ಬೆಂಗಳೂರು: ಕೊರೋನಾ ಸಂಬಂಧಿಸಿದಂತೆ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.
ಪ್ರಕರಣಕ್ಕೆ ಕುರಿತಂತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಆರ್. ಅಶೋಕ್, ಶ್ರೀ ರಾಮುಲು, ಡಾ. ಸುಧಾಕರ್, ಡಾ. ಅಶ್ವತ್ಥ್ ನಾರಾಯಣ್ ಮತ್ತು ಬಸವರಾಜ ಬೊಮ್ಮಾಯಿ ಅವರು, ವಿಪಕ್ಷ ನಾಯಕರ ಗಂಭೀರ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಕಾಂಗ್ರೆಸ್ ನಾಯಕರ ಆರೋಪವನ್ನು ತಳ್ಳಿ ಹಾಕಿರುವ ಡಾ. ಸುಧಾಕರ್, ಕೊರೋನಾ ಸಂದರ್ಭದಲ್ಲಿ ಸುಖಾಸುಮ್ಮನೆ ಕಾಂಗ್ರೆಸ್ ನಾಯಕರು ಹಗರಣಗಳು ನಡೆದಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ. ತಮ್ಮ ಅವಧಿಯಲ್ಲಾಗಿರುವ ಭ್ರಷ್ಟಾಚಾರಗಳನ್ನು ಮುಚ್ಚಿಟ್ಟು, ಈಗ ಬಿಜೆಪಿ ಸರ್ಕಾರದ ಬಗ್ಗೆ ದಾಖಲೆಗಳಿಲ್ಲದೆ ಆರೋಪ ಮಾಡುತ್ತಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರದ ಜೊತೆಗೆ ಕೈಜೋಡಿಸುವ ಕೆಲಸ ಮಾಡುವುದನ್ನು ಬಿಟ್ಟು, ಸುಳ್ಳು ಹೇಳಿಕೊಂಡು ಹೊಲಸು ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಮಾಹಿತಿ ಕೊರತೆಯಿಂದ ಮತ್ತು ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಆ ಮೂಲಕವಾದರೂ ಜನರ ಸಿಂಪತಿ ಪಡೆದುಕೊಂಡು ಮತ್ತೆ ಪಕ್ಷ ಕಟ್ಟುವ ಹುನ್ನಾರ ಕಾಂಗ್ರೆಸ್ ನಾಯಕರದ್ದಾಗಿದೆ. ಆದ್ದರಿಂದಲೇ ಕೊರೋನಾ ಅವಧಿಯಲ್ಲಿಯೂ ಈ ರೀತಿಯಾಗಿ ಆರೋಪಿಸಿ ಜನರ ಮುಂದೆ ಬೆತ್ತಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್, ಪಿಪಿಇ ಕಿಟ್ ಖರೀದಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆದಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರ 330 ರೂ. ಗಳಂತೆ ಒಟ್ಟು 1.5 ಲಕ್ಷ ಪಿಪಿಇ ಕಿಟ್ ಗಳನ್ನು ಖರೀದಿಸಿದೆ. ಆದರೆ ಕಾಂಗ್ರೆಸ್ 2100 ರೂ. ಗಳನ್ನು ನೀಡಿ ಚೀನಾ ದಿಂದ.ಪಿಪಿಇ ಕಿಟ್ ಗಳನ್ನು ಖರೀದಿ ಮಾಡಲಾಗಿದೆ ಎಂದು ಆರೋಪಿಸುತ್ತಿದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಪಿಪಿಇ ಕಿಟ್ ಗಳು ಉತ್ಪಾದನೆಯಾಗದ ಸಂದರ್ಭದಲ್ಲಿ ಚೀನಾ ದಿಂದ 3 ಲಕ್ಷ ಕಿಟ್.ಗಳನ್ನು ಖರೀದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ವೆಂಟಿಲೇಟರ್ ಖರೀದಿಯಲ್ಲಿಯೂ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದು, ಈ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ದಾಖಲೆಗಳಿಲ್ಲದೆ ಆರೋಪ ಮಾಡುವ ಮೂಲಕ ಬೇಜವಾಬ್ದಾರಿ ವರ್ತನೆ ತೋರಿದ್ದಾರೆ. ಜನರನ್ನು ತಪ್ಪು ದಾರಿಗೆಳೆಯಲು ಪ್ರಯತ್ನ ನಡೆಸುತ್ತಿರುವುದಾಗಿಯೂ ಅಶ್ವತ್ಥ್ ನಾರಾಯಣ ಅವರು ಕಿಡಿ ಕಾರಿದ್ದಾರೆ. ಜೊತೆಗೆ ದಾಖಲೆಗಳಿಲ್ಲದೆ ಆರೋಪಿಸುವುದು ಸರಿಯಲ್ಲ. ರಾಜಕೀಯ ಪ್ರೇರಿತ ಆರೋಪಗಳನ್ನು ಬಿಟ್ಟು ಜವಾಬ್ದಾರಿಯುತವಾಗಿ ಕಾಂಗ್ರೆಸ್ ನಾಯಕರು ವರ್ತಿಸಿದಲ್ಲಿ ಉತ್ತಮ ಎಂದು ತಿಳಿಸಿದ್ದಾರೆ.
