ಬೆಂಗಳೂರು: ಕೊರೋನಾದ ಪರಿಣಾಮವಾಗಿ ಎದುರಾಗಿರುವ ಆರ್ಥಿಕ ನಷ್ಟವನ್ನು ಭರಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ರಾಜ್ಯದ ಸಾರಿಗೆ ಸಂಸ್ಥೆ ಹೊಸ ಕ್ರಮವೊಂದನ್ನು ಜಾರಿಗೆ ತರಲು ಮುಂದಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ಆರಂಭ ಮಾಡುವುದರ ಕುರಿತು ರೂಪುರೇಶೆಗಳನ್ನು ಸಿದ್ಧಪಡಿಸುತ್ತಿದೆ. ಈ ಸೇವೆಯು ಈಗಾಗಲೇ ಖಾಸಗಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಊಬರ್, ಓಲಾ ಸೇವೆಗಳಂತೆಯೇ ಇರಲಿದೆ ಎಂದೂ ಸಂಸ್ಥೆ ಮಾಹಿತಿ ನೀಡಿದೆ.
ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾರಿಗೆ ಇಲಾಖೆಯ ‘ಸಾರಿಗೆ ಮಿತ್ರ’ ಕೈಪಿಡಿಯನ್ನು ಬಿಡುಗಡೆ ಮಾಡಿದ್ದು, ಈ ಕೈಪಿಡಿಯಲ್ಲಿ ಟ್ಯಾಕ್ಸಿ ಸೇವೆ ಆರಂಭ ಮಾಡುವುದರ ಕುರಿತಾಗಿ ಮಾಹಿತಿಗಳನ್ನು ಸಾರಿಗೆ ಇಲಾಖೆ ನೀಡಿದೆ.
ಈ ಹಿಂದೆ ಆರ್ಥಿಕ ಹೊಡೆತದಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ರಾಜ್ಯದ ಮೂಲೆ ಮೂಲೆಗೂ ತಲುಪುವಂತೆ ಕೊರಿಯರ್ ಸೇವೆಯನ್ನು ಆರಂಭಿಸುವ ಸೂಚನೆ ನೀಡಿರುವ ಬೆನ್ನಲ್ಲೇ ಇದೀಗ ಟ್ಯಾಕ್ಸಿ ಸೇವೆಯನ್ನು ಆರಂಭ ಮಾಡುವ ಕುರಿತಂತೆಯೂ ಇಲಾಖೆ ಯೋಜನೆಗಳನ್ನು ಹಾಕಿಕೊಂಡಿದೆ. ಆರಂಭದಲ್ಲಿ ಈ ಟ್ಯಾಕ್ಸಿ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭ ಮಾಡಲಾಗುತ್ತದೆ. ಅಲ್ಲಿ ಈ ಯೋಜನೆಯ ಸಾಧ್ಯತೆ ಬಾಧ್ಯತೆಗಳನ್ನು ಪರಿಶೀಲನೆ ಮಾಡಿ ಬಳಿಕ ರಾಜ್ಯದ ಇತರ ನಗರಗಳಿಗೂ ಈ ಸೇವೆಯನ್ನು ವಿಸ್ತರಣೆ ಮಾಡುವುದರ ಬಗ್ಗೆ ಯೋಜನೆ ರೂಪಿಸುವುದಾಗಿಯೂ ಸಾರಿಗೆ ಇಲಾಖೆ ತಿಳಿಸಿದೆ.
ಸಂಸ್ಥೆಯ ಈ ಯೋಜನೆಗೆ ನೆರವು ನೀಡುವ ಭರವಸೆಯನ್ನೂ ಇಸ್ರೋ ನೀಡಿದ್ದು, ಟ್ಯಾಕ್ಸಿಗಳಿಗೆ ಜಿಪಿಎಸ್, ಅವುಗಳ ಮೇಲೆ ನಿಗಾ ,ಆನ್ಲೈನ್ ಬುಕಿಂಗ್ಗೆ ಬೇಕಾದ ಅವಶ್ಯಕತೆಗಳನ್ನು ಒದಗಿಸಿ ಕೊಡುವ ಭರವಸೆಯನ್ನು ಇಸ್ರೋ ನೀಡಿದೆ. ಈ ಯೋಜನೆಯನ್ನು ಸಹಕಾರದ ನೆಲೆಯಲ್ಲಿ ಆರಂಭ ಮಾಡಲು ಮುಂದಾಗಿದ್ದು, ಟ್ಯಾಕ್ಸಿ ಹೊಂದಿರುವವರು ಈ ನೂತನ ಸೇವೆಯಲ್ಲಿ ಪಾಲು ಪಡೆಯುವ ಅವಕಾಶವನ್ನು ನೀಡಲಾಗಿದೆ. ಬಾಡಿಗೆಯನ್ನು ಸಾರಿಗೆ ಇಲಾಖೆಯೇ ಟ್ಯಾಕ್ಸಿ ಚಾಲಕರಿಗೆ ನೀಡಲಿದ್ದು, ಪ್ರತಿ ಬಾಡಿಗೆಗೂ ಇಲಾಖೆ ಶುಲ್ಕ ಪಡೆಯುವುದಾಗಿ ಇಲಾಖೆ ತಿಳಿಸಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸೂಕ್ತ ಚರ್ಚೆ ನಡೆಸಿ ಬಳಿಕ ಈ ಯೋಜನೆಯನ್ನು ಅನುಷ್ಠಾನ ಮಾಡುವುದಾಗಿಯೂ ಇಲಾಖೆ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.