ನವದೆಹಲಿ: ಸ್ವಚ್ಛ ಸರ್ವೇಕ್ಷಣ್ 2020ರ ಫಲಿತಾಂಶವನ್ನು ಇಂದು ಘೋಷಣೆ ಮಾಡಲಾಗಿದೆ. ಸತತ ನಾಲ್ಕನೇ ಬಾರಿಗೆ ಇಂಧೋರ್ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂದು ವರ್ಚುವಲ್ ಆಗಿ ನಡೆದ ಸಮಾರಂಭದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಗಂಗಾ ನದಿಯ ತಟದಲ್ಲಿರುವ ಪಟ್ಟಣಗಳಲ್ಲಿ ವಾರಣಾಸಿಗೆ ಸ್ವಚ್ಛ ಪಟ್ಟಣ ಪ್ರಶಸ್ತಿ ನೀಡಲಾಗಿದೆ. 100 ಕ್ಕೂ ಹೆಚ್ಚು ನಗರಗಳನ್ನು ಹೊಂದಿರುವ ರಾಜ್ಯಗಳಲ್ಲಿ ಛತ್ತೀಸ್ಗಢ ಪ್ರಥಮ ಸ್ಥಾನ ಪಡೆದಿದೆ. 3-10 ಲಕ್ಷ ಜನಸಂಖ್ಯೆಯ ನಗರಗಳಲ್ಲಿ ಮೈಸೂರು ಸ್ವಚ್ಛ ನಗರವಾಗಿ ಹೊರಹೊಮ್ಮಿದೆ. 100 ಕ್ಕಿಂತ ಕಡಿಮೆ ನಗರಗಳನ್ನು ಹೊಂದಿರುವ ರಾಜ್ಯಗಳ ವಿಭಾಗದಲ್ಲಿ ಜಾರ್ಖಂಡ್ ಮೊದಲ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಲಂಧರ್ ಕಂಟೋನ್ಮೆಂಟ್ ಬೋರ್ಡ್ ಅನ್ನು ದೇಶದ ಸ್ವಚ್ಛವಾದ ಕಂಟೋನ್ಮೆಂಟ್ ಬೋರ್ಡ್ ಎಂದು ಪರಿಗಣಿಸಲಾಗಿದೆ. 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸ್ವಚ್ಛ ನಗರವಾಗಿ ಗುಜರಾತ್ನ ಅಹಮದಾಬಾದ್ಗೆ ಪ್ರಶಸ್ತಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪುರಿ ಅವರು, ಸ್ವಚ್ಛ ಸರ್ವೇಕ್ಷಣ್ 2020 ನಗರಗಳ ಹಲವಾರು ಆವಿಷ್ಕಾರಗಳು ಮತ್ತು ಉತ್ತಮ ಅಭ್ಯಾಸಗಳಿಗೆ ಸಾಕ್ಷಿಯಾಗಿದೆ. ನವೀನ ಚಿಂತನೆ, ತಾಂತ್ರಿಕ ಮಧ್ಯಸ್ಥಿಕೆಗಳು ಮತ್ತು ಸಕ್ರಿಯ ಮಧ್ಯಸ್ಥಗಾರರ ಒಳಗೊಳ್ಳುವಿಕೆಯ ಕಾರಣದಿಂದ ನಗರಗಳು ತಮ್ಮ ಪ್ರದೇಶಗಳಲ್ಲಿನ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯ ಸಮಸ್ಯೆಗಳನ್ನು ಪರಿಹರಿಸಲು ಹೊಸ ಮಾರ್ಗಗಳನ್ನು ಕಂಡುಕೊಂಡಿವೆ ಎಂದು ಹೇಳಿದರು.
ಈ ವರ್ಷ ಸಮೀಕ್ಷೆಯಲ್ಲಿ, ಗಂಗಾ ನದಿಯುದ್ದಕ್ಕೂ 4 ಸಾವಿರ 242 ನಗರಗಳು, 62 ಕಂಟೋನ್ಮೆಂಟ್ ಬೋರ್ಡ್ಗಳು ಮತ್ತು 92 ಪಟ್ಟಣಗಳ ಸುಮಾರು ಒಂದು ಕೋಟಿ 87 ಲಕ್ಷ ನಾಗರಿಕರು ಭಾಗವಹಿಸಿದ್ದರು. ಇಂದಿನ ಸ್ವಚ್ಛ ಮಹೋತ್ಸವ ಕಾರ್ಯಕ್ರಮದಲ್ಲಿ 129 ಪ್ರಶಸ್ತಿಗಳನ್ನು ಉನ್ನತ ಪ್ರದರ್ಶನ ನೀಡಿದ ನಗರಗಳು ಮತ್ತು ರಾಜ್ಯಗಳಿಗೆ ಹಸ್ತಾಂತರಿಸಲಾಯಿತು. ʼಸ್ವಚ್ಛ ಸರ್ವೇಕ್ಷಣ್ 2020ʼ 28 ದಿನಗಳಲ್ಲಿ ಪೂರ್ಣಗೊಂಡಿದ್ದು, 1 ಕೋಟಿ 70 ಲಕ್ಷ ನಾಗರಿಕರನ್ನು ಸ್ವಚ್ಛತಾ ಆ್ಯಪ್ನಲ್ಲಿ ನೋಂದಾಯಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.