ನವದೆಹಲಿ: 370ನೇ ವಿಧಿ ರದ್ಧತಿ ಮತ್ತು ತ್ರಿವಳಿ ತಲಾಖ್ ಕಾಯ್ದೆ ಜಾರಿಗೊಂಡ ವಾರ್ಷಿಕೋತ್ಸವಗಳನ್ನು ಆಚರಣೆ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲಾ ಬಿಜೆಪಿ ಘಟಕಗಳಿಗೆ ಸೂಚನೆ ನೀಡಿದೆ ಎಂದು ವರದಿಗಳು ತಿಳಿಸಿವೆ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನರೇಂದ್ರ ಮೋದಿ ಸರ್ಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿತು ಮತ್ತು ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿತು. ಈ ಐತಿಹಾಸಿಕ ನಿರ್ಣಯಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಜುಲೈ 28ರಿಂದ ಆಗಸ್ಟ್ 3ರವರೆಗೆ ಬಿಜೆಪಿ ರಾಜ್ಯ ಘಟಕಗಳು ಸಮಾವೇಶವನ್ನು ಆಯೋಜನೆಗೊಳಿಸಲಿವೆ ಎಂದು ಹೇಳಲಾಗಿದೆ.
ಬಿಜೆಪಿ ತನ್ನ ರಾಜ್ಯ ಘಟಕಗಳ ಅಧ್ಯಕ್ಷರಿಗೆ ಮತ್ತು ಉಸ್ತುವಾರಿಗಳಿಗೆ ಪತ್ರ ಬರೆದಿದ್ದು, 370ನೇ ವಿಧಿಯನ್ನು ರದ್ದುಪಡಿಸಿದ ಒಂದು ವರ್ಷದ ಪೂರ್ಣಗೊಂಡ ಹಿನ್ನಲೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮತ್ತು ತ್ರಿವಳಿ ತಲಾಖ್ ಮಸೂದೆ ಕಾಯ್ದೆಯಾಗಿ ಮಾರ್ಪಟ್ಟ ವಾರ್ಷಿಕೋತ್ಸವದ ಸಮಯದಲ್ಲಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸುವಂತೆ ಸೂಚಿಸಿದೆ.
ಪಕ್ಷವು ರಾಷ್ಟ್ರಮಟ್ಟದಲ್ಲಿ ವರ್ಚುವಲ್ ಸಮಾವೇಶಗಳನ್ನು ಯೋಜಿಸಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ರಾಜ್ಯ ಘಟಕದ ಅಧ್ಯಕ್ಷರಿಗೆ ಬರೆದ ಪತ್ರದ ಪ್ರಕಾರ, ಪಕ್ಷದ ಒಬ್ಬ ರಾಷ್ಟ್ರೀಯ ಪದಾಧಿಕಾರಿ ಆಗಸ್ಟ್ 5 ರಂದು ಜಮ್ಮು, ಶ್ರೀನಗರ ಮತ್ತು ಲಡಾಕ್ನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹಾಜರಾಗಲಿದ್ದಾರೆ.
ಜಮ್ಮು-ಕಾಶ್ಮೀರ, ಲಡಾಖ್ ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು, ಕೇಂದ್ರ ಮತ್ತು ಆಯಾ ಸರ್ಕಾರಗಳ ಒಂದು ವರ್ಷದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲು ಪಕ್ಷವು ಸೂಚಿಸಿದೆ.
ತಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತು ಇತರ ಜನರೊಂದಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳಲು, ದೊಡ್ಡ ರಾಜ್ಯಗಳಲ್ಲಿ ಐದು ಮತ್ತು ಇತರ ರಾಜ್ಯಗಳಲ್ಲಿ ಎರಡು ವಿಡಿಯೋ ಕಾನ್ಫರೆನ್ಸ್ ನಡೆಸಲು ಬಿಜೆಪಿ ತನ್ನ ರಾಜ್ಯ ಘಟಕಗಳಿಗೆ ಸೂಚಿಸಿದೆ.
ಆಗಸ್ಟ್ 3 ರಂದು ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯನ್ನು ಸಹ ಯೋಜಿಸಲಾಗಿದೆ. ಪಕ್ಷವು ಜುಲೈ 28 ರಿಂದ ಆಗಸ್ಟ್ 3 ರವರೆಗೆ #EkBharatEkatmaBharat ಅಭಿಯಾನವನ್ನು ನಡೆಸಲಿದೆ.
ಕಳೆದ ವರ್ಷ ಆಗಸ್ಟ್ 1ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) 2019 ರ ಮಸೂದೆಗೆ ತಮ್ಮ ಅಂಕಿತ ಹಾಕಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.