ಬೆಂಗಳೂರು: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ದಂಡ ಪಾವತಿಸಬೇಕಾದವರಿಗೆ ಸಹಾಯವಾಗುವಂತೆ ಇ- ಸೇವಾ ಕೇಂದ್ರಗಳನ್ನು ಆರಂಭ ಮಾಡಲಾಗಿದ್ದು, ಇನ್ನು ಮುಂದೆ ದಂಡ ಪಾವತಿಗೆ ಸ್ಟೇಷನ್ಗೆ ಅಲೆಯದೆ ಇ-ಸೇವಾ ಕೇಂದ್ರದಲ್ಲೇ ದಂಡ ಕಟ್ಟಲು ಪೂರಕ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ.
ವರ್ಚುವಲ್ ಕೋರ್ಟ್ ಸೇರಿದಂತೆ ನಿನ್ನೆ 6 ಇ-ಸೇವಾ ಕೇಂದ್ರಗಳನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಉದ್ಘಾಟನೆ ಮಾಡಿದ್ದಾರೆ.
ಸಂಚಾರಿ ನಿಯಮಗಳ ಉಲ್ಲಂಘನೆ ಮತ್ತು ದಂಡ ಪಾವತಿಯ ಪ್ರಕ್ರಿಯೆಯನ್ನು ಕಡಿಮೆ ಮಾನವ ಸಂಪನ್ಮೂಲಗಳ ಬಳಕೆಯ ಮೂಲಕ ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುವ ವರ್ಚುವಲ್ ಕೋರ್ಟ್ ಅನ್ನು ಹೈಕೋರ್ಟ್ ಆರಂಭಿಸಿದೆ. ಕೇವಲ ಒಬ್ಬ ಅಧಿಕಾರಿ ಈ ಎಲ್ಲಾ ವ್ಯವಸ್ಥೆಗಳನ್ನು ನಿರ್ವಹಿಸಲು ಸಾಧ್ಯವಿದ್ದು, ಮಾನವ ಸಂಪನ್ಮೂಲದ ಅನಗತ್ಯ ಬಳಕೆಯನ್ನು ತಪ್ಪಿಸಿದಂತಾಗಲಿದೆ.
ಈ ವರ್ಚುವಲ್ ಕೋರ್ಟ್ ಮೂಲಕ ಮುಂದಿನ ದಿನಗಳಲ್ಲಿ ಇಂಟರ್ ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಂ, ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳಲ್ಲಿ ಇ-ಫೈಲಿಂಗ್, ವಾಣಿಜ್ಯ ನ್ಯಾಯಾಲಯಗಳ ವೆಬ್ಸೈಟ್, ಪ್ರಮಾಣೀಕೃತ ಪ್ರತಿಗಳನ್ನು ಪಡೆದುಕೊಳ್ಳಲು ಆನ್ಲೈನ್ ಅರ್ಜಿ, ನ್ಯಾಯಾಲಯದ ಶುಲ್ಕದ ಆನ್ಲೈನ್ ಪಾವತಿ, ಪ್ರಕ್ರಿಯೆ ಮತ್ತು ನಕಲು ಶುಲ್ಕ ಮೊದಲಾದ ಸೇವೆಗಳನ್ನು ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ.
ಸಂಚಾರಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ವರ್ಚುವಲ್ ಕೋರ್ಟ್ ಹೊಂದಿರುವ 6 ನೇ ನಗರವಾಗಿ ಬೆಂಗಳೂರು ಇದೀಗ ಹೆಸರು ಪಡೆದಿದ್ದು, ದೆಹಲಿ, ಚೆನ್ನೈ, ಪುಣೆ, ಫರೀದಾಬಾದ್, ಕೊಚ್ಚಿನ್ ಗಳಲ್ಲಿ ಈ ಮೊದಲೇ ವರ್ಚುವಲ್ ಕೋರ್ಟ್ನ ಸೇವೆಯನ್ನು ಆರಂಭ ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.