ಬೆಂಗಳೂರು: ಕೊರೋನಾ ಭಯ ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಅನೇಕ ಜನರು ಕೊರೋನಾ ಟೆಸ್ಟ್ ಗಳನ್ನೂ ಮಾಡಿಸಿಕೊಳ್ಳುತ್ತಿದ್ದಾರೆ. ಪರೀಕ್ಷಾ ವರದಿಗಳ ವಿಚಾರಕ್ಕೆ ಬಂದರೆ, ಕೊರೋನಾ ಪಾಸಿಟಿವ್ ವರದಿ ಬಂದವರಿಗೆ ಲ್ಯಾಬ್ ಗಳಿಂದ ಎಸ್ ಎಂ ಎಸ್ ಮೂಲಕ ಫಲಿತಾಂಶ ತಿಳಿಸಲಾಗುತ್ತಿದೆ. ಆದರೆ ನೆಗೆಟಿವ್ ಬಂದ ವ್ಯಕ್ತಿಗಳ ವರದಿಯನ್ನು ಅವರಿಗೆ ತಿಳಿಸುವ ಕೆಲಸವಾಗುತ್ತಿಲ್ಲ. ಇದರಿಂದ ಜನರಲ್ಲಿ ಗೊಂದಲಗಳುಂಟಾಗುತ್ತಿದ್ದು, ಇದರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಹೊಸ ಆದೇಶವೊಂದನ್ನು ನೀಡಿದೆ.
ಕೊರೋನಾ ಪರೀಕ್ಷೆಗಳನ್ನು ನಡೆಸಿದ ಲ್ಯಾಬ್ ಗಳು ಕಡ್ಡಾಯವಾಗಿ ಪರೀಕ್ಷಾ ಫಲಿತಾಂಶದ ವರದಿಗಳನ್ನು ಸಂಬಂಧಿಸಿದವರಿಗೆ ಎಸ್ಸೆಮ್ಮೆಸ್ ಮೂಲಕ ತಿಳಿಸುವಂತೆ ಸೂಚನೆ ನೀಡಿದೆ. ಇಂದಿನಿಂದಲೇ ವರದಿ ಪಾಸಿಟಿವ್ ಅಥವಾ ನೆಗೆಟಿವ್ ಇರಲಿ, ಎರಡೂ ವರದಿಗಳನ್ನು ಸಂಬಂಧಿಸಿದವರಿಗೆ ಕಡ್ಡಾಯವಾಗಿ ತಿಳಿಹಬೇಕು. ಆ ಮೂಲಕ ವೃಥಾ ಗೊಂದಲವಾಗುವುದನ್ನು ತಪ್ಪಿಸಿಕೊಳ್ಳಬೇಕು ಎಂದೂ ರಾಜ್ಯ ಸರ್ಕಾರ ಲ್ಯಾಬ್ ಗಳಿಗೆ ಸೂಚನೆಯನ್ನು ನೀಡಿದೆ.
ಈ ವರೆಗೂ ರಾಜ್ಯದಲ್ಲಿ ಕೊರೋನಾ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದ ವ್ಯಕ್ತಿಗಳಿಗೆ ಮಾತ್ರ ಪರೀಕ್ಷಾ ವರದಿ ಎಸ್ಸೆಮ್ಮೆಸ್ ಮೂಲಕ ಕಳುಹಿಸಲಾಗುತ್ತಿತ್ತು. ಹಾಗೆಯೇ ಅವರ ಚಿಕಿತ್ಸೆಗೆ ಬೇಕಾದ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು. ಆದರೆ ಕೊರೋನಾ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬಂದವರಿಗೆ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಅವರು ವರದಿಗಾಗಿ ಕಾಯುತ್ತಾ, ಅನಾವಶ್ಯಕ ಭಯದಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದಲೇ ಕೊರೋನಾ ನೆಗೆಟಿವ್ ವರದಿಗಳನ್ನೂ ಸಂಬಂಧಿಸಿದವರಿಗೆ ಎಸ್ಸೆಮ್ಮೆಸ್ ಮೂಲಕ ನೀಡಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಸದ್ಯ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವ್ಯವಹಾರಗಳ ಇಲಾಖೆಯು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಇಂದಿನಿಂದ ತೊಡಗಿದಂತೆ ಕೊರೋನಾ ನೆಗೆಟಿವ್ ಇದ್ದವರಿಗೂ ಅವರ ಪರೀಕ್ಷಾ ವರದಿಗಳನ್ನು ಎಸ್ಸೆಮ್ಮೆಸ್ ಮೂಲಕ ಕಡ್ಡಾಯವಾಗಿ ತಿಳಿಸುವಂತೆ ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.