ಮಂಗಳೂರು/ಉಡುಪಿ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ ಒಣಕಸವನ್ನು ಬಳಸಿ ಸುಮಾರು 5 ಮೆಗಾ ವ್ಯಾಟ್ ಗಳಷ್ಟು ವಿದ್ಯುತ್ ತಯಾರಿಸಲು ಪೂರಕವಾದ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ.
ಕರ್ನಾಟಕ ರಾಜ್ಯ ವಿದ್ಯುತ್ ನಿಗಮ (ಕೆಪಿಸಿಎಲ್) ಉಭಯ ಜಿಲ್ಲೆಗಳಲ್ಲಿ ಪ್ರತಿ ನಿತ್ಯ ಉತ್ಪತ್ತಿಯಾಗುವ 300 ಟನ್ಗಳಷ್ಟು ಒಣ ಕಸವನ್ನು ಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಮಾಡಲು ಸಿದ್ಧತೆ ನಡೆಸಿದೆ. ಕಸದಲ್ಲಿರುವ ಬೇರ್ಪಡಿಸಲು ಸಾಧ್ಯವಿರುವ ಪ್ಲಾಸ್ಟಿಕ್ಗೆ ಸಂಬಂಧಿಸಿದಂತಹ ಎಲ್ಲಾ ರೀತಿಯ ವಸ್ತುಗಳು, ಮರದ ಕಸ, ಬಟ್ಟೆ, ಟಯರ್ ಮೊದಲಾದವುಗಳನ್ನು ಬಳಕೆ ಮಾಡುವ ಮೂಲಕ ವಿದ್ಯುತ್ ತಯಾರಿಸಲು ರೂಪು ರೇಶೆಗಳನ್ನು ಸಿದ್ಧ ಪಡಿಸಿಕೊಂಡಿದೆ.
ಜಿಲ್ಲೆಗಳಲ್ಲಿ ದಿನವೂ ಸುಮಾರು 500 ಟನ್ಗಳಷ್ಟು ಒಣ ಕಸ ಲಭ್ಯವಾಗುತ್ತಿದೆ. ಈ ಕಸದಿಂದ ಸುಮಾರು 11 ವ್ಯಾಟ್ಗಳಷ್ಟು ವಿದ್ಯುತ್ ಉತ್ಪಾದನೆಯ ಗುರಿಯನ್ನು ಈ ಯೋಜನೆಯ ಮೂಲಕ ಹೊಂದಲಾಗಿದೆ. ಸುಮಾರು 15 ಎಕರೆ ಪ್ರದೇಶದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ. 5 ವ್ಯಾಟ್ ವಿದ್ಯುತ್ ಉತ್ಪಾದನೆಗೆ 300 ಟನ್ಗಳಷ್ಟು ಒಣ ಕಸದ ಅವಶ್ಯಕತೆ ಇದೆ. ಮಂಗಳೂರು ಮತ್ತು ಉಡುಪಿ ಎರಡೂ ಪಾಲಿಕೆಗಳಿಂದ ಕ್ರಮವಾಗಿ ಕಸ ಸಂಗ್ರಹಿಸಿ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ ಎಂದು ಸಂಬಂಧಿಸಿದ ಮೂಲಗಳು ತಿಳಿಸಿವೆ.
ಈ ಹಿಂದೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಮಂಗಳೂರಿನ ತ್ಯಾಜ್ಯ ದುರಂತ ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭ ಈ ಯೋಜನೆಗೆ ಸಂಬಂಧಿಸಿದಂತೆ ಅವಲೋಕನ ನಡೆಸಿದ್ದರು. ಜೊತೆಗೆ ಕೆಪಿಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್ ಅವರಿಗೂ ಪತ್ರ ಬರೆದಿದ್ದರು. ಅದರಂತೆ ಕೆಪಿಸಿಎಲ್ ಅಧಿಕಾರಿಗಳು ಈ ಸಂಬಂಧ ಮಂಗಳೂರಿಗೆ ಬಂದು ಅವಲೋಕನ ನಡೆಸಿ, ದ.ಕ. ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಮಂಗಳೂರು ಮತ್ತು ಉಡುಪಿಗಳೆರಡರ ಒಣ ಕಸ ಬಳಸಿದಲ್ಲಿ ಈ ಯೋಜನೆ ಸಾಧ್ಯ ಎಂಬುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದೀಗ ವಿಸ್ತಾರವಾಗಿ ಈ ಯೋಜನೆ ರೂಪುಗೊಳ್ಳುವ ಹಂತದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ ಮಂಗಳೂರಿನ ತ್ಯಾಜ್ಯ ಬಳಸಿ ಇಂಧನ ಉತ್ಪಾದಿಸುವ ಘಟಕ ಆರಂಭ ಮಾಡಲು ಉದ್ದೇಶವಿತ್ತು. ಈ ಹಿನ್ನೆಲೆಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಪಚ್ಚನಾಡಿಯಲ್ಲಿ ಯೋಜನೆ ರೂಪಿಸುವ ಸಂಬಂಧ ರೂಪುರೇಶೆಯೂ ಸಿದ್ಧಗೊಂಡಿತ್ತು. ಆದರೆ ಈ ಯೋಜನೆ ಕಡತದಲ್ಲೇ ಉಳಿದು ಬಿಟ್ಟಿತ್ತು. ಈಗ ಇದೇ ಯೋಜನೆ ಕಾರ್ಯರೂಪಕ್ಕೆ ಬರಲು ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.