ಬೆಂಗಳೂರು: ಮಹಾ ಮಳೆಗೆ ರಾಜ್ಯದ ಹಲವು ಜಿಲ್ಲೆಗಳು ತತ್ತರಿಸಿ ಹೋಗಿವೆ. ಕೊಡಗು, ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ಇನ್ನಿತ ಭಾಗಗಳಲ್ಲಿ ಭೂಕುಸಿತ, ಪ್ರವಾಹ ಉಂಟಾಗಿದ್ದು ಜನರು ಭೀತಿಯಿಂದ ದಿನಕಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಈ ಸಂಬಂಧ ಪ್ರಧಾನಿ ಮೋದಿ ಅವರ ಜೊತೆಗೆ ನಿನ್ನೆಯಷ್ಟೇ ವಿಡಿಯೋ ಸಂವಾದ ನಡೆಸಿರುವ ರಾಜ್ಯ ಸರ್ಕಾರ, ಪರಿಹಾರಧನಕ್ಕೂ ಮನವಿ ಮಾಡಿತ್ತು. ಅದರ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್, ಅಶೋಕ್, ಪ್ರತಿ ವರ್ಷವೂ ಪ್ರವಾಹ ಭೀತಿ ಎದುರಾಗುವ 10 ಜಿಲ್ಲೆಗಳಲ್ಲಿ ಶಾಶ್ವತ ಪುನಶ್ಚೇತನ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಈ ಭವನದಲ್ಲಿ ಆಸ್ಪತ್ರೆ, ಶೌಚಾಲಯ, ಗ್ರಂಥಾಲಯ ಮೊದಲಾದವುಗಳ ಜೊತೆಗೆ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಇದಕ್ಕಾಗಿ 200 ಕೋಟಿ ರೂ. ಬಿಡುಗಡೆ ಮಾಡಲಾಗುವುದಾಗಿ ಮಾಹಿತಿ ನೀಡಿದ್ದಾರೆ.
ಸದ್ಯ ನೆರೆ ಹಾನಿ ಜಿಲ್ಲೆಗಳಲ್ಲಿ ಸಂತ್ರಸ್ಥರಿಗೆ ತಾತ್ಕಾಲಿಕ ಪುನಶ್ಚೇತನ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಕೇಂದ್ರಗಳಲ್ಲಿ ಜನರು ಕೊರೋನಾ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆಯೂ ಅಶೋಕ್ ತಿಳಿಸಿದ್ದಾರೆ. ಜೊತೆಗೆ ರಾಪಿಡ್ ಟೆಸ್ಟ್ಗಳನ್ನು ನಡೆಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸೋಂಕಿತರು ಕಂಡುಬಂದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆಯೂ ಸೂಚಿಸಿದ್ದಾರೆ.
ಜೊತೆಗೆ ನೆರೆ ಸಂತ್ರಸ್ಥರಿಗೆ ಪುನಶ್ಚೇತನ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ಮಧ್ಯಾಹ್ನ ಮತ್ತು ರಾತ್ರಿ ವೇಳೆಗೆ ಅನ್ನ, ಸಾರು, ಉಪ್ಪಿನಕಾಯಿ, ಪಲ್ಯ, ಮೊಟ್ಟೆ, ಮೊಸರು ನೀಡುವಂತೆಯೂ ಸೂಚಿಸಲಾಗಿದೆ. ಈ ವರೆಗೆ ಕೇವಲ ಅನ್ನ, ಸಾಂಬಾರು ಮಾತ್ರವೇ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪೌಷ್ಟಿಕ ಆಹಾರಗಳನ್ನು ನೀಡಲು ಕ್ರಮ ಕೈಗೊಂಡಿರುವುದಾಗಿಯೂ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.