ಬೆಂಗಳೂರು: ಕೊರೋನಾ ಸೋಂಕು ತಡೆಗಟ್ಟಲು ಹಾಗೂ ಡಿಜಿಟಲ್ ತಂತ್ರಜ್ಞಾನದ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯದಲ್ಲಿ ‘ಕೋವಿಡ್ ರಕ್ಷಾ’ ಎಂಬ ವಿನೂತನ ಕಾರ್ಯ ಯೋಜನೆಯನ್ನು ಆರಂಭಿಸಲಾಗಿದ್ದು, ಈ ಯೋಜನೆಗೆ ಉಸ್ತುವಾರಿ ಸಚಿವ ಆರ್. ಅಶೋಕ್ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಚಾಲನೆ ನೀಡಿದ್ದಾರೆ.
ಈ ತಂತ್ರಜ್ಞಾನದ ಮೂಲಕ ರೋಗಿಗಳು ತಮ್ಮ ಮನೆಯಿಂದಲೇ ವೈದ್ಯರನ್ನು ಸಂಪರ್ಕಿಸುವುದು ಸಾಧ್ಯವಾಗಲಿದೆ. ತಮ್ಮ ಸಮಸ್ಯೆಗಳನ್ನು ಕುಳಿತಲ್ಲಿಂದಲೇ ಪರಿಹರಿಸಿಕೊಳ್ಳುವ ಮತ್ತು ತುರ್ತು ಸಂದರ್ಭಗಳಲ್ಲಿ ಕೊರೋನಾ ಪರೀಕ್ಷೆ ನಡೆಸಿಕೊಳ್ಳಲು, ಸೂಕ್ತ ಔಷಧಗಳನ್ನು ಪಡೆದುಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ಆಸ್ಪತ್ರೆ, ಚಿಕಿತ್ಸೆ, ಪರಿಹಾರೋಪಾಯಗಳು, ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿಗಳನ್ನು ಒಂದೇ ವೇದಿಕೆಯಡಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ‘ಕೋವಿಡ್ ರಕ್ಷಾ’ ಕಾರ್ಯ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯ ಮೂಲಕ ಬೇಕಾದ ಔಷಧಗಳನ್ನು, ಡಯಗ್ನೋಸ್ಟಿಕ್ ಟೆಸ್ಟ್ ಸೇವೆಗಳನ್ನು ಮನೆ ಬಾಗಿಲಿನಲ್ಲೇ ಪಡೆದುಕೊಳ್ಳುವುದಕ್ಕೂ ಸಾಧ್ಯವಾಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಕೊರೋನಾ ಸೋಂಕಿತರ ಕ್ವಾರಂಟೈನ್, ಸಮೀಪದಲ್ಲಿನ ಫಿವರ್ ಕ್ಲಿನಿಕ್, ಬೆಂಗಳೂರಿನ ಪ್ರತಿ ವಾರ್ಡ್ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸ್ವಯಂಸೇವಕರ ಮಾಹಿತಿಯನ್ನೂ ಇದರ ಮೂಲಕ ಪಡೆದುಕೊಳ್ಳುವುದು ಸಾಧ್ಯ ಎಂದು ಆರ್. ಅಶೋಕ್ ಅವರು ಮಾಹಿತಿ ನೀಡಿದ್ದಾರೆ.
ಕೊರೋನಾ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಇದೊಂದು ಸೂಕ್ತ ಡಿಜಿಟಲ್ ವೇದಿಕೆಯಾಗಿದ್ದು, ದಕ್ಷಿಣ ಸಂಸದರ ಕಛೇರಿ ಸಹಾಯವಾಣಿ 080- 61914960 ಗೆ ಚಾಲನೆ ನೀಡಲಿದ್ದು, ಕೊರೋನಾ ಸಂಬಂಧ ನುರಿತ ವೈದ್ಯರು ವಾಟ್ಸಾಪ್ ಅಥವಾ ಫೋನ್ ಕರೆಗಳ ಮೂಲಕ ಅಗತ್ಯ ಮಾಹಿತಿಗಳನ್ನು ನೀಡಲಿದ್ದಾರೆ. ‘ಕೋವಿಡ್ ರಕ್ಷಾ’ ದಲ್ಲಿ ಸುಮಾರು 3,200 ವೈದ್ಯರು ಇ- ಸೇವೆ ನೀಡುತ್ತಿದ್ದು, ಇವರು ಕ್ವಾರಂಟೈನ್, ಕೊರೋನಾ ಲಕ್ಷಣಗಳು, ಪೂರಕ ಚಿಕಿತ್ಸೆ, ಆಸ್ಪತ್ರೆಗಳ ಮಾಹಿತಿ, ಹೋಂ ಕ್ವಾರಂಟೈನ್ ವ್ಯವಸ್ಥೆ, ಕೊರೋನಾ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಬಗೆಗೂ ಮಾಹಿತಿ ನೀಡಲಿದ್ದಾರೆ. ಜೊತೆಗೆ ಇವರಲ್ಲಿ 350 ವೈದ್ಯರು ಕನ್ನಡದಲ್ಲಿ ಸೇವೆ ಒದಗಿಸಲಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೋಂ ಕ್ವಾರಂಟೈನ್ ಅಥವಾ ಮನೆಯಲ್ಲಿಯೇ ಕೊರೋನಾ ಸೋಂಕಿನ ಚಿಕಿತ್ಸೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿಯೂ ಸಹಾಯ ಮಾಡಲಿದೆ. ಬೆಂಗಳೂರು ದಕ್ಷಿಣ ವಲಯದಲ್ಲಿ 200 ಆಕ್ಸಿಜನ್ ಕಾನ್ಸನೇಟರ್ಸ್, 200 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಲಾಗಿದೆ. 300 ಕ್ಕೂ ಅಧಿಕ ಕಾರ್ಯಕರ್ತರು ಕರೆ ನಿರ್ವಹಣೆಗೆ ಸಹಾಯ ಮಾಡಲಿದ್ದಾರೆ. 300 ಕ್ಕೂ ಅಧಿಕ ಜನರು ಸ್ವಯಂಸೇವಕರಾಗಿ ಕೆಲಸ ಮಾಡಲಿದ್ದು, ಸಾರ್ವಜನಿಕರು ಇದರ ಸಂಪೂರ್ಣ ಉಪಯೋಗ ಪಡೆದುಕೊಳ್ಳುವಂತೆಯೂ ಅಧಿಕಾರಿಗಳು ತಿಳಿಸಿದ್ದಾರೆ. ಭಾರತದಲ್ಲಿಯೇ ಮೊದಲ ಬಾರಿಗೆ ಇಂತಹ ಪ್ರಯೋಗ ನಡೆಸಲಾಗುತ್ತಿದೆ ಎಂದು ಸಂಬಂಧಪಟ್ಟ ಮೂಲಗಳು ಮಾಹಿತಿ ನೀಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.