ಬೆಂಗಳೂರು: ವನ್ಯಜೀವಿ ಸಂರಕ್ಷಣೆಗಾಗಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ನೀಡಿರುವ ಕೊಡುಗೆಯನ್ನು ಗುರುತಿಸಲು, ಆನೆ ಮರಿಗೆ ‘ಸುಧಾ’ ಎಂದು ಹೆಸರಿಡಲು ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಬನ್ನೇರುಘಟ್ಟ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.
ಈ ಸಂಬಂಧ ಸುಧಾ ಮೂರ್ತಿ ಅವರ ಜೊತೆಗೂ ಮಾತುಕತೆ ನಡೆಸಲಾಗಿದ್ದು, ಈ ವಿಚಾರಕ್ಕೆ ಅವರೂ ಸಮ್ಮತಿ ಸೂಚಿಸಿದ್ದಾರೆ ಎಂದು ವನಶ್ರೀ ಅವರು ಮಾಹಿತಿ ನೀಡಿದ್ದಾರೆ. ಆಗಸ್ಟ್ 17 ರಂದು ಉದ್ಯಾನವನದ ಸುವರ್ಣ ಎಂಬ 44 ವರ್ಷದ ಆನೆ ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದೆ. ಆಗಸ್ಟ್ 19 ರಂದು ಇನ್ಫೋಸಿಸ್ನ ಸುಧಾ ಮೂರ್ತಿ ಅವರು ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಈ ವರೆಗೆ ಬನ್ನೇರುಘಟ್ಟ ಉದ್ಯಾನವನಕ್ಕೆ ಇನ್ಫೋಸಿಸ್ ಹಲವಾರು ಕೊಡುಗೆಗಳನ್ನು ನೀಡಿದೆ. ಸಾಮಾಜಿಕ ಅಭಿವೃದ್ಧಿಯ ಕಳಕಳಿ ಇರುವ ಸುಧಾ ಮೂರ್ತಿ ಅವರ ಸಮಾಜ ಸೇವೆಯ ನೆನಪಿಗಾಗಿ ಆನೆ ಮರಿಗೆ ಸುಧಾ ಎಂದು ಹೆಸರಿಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಆನೆ ಮರಿಯ ಜನನದೊಂದಿಗೆ ಸದ್ಯ ಉದ್ಯಾನವನದಲ್ಲಿ ಒಟ್ಟು 25 ಆನೆಗಳಿರುವುದಾಗಿಯೂ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 101 ವಿವಿಧ ಜಾತಿಗಳ ಸುಮಾರು 2,300 ಪ್ರಾಣಿಗಳಿವೆ. 731.88 ಹೆಕ್ಟೇರ್ ಉದ್ಯಾನದಲ್ಲಿ ಮೃಗಾಲಯ, ಸಫಾರಿ, ಚಿಟ್ಟೆ ಪಾರ್ಕ್ ಮತ್ತು ಸಂರಕ್ಷಣಾ ಕೇಂದ್ರ ಇದೆ. ಹುಲಿ ಆವರಣ, ಜೀಬ್ರಾ ಆವರಣ, ಜಿರಾಫೆ ಆವರಣ, ಬೋರ್ವೆಲ್ ಮತ್ತು ತಮ್ಮ ಸಂಪನ್ಮೂಲಗಳ ಮೂಲಕ ಕುಡಿಯುವ ನೀರು ಸಂಗ್ರಹ ಹಾಗೂ ಸಿಬ್ಬಂದಿ ಕಲ್ಯಾಣಕ್ಕೆ ಇನ್ಫೋಸಿಸ್ ಫೌಂಡೇಶನ್ ಕೊಡುಗೆ ನೀಡಿದೆ. ಈ ಎಲ್ಲಾ ಕೆಲಸಗಳ ಮೇಲ್ವಿಚಾರಣೆ ಯನ್ನು ಸುಧಾ ಮೂರ್ತಿ ಅವರೇ ವೈಯಕ್ತಿಕವಾಗಿ ಭೇಟಿ ನೀಡಿ ನಡೆಸಿಕೊಟ್ಟಿದ್ದಾರೆ. ಅವರ ಸರಳತೆ, ಕಾರ್ಯಪರತೆ ಎಲ್ಲರಿಗೂ ಮಾದರಿ ಎಂದೂ ವನಶ್ರೀ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.