ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಸಮೀಪ ಭಾರತದೊಳಕ್ಕೆ ಅಕ್ರಮವಾಗಿ ನುಸುಳಲು ಪ್ರಯತ್ನ ಪಡುತ್ತಿದ್ದ ಉಗ್ರನೋರ್ವನನ್ನು ಭಾರತೀಯ ಭದ್ರತಾ ಪಡೆ ವಧಿಸಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ನುಸುಳುಕೋರ ಉಗ್ರರು ಗಾಯಗೊಂಡಿದ್ದಾರೆ ಎಂದು ಭದ್ರತಾ ಪಡೆಗಳು ಮಾಹಿತಿ ನೀಡಿವೆ.
ಇತ್ತೀಚೆಗೆ ಪಾಕಿಸ್ಥಾನ ಪ್ರೇರಿತ ಉಗ್ರಗಾಮಿಗಳು ಅಕ್ರಮವಾಗಿ ದೇಶದೊಳಕ್ಕೆ ಪ್ರವೇಶಿಸಲು ಪ್ರಯತ್ನ ನಡೆಸುತ್ತಿದ್ದು, ಗಡಿ ಪ್ರದೇಶಗಳಲ್ಲಿ ಸೇನೆ ಹದ್ದಿನ ಕಣ್ಣಿಟ್ಟಿದೆ. ನಿನ್ನೆ ಕೃಷ್ಣ ಘಾಟಿ ಸೆಕ್ಟರ್ನಲ್ಲಿ ಎಲ್ಒಸಿ ಬಳಿ ಅಕ್ರಮವಾಗಿ ಭಾರತಕ್ಕೆ ಬರಲು ಪ್ರಯತ್ನ ನಡೆಸುತ್ತಿದ್ದ ಉಗ್ರಗಾಮಿಗಳ ಗುಂಪೊಂದು ಭದ್ರತಾ ಪಡೆಗಳ ಕಣ್ಣಿಗೆ ಬಿದ್ದಿದ್ದು, ಈ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದಿದೆ. ಈ ಘರ್ಷಣೆಯಲ್ಲಿ ಓರ್ವ ನುಸುಳುಕೋರ ಉಗ್ರನನ್ನ ಸಂಹರಿಸಲಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳದಲ್ಲಿ ಪಾಕಿಸ್ಥಾನದ ಮುದ್ರೆಗಳಿರುವ ಎಕೆ-47, ಆಹಾರ ಸಾಮಗ್ರಿ, ಮ್ಯಾಗಜೀನ್ಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ. ಸ್ವಾತಂತ್ರ್ಯ ದಿನವನ್ನು ಗುರಿಯಾಗಿಸಿಕೊಂಡು ಪಾಕಿಸ್ಥಾನ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ಮಾಡುತ್ತಿರುವುದಾಗಿ ದೇಶದ ಗುಪ್ತಚರ ಇಲಾಖೆ ಈ ಹಿಂದೆಯೇ ಮಾಹಿತಿ ನೀಡಿದ್ದು, ಅದರನ್ವಯ ಹೆಚ್ಚಿನ ಎಚ್ಚರಿಕೆಯಿಂದ ಭದ್ರತಾ ಪಡೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದೂ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.