97-147 ರೂ. ಗಳೊಳಗೆ ಸರ್ಕಾರ ಮಾಸ್ಕ್ ಖರೀದಿ ಮಾಡಿದೆ. ಎಸ್ ಎಂ ಕಂಪನಿಯಿಂದ ಸ್ಯಾನಿಟೈಸರ್ ಖರೀದಿ ಮಾಡಿರುವ ಬಗ್ಗೆ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಇಂತಹ ಒಂದು ಖರೀದಿ ನಡೆದೇ ಇಲ್ಲ. ಆಕ್ಸಿಜನ್ ಸಹ ದುಡ್ಡು ಕಒಟ್ಟು ಖರೀದಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಯಾವುದೇ ರೀತಿಯಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡದೆ, ಯಾವುದೇ ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳದೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಮಾತನಾಡುತ್ತಿದ್ದು, ಇದು ಅವರಿಗೆ ಶೋಭೆಯಲ್ಲ ಎಂದು ತಿಳಿಸಿದ್ದಾರೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ನೀಡಿರುವ ಬಸವರಾಜ ಬೊಮ್ಮಾಯಿ ಅವರು, ಸರ್ಕಾರದ ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದಂತೆ ಈ ವರೆಗೆ ವೈದ್ಯಕೀಯ ಉಪಕರಣಗಳ ಖರೀದಿಗೆ 2118 ಕೋಟಿ ರೂ. ಗಳನ್ನು ಬಳಕೆ ಮಾಡಲಾಗಿದೆ. 1000 ವೆಂಟಿಲೇಟರ್ ಗಳನ್ನು ಸರ್ಕಾರ ಖರೀದಿ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ಸರ್ಕಾರ 248 ವೆಂಟಿಲೇಟರ್ ಗಳನ್ನಷ್ಟೇ ಈ ವರೆಗೆ ಖರೀದಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆರ್. ಅಶೋಕ್, 50 ವರ್ಷಗಗಳ ಕಾಲ ರಾಜ್ಯವನ್ನಾಳಿ ಕಾಂಗ್ರೆಸ್ ಲೂಟಿ ಹೊಡೆದಿದೆ. ಈಗ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿಯೂ ಜನರ ದಾರಿ ತಪ್ಪಿಸುವ ಕಾಂಗ್ರೆಸ್ ನ ಪ್ರಯತ್ನ ಸಫಲವಾಗಲಾರದು ಎಂದು ಹೇಳಿದ್ದಾರೆ. ಕೊರೋನಾ ಸಂದರ್ಭದಲ್ಲಿ ಬಳಕೆ ಮಾಡಿರುವ ಪ್ರತಿ ಪೈಸೆಗಳ ಲೆಕ್ಕವನ್ನೂ ದಾಖಲೆ ಸಮೇತ ಬಿಜೆಪಿ ಇಟ್ಟುಕೊಂಡಿದೆ. ಈ ಆರೋಪ ಸುಳ್ಳು ಎಂಬುದಕ್ಕೆ ಬೇಕಾದ ಎಲ್ಲಾ ದಾಖಲೆಗಳೂ ಸರ್ಕಾರದ ಬಳಿ ಇದೆ. ಕಾಂಗ್ರೆಸ್ ಯಾವುದೇ ದಾಖಲೆಗಳನ್ನು ಬೇಕಾದರೂ ಪರಿಶೀಲನೆ ನಡೆಸಿ ಸತ್ಯ ಕಂಡುಕೊಳ್ಳಬಹುದಾಗಿದೆ ಎಂದೂ ಅವರು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.