ಬೆಂಗಳೂರು: ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಪಠ್ಯವೊಂದರಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ನೋವನ್ನುಂಟು ಮಾಡುವ ಅಂಶವಿದೆ ಎಂಬ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಪಠ್ಯವನ್ನು ಕೈ ಬಿಡುವ ಮಹತ್ವದ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ಹಿಂದೂ ಸಮಾಜದ ಭಾವನೆಗೆ ನೋವು ನೀಡುವ ಅಂಶವನ್ನು ಕೈ ಬಿಡುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಆದೇಶವನ್ನು ನೀಡಿದ್ದಾರೆ.
ಆರನೇ ತರಗತಿಯ ಪಠ್ಯದಲ್ಲಿ ಹಿಂದೂ ಧಾರ್ಮಿಕ ನಂಬಿಕೆಗೆ ಅಪಚಾರವಾಗುವ ಅಂಶವಿದ್ದು, ಅದನ್ನು ಬೋಧನೆ ಮಾಡುವುದು ಸರಿಯಲ್ಲ ಎಂದು ಅಡಿಯೋ ಮೂಲಕ ಉಡುಪಿಯ ಅದಮಾರು ಮಠದ ಪರ್ಯಾಯ ಈಶ ಪ್ರಿಯ ಸ್ವಾಮೀಜಿ ಅವರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸರ್ಕಾರದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಹಿಂದೂಗಳ ಭಾವನೆಗೆ ಬೆಲೆ ನೀಡಿರುವ ಸರ್ಕಾರ ಅಂತಹ ಪಠ್ಯವನ್ನು ಕೈ ಬಿಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ.
ಕೈ ಬಿಡಲಾದ ಪಠ್ಯದಲ್ಲಿ ವೇದ ಕಾಲದಲ್ಲಿ ಯಜ್ಞ ಯಾಗಾದಿಗಳಿಗೆ ಪ್ರಾಣಿ ಬಲಿ ನೀಡಲಾಗುತ್ತಿತ್ತು. ಇದರಿಂದ ಕೃಷಿ ಕಾರ್ಯಕ್ಕೆ ತೊಡಕಾಯಿತು. ಯಾಗಗಳಿಗೆ ಆಹಾರ, ಧಾನ್ಯ, ತುಪ್ಪ, ಬೆಣ್ಣೆ ಹಾಕಿದ ಪರಿಣಾಮ ಆಹಾರದ ಅಭಾವ ಉಂಟಾಯಿತು. ಯಾಗ ಯಜ್ಞಗಳಿಂದಷ್ಟೇ ಮುಕ್ತಿ ಎಂದು ಜನರು ನಂಬಿದ್ದರು. ಸಂಸ್ಕೃತದಲ್ಲಿದ್ದ ವೇದದ ಮಂತ್ರಗಳು ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಸರಳ ಮಾರ್ಗಗಳ ಮೂಲಕ ಮುಕ್ತಿ ಪಡೆಯಲು ಜನರು ಹೊಸ ಧರ್ಮ ಅಪೇಕ್ಷೆ ಮಾಡುತ್ತಿದ್ದರು ಎಂಬ ಅಂಶಗಳಿತ್ತು. ಈ ಅಂಶಗಳನ್ನು ಅದಮಾರು ಸ್ವಾಮಿಗಳು ತಮ್ಮ ಆಕ್ಷೇಪಣೆಯಲ್ಲಿ ನಮೂದಿಸಿದ್ದಾರೆ. ಅಲ್ಲದೆ ಯಾಗಗಳಿಗೆ ಮಹತ್ವ ಇತ್ತಾದರೂ, ಎಲ್ಲಕ್ಕೂ ಒಂದು ನಿಯಮವಿತ್ತು. ಈ ಸಂಬಂಧ ಭಾಗವತದಲ್ಲಿ ಉಲ್ಲೇಖವಿದೆ. ಆದ್ದರಿಂದ ಪಠ್ಯದಲ್ಲಿ ಉಲ್ಲೇಖಿಸಲಾದ ವಿಚಾರಗಳು ಸರಿಯಾಗಿಲ್ಲ ಎಂದು ಅಡಿಯೋದಲ್ಲಿ ತಿಳಿಸಿದ್ದರು.
ಈ ಆಕ್ಷೇಪಣೆ ಸಚಿವರು ಮತ್ತು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ಕೈಬಿಡುವುದಾಗಿ ಸಚಿವರು ಹೇಳಿದ್ದಾರೆ. ಈ ಪಠ್ಯ ಈ ಬಾರಿ ಪ್ರಕಟವಾಗಿದ್ದಲ್ಲ. ಹಿಂದಿನಿಂದ ಇತ್ತು. ಈ ಬಾರಿ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಿ ಆಗಿರುವುದರಿಂದ ಮುಂದಿನ ಬಾರಿಯ ಪುಸ್ತಕದಲ್ಲಿ ಈ ಪಠ್ಯ ತೆಗೆಯಲಾಗುವುದು. ಈ ಬಾರಿ ಆ ಪಾಠವನ್ನು ಮಾಡದಂತೆ ಶಾಲೆಗಳಿಗೆ ಸೂಚಿಸುವುದಾಗಿ ಸಚಿವರು ಹೇಳಿಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.