ಮೈಸೂರು: ಜಗತ್ತು ಕೊರೋನಾ ಎಂಬ ಮಾರಕ ವೈರಸ್ ನ ಕೈಗೆ ಸಿಕ್ಕಿ ನಲುಗುತ್ತಿದೆ. ಭಾರತವೂ ಸೇರಿದಂತೆ ವಿಶ್ವದ ಹೆಚ್ಚಿನ ರಾಷ್ಟ್ರಗಳು ಕೊರೋನಾ ದಿಂದಾಗಿ ಆರ್ಥಿಕ, ಆರೋಗ್ಯದ ಅಸಮತೋಲನಕ್ಕೆ ತುತ್ತಾಗಿವೆ. ಭಾರತದಲ್ಲಿ ಇದರಿಂದಾಗಿ ಲಾಕ್ಡೌನ್ ಜಾರಿಯಾಯಿತು. ಕರ್ನಾಟಕದಲ್ಲಿಯೂ ಲಾಕ್ಡೌನ್ ಜಾರಿಯಾಯಿತು. ಈ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೂ ಬೀಗ ಬಿದ್ದಿದೆ. ಕೊರೋನಾ ಕಾರಣದಿಂದ ಮನೆಯಲ್ಲೇ ಬಂಧಿಗಳಾದ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡುವ ಮೂಲಕವೂ ಸುದ್ದಿಯಾಗುತ್ತಿದ್ದಾರೆ.
ಇದು ಮೈಸೂರಿನ ಟಿ ನರಸೀಪುರ ಜಿಲ್ಲೆಯ ಧರ್ಮಯ್ಯನಹುಂಡಿ ಗ್ರಾಮದ ಮಹಾದೇವ ಪ್ರಸಾದ್ ಎಂಬ ಹುಡುಗನ ಕಥೆ. ರೈತ ಕುಟುಂಬದಿಂದ ಬಂದ ಈ ಹುಡುಗ ಹಳೆಯ ಸೈಕಲ್ ಅನ್ನು ಬಳಸಿ ಹೊಲ ಗದ್ದೆಗಳಲ್ಲಿ ಕಳೆ ಕೀಳುವುದಕ್ಕೆ ಉಪಯೋಗವಾಗುವಂತಹ ಉಪಕರಣವೊಂದನ್ನು ಸಂಶೋಧಿಸಿದ್ದಾರೆ. ಅಂತರ್ಜಾಲದಲ್ಲಿ ವಿಡಿಯೋ ಒಂದನ್ನು ನೋಡಿ ಪ್ರೇರಿತನಾದ ಈ ಹುಡುಗ ತನ್ನ ಮನೆಯಲ್ಲಿದ್ದ ಹಳೆಯ ಸೈಕಲ್ ಅನ್ನು ಬಳಕೆ ಮಾಡಿ ಅದರಲ್ಲೇ ಕಳೆ ಕೀಳುವ ಯಂತ್ರವೊಂದನ್ನು ಸಿದ್ಧ ಪಡಿಸಿದ್ದು, ಆ ಮೂಲಕ ಹಳ್ಳಿಗರಿಂದ ಶಹಬ್ಬಾಸ್ ಎನಿಸಿಕೊಂಡಿದ್ದಾರೆ. ಈ ಸೈಕಲ್ ಯಂತ್ರವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಯ ಬಿಟ್ಟಿದ್ದು, ಇದನ್ನು ವೀಕ್ಷಿಸಿದ ನೆಟ್ಟಿಗರೂ ಹುಡುಗನ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಅಂದ ಹಾಗೆ ಸೈಕಲ್ ನ ಒಂದು ಚಕ್ರ ಹ್ಯಾಂಡಲ್, ಕಳೆ ಕೀಳಲು ಪೂರಕವಾಗುವಂತಹ ಕಬ್ಬಿಣದ ಸಾಮಗ್ರಿಗಳನ್ನು ಬಳಕೆ ಮಾಡಿ ಕೇವಲ 400 ರೂ. ಗಳನ್ನು ವ್ಯಯಿಸಿ ಈ ಯಂತ್ರವನ್ನು