ಮುಲ್ಕಿ: ‘ಯಕ್ಷ ಛಂದೋಬ್ರಹ್ಮ’ ಎಂಬ ಬಿರುದಿನಿಂದ ಖ್ಯಾತರಾಗಿದ್ದ ಶಿಮಂತೂರು ನಾರಾಯಣ ಶೆಟ್ಟಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಶಿಕ್ಷಕರಾಗಿ, ವಿದ್ವಾಂಸರಾಗಿ, ಬರಹಗಾರರಾಗಿ, ಯಕ್ಷಗಾನ ಪ್ರಸಂಗ ರಚನೆಕಾರರಾಗಿ ಇವರು ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಎಳತ್ತೂರು ದಿವಂಗತ ಅಚ್ಚಣ್ಣ ಶೆಟ್ಟಿ ಹಾಗೂ ನಂದಳಿಕೆ ಕಮಲಾಕ್ಷ ದಂಪತಿಯ ಪುತ್ರರಾಗಿದ್ದಾರೆ.
‘ಯಕ್ಷಗಾನ ಛಂದೋಬುಧಿ’ ಎಂಬ ಇವರ ಕೃತಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ದೊರೆತಿದೆ. ಇವರು ಪಾರ್ತಿಸುಬ್ಬ ಪ್ರಶಸ್ತಿಯಿಂದಲೂ ಪುರಸ್ಕೃತರಾಗಿದ್ದಾರೆ.
ತಮ್ಮ 14ನೇ ವಯಸ್ಸಿನಲ್ಲಿ ಇವರು ‘ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ’ ಪ್ರಸಂಗವನ್ನು ರಚಿಸಿದ್ದರು. ಯಕ್ಷಗಾನ ಸಾಹಿತ್ಯದಲ್ಲಿ ಛಂದಸ್ಸಿನ ಬಗ್ಗೆ ಅಪಾರ ಅಧ್ಯಯನ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಇವರಿಗೆ ಜೈಮಿನಿ ಭಾರತ ಐದನೇ ತರಗತಿಯಿಂದಲೇ ಕಂಠಪಾಠ. ನಾಗವರ್ಮನ ಛಂದೋಂಬುಧಿ, ಕೇಶಿರಾಜನ ಶಬ್ದಮಣಿದರ್ಪಣ, ಹೇಮಚಂದ್ರಮ ಛಂದೋ ನುಶಾಸನಗಳನ್ನು ಇವರು ಅಧ್ಯಯನ ಮಾಡಿದ್ದಾರೆ.
‘ಯಕ್ಷಗಾನ ಛಂದೋಬ್ರಹ್ಮ’, ‘ಅಭಿನವ ನಾಗವರ್ಮ’ ಬಿರುದಾಂಕಿತ ಹಿರಿಯ ವಿದ್ವಾಂಸ ಡಾ. ಎನ್. ನಾರಾಯಣ ಶೆಟ್ಟಿ ಶಿಮಂತೂರು ಅವರ ನಿಧನ ಯಕ್ಷಗಾನ ಛಂದಸ್ಸು ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಶಿಮಂತೂರು ನಾರಾಯಣ ಶೆಟ್ಟಿ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಿಕರಿಗೆ, ಶಿಷ್ಯರಿಗೆ ಭಗವಂತ ಕರುಣಿಸಲಿ” ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಂತಾಪ ವ್ಯಕ್ತಪಡಿಸಿದ್ದಾರೆ.
“ಶಿಕ್ಷಕರಾಗಿ, ಯಕ್ಷಗಾನ ಛಂದಸ್ಸು ಕ್ಷೇತ್ರದ ಸಾಧಕನಾಗಿ, ಕವಿ, ವಿಮರ್ಶಕ, ಪ್ರಸಂಗಕರ್ತರಾಗಿ ಸಾಹಿತ್ಯ, ಯಕ್ಷಗಾನ ಕ್ಷೇತ್ರಕ್ಕೆ ನಾರಾಯಣ ಶೆಟ್ಟಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಯಕ್ಷಗಾನ ಛಂದೋಂಬುಧಿ ಎನ್ನುವ ತನ್ನ ಗ್ರಂಥದ ಮೂಲಕ ಶಿಮಂತೂರು ಅವರು ಅಜರಾಮರರಾಗಲಿದ್ದಾರೆ. ‘ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗವನ್ನು ಎಳವೆಯಲ್ಲಿಯೇ ರಚಿಸುವ ಮೂಲಕ ಶಿಮಂತೂರು ಅವರು ಪ್ರಖ್ಯಾತಿ ಪಡೆದವರು. ಅವರ ಅಗಲಿಕೆ ದುಖಃ ಉಂಟು ಮಾಡಿದೆ” ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.