ಶಿವಮೊಗ್ಗ: ಕೊರೋನಾ ಸಂಕಷ್ಟದಿಂದ ದೂರದೂರುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿವಮೊಗ್ಗದ ಜನರು ಮತ್ತೆ ತಮ್ಮ ತಮ್ಮ ಊರುಗಳನ್ನು ಸೇರಿದ್ದಾರೆ. ಹಲವಾರು ಜನರು ಜೀವನಾಧಾರವಾಗಿದ್ದ ಉದ್ಯೋಗವನ್ನೇ ಕಳೆದುಕೊಂಡು ಊರು ಸೇರುವಂತಾಗಿದ್ದು, ಅಂತಹವರಿಗೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಮತ್ತು ಮುಂದಿನ ದಿನಗಳಲ್ಲಿ ಅವರನ್ನು ಊರಿನಲ್ಲೇ ಉಳಿಸಿಕೊಳ್ಳುವಂತೆ ಮಾಡಲು ʼಸ್ಟೇ ಎಟ್ ಶಿವಮೊಗ್ಗʼ ಅಭಿಯಾನ ಆರಂಭಿಸಲಾಗಿದೆ.
ಕೊರೋನಾದಿಂದಾಗಿ ಜಿಲ್ಲೆಯ 1,600ಕ್ಕೂ ಹೆಚ್ಚು ಮಂದಿ ಊರಿಗೆ ಮರಳಿದ್ದಾರೆ. ಇವರಲ್ಲಿ ಹಲವರು ಮಾಡುತ್ತಿದ್ದ ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ. ಇಂತಹ ಜನರಲ್ಲಿ ಮತ್ತೆ ಚೈತನ್ಯ ಮೂಡಿಸುವ, ಅವರಿಗೆ ಊರಿನಲ್ಲೇ ಉದ್ಯೋಗ ಒದಗಿಸಿಕೊಡುವ ಸಲುವಾಗಿ ಈ ಅಭಿಯಾನ ಆರಂಭವಾಗಿದೆ. ಸಮಾನ ಮನಸ್ಕರು, ಉದ್ಯಮಿಗಳು ಸೇರಿ ‘ನಮ್ಮ ಕನಸಿನ ಶಿವಮೊಗ್ಗ’ ಆಂದೋಲನದ ಮೂಲಕ ಜನರಿಗೆ ಜಿಲ್ಲೆಯ ನಾನಾ ಭಾಗಗಳಲ್ಲಿನ ಕೈಗಾರಿಕೆಗಳಲ್ಲಿ ಉದ್ಯೋಗ ನೀಡುವ ಕೆಲಸವನ್ನು ಆರಂಭಿಸಿವೆ.
ಸದ್ಯ ಉದ್ಯೋಗ ಹುಡುಕಿಕೊಳ್ಳುವುದೂ ಸುಲಭದ ಮಾತಲ್ಲ. ಯಾವ ಕಂಪೆನಿಗಳೂ ಸದ್ಯ ಯಾವುದೇ ಕೆಲಸಗಳಿಗೆ ಜನರನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಯೂ ಇಲ್ಲ. ಒಂದು ವೇಳೆ ಕೆಲಸ ಸಿಗುತ್ತದೆಂದರೂ ಕೊರೋನಾ ಸಂಕಷ್ಟದಿಂದಾಗಿ ಜನರು ಹೋಗುವುದಕ್ಕೂ ಭಯ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹವರಿಗೆ ಸ್ಥಳೀಯವಾಗಿಯೇ ಉದ್ಯೋಗ ನೀಡುವ ಮೂಲಕ ಅವರ ಪ್ರತಿಭೆಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ಆಂದೋಲನಕ್ಕೆ ಎಪ್ರಿಲ್ 15 ರಂದು ಚಾಲನೆ ದೊರೆತಿದೆ. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿರುವ ಉದ್ಯೋಗಾಕಾಂಕ್ಷಿಗಳಲ್ಲಿ ಸುಮಾರು 2000 ದಷ್ಟು ಜನರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದು, ಅವರನ್ನು ಜಿಲ್ಲೆಯ ನಾನಾ ಕಂಪನಿಗಳ ಜೊತೆಗೆ ಸಂಪರ್ಕವೇರ್ಪಡುವಂತೆ ಮಾಡಲಾಗಿದೆ ಎಂಬುದು ಆಯೋಜಕರ ಮಾತು.
ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಇದೊಂದು ಮಹತ್ವದ ಕಾರ್ಯವಾಗಿದ್ದು, ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶದ ಮೂಲಕ ಜೀವನ ಕಟ್ಟಿಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ. ಜೊತೆಗೆ ಈ ಅಭಿಯಾನದಡಿಯಲ್ಲಿ ನವೋದ್ಯಮಕ್ಕೂ ಮನ್ನಣೆ ನೀಡಲಾಗಿದ್ದು, 30 ಕ್ಕೂ ಅಧಿಕ ಕ್ಷೇತ್ರದಲ್ಲಿ ಹೊಸ ಉದ್ಯಮಗಳ ಆರಂಭಕ್ಕೆ ಜನರು ಆಸಕ್ತರಾಗಿದ್ದಾರೆ. ಇನ್ನು ಈ ಅಭಿಯಾನದಡಿಯಲ್ಲಿರುವ ಉದ್ಯೋಗಕ್ಕೆ ಸಂಬಂಧಿಸಿದಂತೆ ವೆಬ್ಸೈಟ್ ಒಂದನ್ನು ಆರಂಭಿಸಲಾಗಿದ್ದು ಉದ್ಯೋಗಾವಕಾಶ ಸೇರಿದಂತೆ ಮತ್ತಿತರ ಮಾಹಿತಿಗಳನ್ನು ನೀಡುವ ಕೆಲಸವೂ ಆಗುತ್ತಿದೆ.
ಒಟ್ಟಾರೆಯಾಗಿ ಕೊರೋನಾ ಬಿಕ್ಕಟ್ಟಿನಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ದ ಮಲೆನಾಡಿನ ಮಂದಿಗೆ, ಮತ್ತೆ ತಮ್ಮ ಬದುಕು ಕಟ್ಟಿಕೊಳ್ಳುವುದಕ್ಕೆ ನಮ್ಮ ಕನಸಿನ ಶಿವಮೊಗ್ಗ ಮತ್ತು ಸ್ಟೇ ಎಟ್ ಶಿವಮೊಗ್ಗ ಅಭಿಯಾನಗಳು ಸಹಾಯ ಮಾಡುತ್ತಿರುವುದು ಸುಳ್ಳಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.