ಸಿದ್ಧಪಡಿಸಿದ್ದಾರೆ. ಈ ಯಂತ್ರವನ್ನು ಬಳಸಿ ಹೇಗೆ ಬಿತ್ತನೆ ಪ್ರದೇಶವನ್ನು ಹಸನು ಮಾಡುವುದು ಎಂಬುದರ ಪ್ರಾತ್ಯಕ್ಷಿಕೆಯನ್ನೂ ಮಹದೇವ ಪ್ರಸಾದ್ ಅವರು ವಿಡಿಯೋದಲ್ಲಿ ಸಾದರಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರೈತರಿಗೆ ಗದ್ದೆ, ನಾಟಿ, ಬಿತ್ತನೆ ಕೆಲಸಗಳಿಗೆ ಸರಿಯಾಗಿ ಕೆಲಸಗಾರರು ಸಿಗುತ್ತಿಲ್ಲ. ಜೊತೆಗೆ ಕಳೆ ತುಂಬಿರುವ ಪ್ರದೇಶಗಳಲ್ಲಿ ಪೂರಕ ಇಳುವರಿಯನ್ನು ಪಡೆಯುವುದಕ್ಕೂ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಮನಗಂಡ ಮಹದೇವ ಪ್ರಸಾದ್ ಅವರು ಸೈಕಲ್ ಯಂತ್ರ ಸಿದ್ಧಪಡಿಸಿದ್ದಾರೆ. ತಮ್ಮ ಜಮೀನಿನಲ್ಲಿ ಬೆಳೆಯುವ ಶೇಂಗಾ ಬೆಳೆಗೂ ಕಳೆಗಳು ತೊಂದರೆ ನೀಡುತ್ತಿದ್ದು, ಈ ಯಂತ್ರವನ್ನು ಬಳಸಿ ಒಬ್ಬನೇ ವ್ಯಕ್ತಿ ಕಳೆ ಕೀಳುವುದಕ್ಕೂ ಇದು ಸಹಾಯ ಮಾಡಲಿದೆ ಎಂದು ಮಹದೇವ ಪ್ರಸಾದ್ ಅವರ ಅಭಿಪ್ರಾಯ. ಜೊತೆಗೆ ಪರಿಸರಕ್ಕೂ ಇದರಿಂದ ಯಾವುದೇ ರೀತಿಯ ಹಾನಿ, ಅಡ್ಡ ಪರಿಣಾಮಗಳಾಗುವುದಿಲ್ಲ ಎಂಬ ಭರವಸೆಯನ್ನೂ ಮಹದೇವ ಪ್ರಸಾದ್ ನೀಡುತ್ತಾರೆ.
ಕೊರೋನಾ ಸಂಕಷ್ಟದ ಈ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತದ ಕನಸನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಸ್ವಾವಲಂಬಿ ರಾಷ್ಟ್ರ ನಿರ್ಮಾಣದ, ಸ್ವದೇಶೀ ವಸ್ತುಗಳನ್ನು ಹೆಚ್ಚು ಉತ್ಪಾದಿಸುವ, ಸ್ಥಳೀಯ ಸಣ್ಣ ಉದ್ಯಮಗಳಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೋದಿ ಅವರ ಸ್ವದೇಶಿ ಕಲ್ಪನೆ ಮತ್ತು ಸ್ವಾವಲಂಬನೆಯ ಉದ್ದೇಶದ ದೃಷ್ಟಿಯಿಂದ ಮೈಸೂರಿನ ಹುಡುಗನ ಈ ಹೊಸ ಅವಿಷ್ಕಾರ ಮಹತ್ವ ಪಡೆಯುತ್ತದೆ ಎಂದರೂ ತಪ್ಪಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.