ನವದೆಹಲಿ: ಅಫ್ಘಾನಿಸ್ಥಾನದಲ್ಲಿ ಅಲ್ಪಸಂಖ್ಯಾತರಾಗಿರುವ ಸಿಖ್ಖರು ಮತ್ತು ಹಿಂದೂಗಳ ಸ್ಥಿತಿ ಚಿಂತಾಜನಕವಾಗಿದೆ. ಇತ್ತೀಚಿಗಷ್ಟೇ ಅಲ್ಲಿ ಸಿಖ್ ಸಮುದಾಯದ ನಾಯಕನನ್ನು ಅಪಹರಣ ಮಾಡಿ ನಂತರ ಬಿಡುಗಡೆ ಮಾಡಲಾಗಿತ್ತು. ಇದೀಗ ಅಪಹೃತ ಸೇರಿದಂತೆ 11 ಮಂದಿ ಹಿಂದೂ, ಸಿಖ್ಖರಿಗೆ ಭಾರತಕ್ಕೆ ಆಗಮಿಸಲು ಕೇಂದ್ರ ಸರಕಾರವು ಅಲ್ಪಾವಧಿ ವೀಸಾವನ್ನು ಮಂಜೂರು ಮಾಡಿದೆ.
“ಅಫ್ಘಾನಿಸ್ಥಾನದ ಸಿಖ್ ಮತ್ತು ಹಿಂದೂ ಸಮುದಾಯದ 11 ಮಂದಿ ಸದಸ್ಯರು ಭಾರತಕ್ಕೆ ಇಂದು ಆಗಮಿಸಿದ್ದಾರೆ” ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅಲ್ಲದೆ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸಹಾಯ ಮಾಡಿದ ಅಫ್ಘಾನಿಸ್ಥಾನ ಸರಕಾರಕ್ಕೂ ಭಾರತ ಧನ್ಯವಾದಗಳನ್ನು ತಿಳಿಸಿದೆ.
ಅಫ್ಘಾನಿಸ್ಥಾನದಲ್ಲಿ ಅಪಹರಣಗೊಂಡ ಸಿಖ್ ನಾಯಕನನ್ನು ನಿಧನ್ ಸಿಂಗ್ ಸಚ್ದೇವ್ ಎಂದು ಗುರುತಿಸಲಾಗಿದ್ದು, ಅವರನ್ನು ಅಪಹರಿಸಿ ಜುಲೈ 18 ರಂದು ಬಿಡುಗಡೆ ಮಾಡಲಾಗಿತ್ತು. ಕಳೆದ ತಿಂಗಳು ಅಪಘಾನಿಸ್ಥಾನದ ಪಕ್ತಿಯ ಪ್ರಾಂತ್ಯದಿಂದ ಅವರನ್ನು ಅಪಹರಣ ಮಾಡಲಾಗಿತ್ತು.
ಈ ಬಗ್ಗೆ ಕಳೆದ ವಾರ ಪ್ರತಿಕ್ರಿಯೆ ನೀಡಿದ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು, ಅಫ್ಘಾನಿಸ್ತಾನದಲ್ಲಿನ ಹಿಂದೂ ಮತ್ತು ಸಿಖ್ ಸಮುದಾಯಗಳು ಭಯೋತ್ಪಾದಕರಿಂದ ನಿರಂತರವಾಗಿ ದಾಳಿಗೆ ಒಳಗಾಗುತ್ತಿವೆ. ಬಾಹ್ಯ ಬೆಂಬಲದಿಂದ ಭಯೋತ್ಪಾದಕರು ಈ ಕೃತ್ಯ ನಡೆಸುತ್ತಿದ್ದಾರೆ ಎಂದಿದ್ದಾರೆ.
“ಈ ಸಮುದಾಯದ ಜನರಿಂದ ನಾವು ಮನವಿಗಳನ್ನು ಸ್ವೀಕರಿಸುತ್ತಿದ್ದೇವೆ. ಅವರು ಭಾರತಕ್ಕೆ ಬರಲು ಬಯಸುತ್ತಿದ್ದಾರೆ, ಇಲ್ಲಿ ನೆಲೆಸಬೇಕು ಎಂಬ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್-19 ಬಿಕ್ಕಟ್ಟಿನ ನಡುವೆಯೂ ಅವರ ಮನವಿಯನ್ನು ನಾವು ಪುರಸ್ಕರಿಸುತ್ತಿದ್ದೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.