳು ನಡೆಯುತ್ತಿವೆ.
ಈ ಸಂಬಂಧ ಮಾತನಾಡಿರುವ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ, ರಾಜ್ಯದ ಬಡ ಜನರಿಗೆ ನೆರವಾಗಲು ಇಂತಹ ಅಕ್ಕಿ ವಿತರಣಾ ಎಟಿಎಂಗಳನ್ನು ಅಳವಡಿಸುವ ಪ್ರಸ್ತಾಪ ಇರುವುದಾಗಿಯೂ ತಿಳಿಸಿದ್ದಾರೆ. 100,200 ಮತ್ತು 500 ಕೆಜಿಗಳಷ್ಟು ಅಕ್ಕಿಯನ್ನು ಶೇಖರಿಸಿ ವಿತರಿಸುವ ಸಾಮರ್ಥ್ಯ ಇರುವ ತಂತ್ರಜ್ಞಾನ ಇದಾಗಿದೆ. ಈ ಯಂತ್ರಕ್ಕೆ ನಾಣ್ಯ ಹಾಕಿದ ಸಂದರ್ಭದಲ್ಲಿ ಆ ಬೆಲೆಗೆ ದೊರೆಯುವ ಅಕ್ಕಿಯನ್ನು ಯಂತ್ರ ನೀಡುತ್ತದೆ. ಇದರಲ್ಲಿ ತುಂಬಿದ ಅಕ್ಕಿ ಖಾಲಿಯಾದ ಕೂಡಲೇ, ಮತ್ತೆ ಅದನ್ನು ತುಂಬಿಸುವುದಕ್ಕೂ ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ. ಈ ಯಂತ್ರದ ಕಾರ್ಯ ವೈಖರಿಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದರ ಸಾಧ್ಯತೆಗಳನ್ನು ಪರಿಶೀಲನೆ ಮಾಡಲು ಆರಂಭದಲ್ಲಿ ಒಂದೆರಡು ಕಡೆಗಳಲ್ಲಿ ಈ ಯಂತ್ರವನ್ನು ಅಳವಡಿಸಲಾಗುತ್ತದೆ. ಅವುಗಳ ಫಲಿತಾಂಶವನ್ನು ಆಧರಿಸಿ ಮತ್ತೆ ಉಳಿದ ಭಾಗಗಳಲ್ಲಿ ಇದನ್ನು ಸ್ಥಾಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಪಡಿತರ ವ್ಯವಸ್ಥೆಯ ಮೂಲಕ ಅಕ್ಕಿ ಪಡೆಯುವ ಫಲಾನುಭವಿಗಳಲ್ಲಿ ಹೆಚ್ಚಿನವರು ದೈನಂದಿನ ಕೂಲಿ ಕಾರ್ಮಿಕರಾಗಿದ್ದು, ಈ ಯಂತ್ರಗಳಿಂದಾಗಿ ಅವರಿಗೆ ಸಹಾಯವಾಗಲಿದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕೆಲಸಕ್ಕೆ ರಜೆ ಹಾಕದೆಯೇ ಪಡಿತರ ಪಡೆಯಲು ಸಾಧ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಪಡಿತರ ಚೀಟಿದಾರರಿಗೆ ಇದರಲ್ಲಿ ಬಯೋ ಮೆಟ್ರಿಕ್ ವ್ಯವಸ್ಥೆ ರೂಪಿಸಲಾಗುವುದಾಗಿಯೂ ಸಚಿವರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಬಿಪಿಎಲ್ ಕಾರ್ಡುದಾರರಿಗೆ ಅನ್ನ ಭಾಗ್ಯ ಯೋಜನೆಯ ಮೂಲಕ 5 ಕೆಜಿ ಅಕ್ಕಿ ಒಬ್ಬರಿಗೆ ಎಂಬಂತೆ ನೀಡಲಾಗುತ್ತಿದೆ. ಇದನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ. ಕೊರೋನಾ ಅವಧಿಯಲ್ಲಿ ಎಪಿಎಲ್ ಕಾರ್ಡುದಾರರಿಗೆ ಕೆ.ಜಿ.ಗೆ 15 ರೂ.ಗಳಂತೆ ಅಕ್ಕಿ ವಿತರಿಸಲಾಗುತ್ತಿದೆ. ವಲಸಿಗರಿಗೆ ಆಧಾರ್ ಕಾರ್ಡ್ ಆಧಾರವಾಗಿಟ್ಟುಕೊಂಡು ಪಡಿತರ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.