ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ʼಮನ್ ಕೀ ಬಾತ್ʼ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಸಮರ್ಪಣೆ ಮಾಡಿದರು. ಈ ವೇಳೆ ಅವರು ಯೋಧರ ಪರಾಕ್ರಮ, ಶಕ್ತಿ ಮತ್ತು ಸಾಮರ್ಥ್ಯದ ಬಗ್ಗೆ ಕೊಂಡಾಡಿದರು. ಮಾತ್ರವಲ್ಲದೇ, ಕೊರೋನಾ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು. ರಕ್ಷಾಬಂಧನ ಸೇರಿದಂತೆ ಮುಂಬರುವ ಹಬ್ಬಗಳಿಗಾಗಿ ಜನರಿಗೆ ಶುಭ ಕಾಮನೆಗಳನ್ನು ತಿಳಿಸಿದರು.
“ಜುಲೈ 26ರ ದಿನ ಹೆಚ್ಚು ಮಹತ್ವದ್ದಾಗಿದೆ. ಯಾಕೆಂದರೆ, ಇದು ‘ಕಾರ್ಗಿಲ್ ವಿಜಯ್ ದಿವಸ್’ ಆಗಿದೆ. 21 ವರ್ಷಗಳ ಹಿಂದೆ ಈ ದಿನ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೇನೆ ಭಾರತದ ವಿಜಯದ ಪತಾಕೆಯನ್ನು ಹಾರಿಸಿತು. ಈ ಸನ್ನಿವೇಶವನ್ನು ಭಾರತ ಎಂದಿಗೂ ಮರೆಯಲಾರದು. ಭಾರತದ ಭೂಮಿಯನ್ನು ಆಕ್ರಮಿಸಲು ಪಾಕಿಸ್ಥಾನ ಬಹಳ ದುಸ್ಸಾಹಸ ಮಾಡಿತ್ತು. ಆದರೆ ಭಾರತ ಆಗ ಪಾಕಿಸ್ಥಾನದೊಂದಿಗೆ ಉತ್ತಮ ಸಂಬಂಧಕ್ಕಾಗಿ ಪ್ರಯತ್ನಿಸುತ್ತಿತ್ತು, ಆದರೆ ಕಾರಣವಿಲ್ಲದೆ ಶತ್ರುತ್ವವನ್ನು ಮಾಡುವುದು ಪಾಕಿಸ್ಥಾನದ ಸ್ವಭಾವವಾಗಿದೆ” ಎಂದು ಮೋದಿ ಪಾಕಿಸ್ಥಾನದ ವಿರುದ್ಧ ಹರಿಹಾಯ್ದರು.
ಕಾರ್ಗಿಲ್ ಯುದ್ಧದಲ್ಲಿ ಭಾರತದ ವೀರ ಯೋಧರು ತೋರಿಸಿದ ಪರಾಕ್ರಮ, ಭಾರತ ತೋರಿಸಿದ ಶಕ್ತಿ ಅಸಾಧಾರಣವಾದುದು ಎಂದು ಮೋದಿ ಬಣ್ಣಿಸಿದರು. ಈ ಸಮಯದಲ್ಲಿ ಕಾರ್ಗಿಲ್ ಗೆ ಹೋಗುವ ಮತ್ತು ನಮ್ಮ ಯೋಧರ ವೀರತ್ವವನ್ನು ನೋಡುವ ಸೌಭಾಗ್ಯ ದೊರೆತಿದ್ದು, ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದು ಎಂದರು. ಸಾಮಾಜಿಕ ಜಾಲತಾಣಗಳಲ್ಲಿ #CourageInKargil ಹಾಶ್ಟ್ಯಾಗ್ ಮೂಲಕ ಜನರು ವೀರರಿಗೆ ನಮಿಸುತ್ತಿರುವ ಬಗ್ಗೆ ಮೋದಿ ಸಂತಸ ವ್ಯಕ್ತಪಡಿಸಿದರು, ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ದೇಶವಾಸಿಗಳ ಪರವಾಗಿ ನಮ್ಮ ವೀರ ಯೋಧರ ಜೊತೆಜೊತೆಗೆ, ಅವರ ಮಾತೆಯರಿಗೂ ನಮಿಸುತ್ತೇನೆ. ಅವರು ಭಾರತಾಂಬೆಯ ನೈಜ ಪುತ್ರರಿಗೆ ಜನ್ಮ ನೀಡಿದ್ದಾರೆ ಎಂದರು.
