ವಾಷಿಂಗ್ಟನ್: ಇಡೀ ವಿಶ್ವದಲ್ಲಿ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಭಾರತ ವಿಶ್ವಾಸಕ್ಕೆ ಯೋಗ್ಯವಾದ ಪಾಲುದಾರ ದೇಶವಾಗಿದೆ ಎಂದು ಅಮೆರಿಕಾದಲ್ಲಿನ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಅಮೆರಿಕ ಬ್ಯುಸಿನೆಸ್ ಕೌನ್ಸಿಲ್ ಆಯೋಜಿಸಿದ್ದ ಇಂಡಿಯಾಸ್ ಐಡಿಯಾ ಸಮಿಟ್ ನಲ್ಲಿ ಮಾತನಾಡಿದ ಅವರು, ಕೊರೋನಾ ಬಿಕ್ಕಟ್ಟಿನ ಅವಧಿಯಲ್ಲಿ ಭಾರತವನ್ನು ಕಾಪಾಡುವ ಜೊತೆಗೆ, ವಿಶ್ವದ ಹಲವು ರಾಷ್ಟ್ರಗಳಿಗೆ ಭಾರತ ನೆರವಿನ ಹಸ್ತವನ್ನು ಚಾಚಿದೆ. ಚಿಕಿತ್ಸೆಗೆ ಪೂರಕವಾದ ಅಗತ್ಯ ಉಪಕರಣಗಳನ್ನೂ, ಔಷಧಗಳನ್ನು 100 ಕ್ಕೂ ಅಧಿಕ ರಾಷ್ಟ್ರಗಳಿಗೆ ಭಾರತ ಸರಬರಾಜು ಮಾಡುವ ಮೂಲಕ ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.
ಕೊರೋನಾ ಬಿಕ್ಕಟ್ಟು ವಿಶ್ವಕ್ಕೆ ಆಘಾತದ ಜೊತೆಗೆ, ಹೊಸ ಅವಕಾಶಗಳಿಗೆ ತೆರೆದುಕೊಳ್ಳುವುದಕ್ಕೂ ಅನುಕೂಲ ಮಾಡಿಕೊಟ್ಟಿದೆ. ಜಗತ್ತು ಪ್ರಸ್ತುತ ಎದುರಿಸುತ್ತಿರುವ ಸ್ಥಿತಿಯು ಸಮರ್ಥ ನಿರ್ವಹಣೆ ಹಾಗೂ ವಿಶ್ವಾಸಾರ್ಹ ಪಾಲುದಾರಿಕೆಯ ಮಹತ್ವವನ್ನು ಜಗತ್ತಿಗೆ ಮನಗಾಣಿಸಿಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಭಾರತ ದೇಶ ಜಗತ್ತಿನಲ್ಲೇ ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರ ಎಂದು ಹೇಳಬಹುದಾಗಿದೆ ಎಂದು ಸಂಧು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಭಾರತ ಅಮೆರಿಕಕ್ಕೂ ಅಗತ್ಯ ವಸ್ತುಗಳ ಜೊತೆಗೆ ಬೆಂಬಲವನ್ನು ನೀಡಿರುವುದಾಗಿ ಅವರು ಹೇಳಿದ್ದಾರೆ. ಜೊತೆಗೆ ಆರೋಗ್ಯ, ಲಸಿಕೆಗಳ ಸಂಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕ ದೇಶಗಳೆರಡೂ ಜಂಟಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಸಂಧು ಹೇಳಿದ್ದಾರೆ. ಕೊರೋನಾ ಅವಧಿ ಮತ್ತು ಕೊರೋನಾ ನಂತರದ ಅವಧಿಯಲ್ಲಿ ತಂತ್ರಜ್ಞಾನ ಜಗತ್ತಿನಲ್ಲಿ ಅತಿ ಮುಖ್ಯ ಪಾತ್ರ ವಹಿಸಲಿದೆ. ಶಿಕ್ಷಣ, ಉದ್ಯಮ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆಯೂ ಉಭಯ ರಾಷ್ಟ್ರಗಳು ತಮ್ಮ ಚಿಂತನೆಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿರುವುದಾಗಿಯೂ ಅವರು ತಿಳಿಸಿದ್ದಾರೆ.
ಪ್ರಸ್ತುತ ಭಾರತವು ಡಿಜಿಟಲೈಸೇಷನ್ ವಿಚಾರದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಭಾರತದ ಸರ್ಕಾರವೂ ಅಭಿವೃದ್ಧಿಗೆ ಪೂರಕವಾಗಿರುವ ಎಲ್ಲಾ ಕ್ಷೇತ್ರಗಳ ಬೆಳವಣಿಗೆಯ ವಿಚಾರದಲ್ಲಿಯೂ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡುತ್ತಿದೆ ಎಂದೂ ಸಂಧು ಅವರು ತಿಳಿಸಿದ್ದಾರೆ. ಜೊತೆಗೆ ಜಗತ್ತಿನ ವಿವಿಧ ರಾಷ್ಟ್ರಗಳ ಜೊತೆಗೆ ವ್ಯಾಪಾರ ವಹಿವಾಟಿನ ಉತ್ತಮ ಸಂಬಂಧವನ್ನು ಹೊಂದಿದ್ದು, ಆ ಮೂಲಕ ಜಗತ್ತಿನ ವಿಶ್ವಾಸಾರ್ಹ ಪಾಲುದಾರನಾಗಿ ಹೊರಹೊಮ್ಮಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.