ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ -2019 ಅನ್ನು ಸುವ್ಯವಸ್ಥಿತವಾಗಿ ಜಾರಿಗೊಳಿಸಲಿರುವ ದೇಶದ ಮೊದಲ ರಾಜ್ಯಗಳಲ್ಲಿ ಒಂದಾಗಲಿದೆ ಕರ್ನಾಟಕ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಅವರು ಇಂದು ಕರಡು ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಅಧ್ಯಕ್ಷ ಡಾ. ಕೆ. ಕಸ್ತೂರಿ ರಂಗನ್ ಅವರೊಂದಿಗೆ ವೆಬಿನಾರ್ ಮೂಲಕ ಸಂವಾದ ನಡೆಸಿ, ರಾಷ್ಟ್ರದ ಎಲ್ಲರಿಗೂ ಪೂರಕವೆನಿಸುವ ಶಿಕ್ಷಣ ನೀತಿಯನ್ನು ರೂಪಿಸಿದ್ದಕ್ಕಾಗಿ ರಾಜ್ಯ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸಿದರು. ಇದನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ ಎಂದೂ ಅವರು ಹೇಳಿದ್ದಾರೆ.
ಈ ಹೊಸ ಶಿಕ್ಷಣ ನೀತಿಯು ಗುಣಮಟ್ಟದ, ಎಲ್ಲರಿಗೂ ಸಮಾನ ಶಿಕ್ಷಣವನ್ನು ಒದಗಿಸುವುದಕ್ಕೆ ಪೂರಕವಾಗಿ ರೂಪುಗೊಂಡಿದೆ. ಆ ಮೂಲಕ ಸುಸ್ಥಿರ ಸಮಾಜದ ನಿರ್ಮಾಣಕ್ಕೂ ಇದು ಸಹಾಯ ಮಾಡಲಿದೆ. 34 ವರ್ಷಗಳ ನಂತರ ಇದೀಗ ಇಂದಿನ ಹಾಗೂ ಮುಂದಿನ ಸಮಾಜದ ಅವಶ್ಯಕತೆಗಳನ್ನು ಅರಿತುಕೊಂಡು ಈ ನೀತಿಯನ್ನು ರಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕಸ್ತೂರಿ ರಂಗನ್ ಅವರು, ಕರ್ನಾಟಕ ನನ್ನ ಕರ್ಮಭೂಮಿಯಾಗಿದೆ. ಮುಂದಿನ 20 ವರ್ಷದ ದೇಶದ ಅಭಿವೃದ್ಧಿಯ ಆಶಯದ ಜೊತೆಗೆ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ರೂಪ ನೀಡಲಾಗಿದೆ ಎಂದಿದ್ದಾರೆ. ಜೊತೆಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಇದು ಕೇಂದ್ರದ ಗಮನಕ್ಕೂ ಬಂದಿದೆ ಎಂದು ಹೇಳಿದ್ದಾರೆ.
ರಾಜ್ಯದ ಈಗಿರುವ ಶಿಕ್ಷಣ ಪದ್ಧತಿಯಲ್ಲಿ ಅಳವಡಿಸಲಾಗಿರುವ ಹಲವಾರು ಮಹತ್ವದ ವಿಚಾರಗಳನ್ನು ಈ ಹೊಸ ನೀತಿ ಒಳಗೊಂಡಿದೆ. ದೇಶದ ಶಿಕ್ಷಣ ವ್ಯವಸ್ಥೆ ಈ ನೀತಿಯನ್ನು ಅಳವಡಿಸುವ ಮೊದಲೇ ಕರ್ನಾಟಕ ದೂರದೃಷ್ಟಿಯ ನಡೆಯನ್ನು ಇರಿಸಿರುವುದು ಶ್ಲಾಘನೀಯ ಎಂದೂ ಕಸ್ತೂರಿ ರಂಗನ್ ನುಡಿದಿದ್ದಾರೆ. ಈ ಸಂದರ್ಭದಲ್ಲಿ ಸಮಿತಿಯಲ್ಲಿದ್ದ ರಾಜ್ಯದ ಪ್ರೊ. ಎಂ.ಕೆ. ಶ್ರೀಧರ್ ಅವರ ಸೇವೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಇನ್ನು ಇದನ್ನು ಆಗಸ್ಟ್ ತಿಂಗಳಿನಲ್ಲಿ ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಪೂರಕವಾಗಿ ರೂಪುರೇಶೆಗಳನ್ನು ಹಾಕಿಕೊಳ್ಳುವಂತೆಯೂ ಅಧಿಕಾರಿಗಳಿಗೆ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ. ದೇಶ ಸ್ವತಂತ್ರ ಪಡೆದ ಬಳಿಕ ಕೇವಲ ಎರಡೇ ಬಾರಿ ಶಿಕ್ಷಣ ನೀತಿ ಪರಿಷ್ಕೃತವಾಗಿದ್ದು, ಈಗ ರೂಪುಗೊಂಡಿರುವ ನೀತಿ ಸಮಾಜದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡಲಿದೆ ಎಂದೂ ತಿಳಿಸಿದ್ದಾರೆ.
ಇದೇ ಫೆಬ್ರವರಿಯಲ್ಲಿ ಕರ್ನಾಟಕಕ್ಕೆ ವಿಶೇಷ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಲಾಗಿದೆ. ಸದ್ಯ ರೂಪುರೇಶೆ ಸಿದ್ಧಗೊಳಿಸಲಾಗಿದೆ. ಆಗಸ್ಟ್ 20 ಕ್ಕೆ ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿಯನ್ನು ಲೋಕಾರ್ಪಣೆಗೊಳಿಸುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.