ದೇಶದ ಜನರು ಆಡುವ ಮಾತುಗಳು ಗಡಿಯಲ್ಲಿ ಹೋರಾಡುವ ಯೋಧನ ಆತ್ಮಸ್ಥೈರ್ಯದ ಮೇಲೆ ಪ್ರಭಾವ ಬೀರುವುದರಿಂದ, ಜನರು ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಮೋದಿ ಕರೆ ನೀಡಿದರು.
ಕೊರೋನಾಗೆ ಸಂಬಂಧಿಸಿದಂತೆ ಜನರಿಗೆ ಎಚ್ಚರಿಕೆಯನ್ನು ನೀಡಿದ ಮೋದಿ, ಇಂದು ನಮ್ಮ ದೇಶದ ಚೇತರಿಕೆ ದರವು ಇತರ ದೇಶಗಳಿಗಿಂತ ಉತ್ತಮವಾಗಿದೆ, ಮರಣ ದರ ಕೂಡ ವಿಶ್ವದ ಅನೇಕ ರಾಷ್ಟ್ರಗಳಿಗಿಂತ ಸಾಕಷ್ಟು ಕಡಿಮೆಯಾಗಿದೆ. ಒಬ್ಬ ವ್ಯಕ್ತಿಯನ್ನು ಕೂಡ ಕಳೆದುಕೊಳ್ಳುವುದು ನಿಜಕ್ಕೂ ದುಃಖದ ಸಂಗತಿ. ಆದರೆ ಭಾರತ ತನ್ನ ಲಕ್ಷಾಂತರ ಜನರ ಜೀವವನ್ನು ಉಳಿಸಲು ಯಶಸ್ವಿಯಾಗಿದೆ. ಆದರೆ ಕೊರೋನಾದ ಅಪಾಯ ಇನ್ನೂ ದೂರವಾಗಿಲ್ಲ. ಕೆಲವೊಂದು ಪ್ರದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ನಾವು ಹೆಚ್ಚು ಜಾಗರೂಕತೆಯಿಂದ ಇರಬೇಕು, ಆರಂಭದಲ್ಲಿ ಇದ್ದಷ್ಟೇ ಈಗಲೂ ಕೊರೋನಾ ಅಪಾಯಕಾರಿಯಾಗಿದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಮಾಸ್ಕ್ ಧರಿಸಬೇಕು, ಎಲ್ಲೆಂದರಲ್ಲಿ ಉಗುಳಬಾರದು, ಎರಡು ಗಜಗಳ ಅಂತರ, ನಿರಂತರ ಕೈತೊಳೆಯುವಿಕೆ, ಸ್ವಚ್ಛತೆಗೆ ಗಮನ ಅತೀ ಮುಖ್ಯ ಎಂದರು.
‘ವೋಕಲ್ ಫಾರ್ ಲೋಕಲ್’ಗೆ ಉತ್ತೇಜನ ನೀಡುವ ಮೂಲಕ ಈ ಭಾರಿಯ ರಕ್ಷಾಬಂಧನವನ್ನು ಆಚರಣೆ ಮಾಡಬೇಕು ಎಂದು ಮೋದಿ ಕರೆ ನೀಡಿದರು. ಮಾತ್ರವಲ್ಲದೇ, ಭಾರತದ ಕರಕುಶಲ, ಕೈಮಗ್ಗಗಳನ್ನು ಬಳಸಬೇಕು ಮತ್ತು ಪ್ರಚುರಪಡಿಸಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡರು.
ಮಳೆಗಾಲದಲ್ಲಿ ಅನಾರೋಗ್ಯಗಳು ಹೆಚ್ಚು ಸಂಭವಿಸುವ ಕಾರಣ ಜನರು ಎಚ್ಚರಿಕೆಯಿಂದ ಇರಬೇಕು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು ಮತ್ತು ಸ್ವಚ್ಛತೆಗೆ ಗಮನ ನೀಡಬೇಕು ಎಂದು ಕರೆ ನೀಡಿದರು.
ಈ ಸ್ವಾತಂತ್ರ್ಯ ದಿನಾಚರಣೆಯಂದು ನಾವು ಸಾಂಕ್ರಾಮಿಕದಿಂದ ಮುಕ್ತಿ ಪಡೆಯುವ ಸಂಕಲ್ಪ ಮಾಡಬೇಕು, ಆತ್ಮ ನಿರ್ಭರ ಭಾರತದ ಸಂಕಲ್ಪ ಮಾಡಬೇಕು, ಹೊಸದನ್ನು ಕಲಿಯುವ ಮತ್ತು ಕಲಿಸುವ ಸಂಕಲ್ಪ ಮಾಡಬೇಕು. ಕರ್ತವ್ಯ ಪಾಲನೆಯ ಸಂಕಲ್ಪ ಮಾಡಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.