ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸಂಕಷ್ಟದ ಕಾರಣದಿಂದಾಗಿ ಶಾಲೆಗಳನ್ನು ಆರಂಭ ಮಾಡುವುದು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಜುಲೈ ನಿಂದ ಡಿಸೆಂಬರ್ ತಿಂಗಳಿನ ವರೆಗೆ 8,9 ಮತ್ತು 10 ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯ ಮೂಲಕ ಪಾಠ ಪ್ರಸಾರಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಕೊರೋನಾ ಸಂಕಷ್ಟದಿಂದ ವಿದ್ಯಾರ್ಥಿಗಳಿಗಾಗುವ ಶೈಕ್ಷಣಿಕ ನಷ್ಟವನ್ನು ಕೊಂಚ ಮಟ್ಟಿಗಾದರೂ ಸರಿಪಡಿಸಲು ಪ್ರಯತ್ನ ನಡೆಸುತ್ತಿರುವ ರಾಜ್ಯ ಸರ್ಕಾರ ಈ ಪ್ರಯತ್ನಕ್ಕೆ ಒಪ್ಪಿಗೆ ನೀಡಿದೆ. ಇದರ ಅನುಷ್ಠಾನಕ್ಕೆ 1.60 ಕೋಟಿ ರೂ. ಗಳು ವೆಚ್ಚವಾಗಲಿದ್ದು, ಈ ಖರ್ಚನ್ನು ಪ್ರಾಥಮಿಕ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿ, ಇನ್ನಿತರ ಸಾಮಗ್ರಿಗಳ ಖರೀದಿಗೆಂದು ಬಿಡುಗಡೆ ಮಾಡಲಾಗಿರುವ ಅನುದಾನದಿಂದಲೇ ಬಳಕೆ ಮಾಡಲಾಗುತ್ತದೆ ಎಂದೂ ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರ ರೂಪುರೇಶೆಗಳನ್ನು ಸಿದ್ಧಪಡಿಸುತ್ತಿದ್ದು, ಈ ಪಾಠ ಪ್ರವಚನಗಳು ಹೆಚ್ಚು ಮಕ್ಕಳನ್ನು ತಲುಪುವಂತಾಗಲು ಯೂಟ್ಯೂಬ್ ನಲ್ಲಿಯೂ ಅಪ್ಲೋಡ್ ಮಾಡಲಾಗುವುದು ಎಂದು ತಿಳಿಸಿದೆ. ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಲು ದೂರದರ್ಶನ ದ ಲಭ್ಯತೆ ಇಲ್ಲದೇ ಹೋದಲ್ಲಿ, ಈ ಸೌಲಭ್ಯವನ್ನು ಹೊಂದಿರುವ ವಿದ್ಯಾರ್ಥಿಗಳ ಜೊತೆ ಸಂಯೋಜನೆ ಮಾಡಿಕೊಡುವ ಜವಾಬ್ದಾರಿ ಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ನೀಡಲಾಗಿದೆ.
ಜೊತೆಗೆ ಓರ್ವ ಅಧ್ಯಾಪಕನಿಗೆ 20 ವಿದ್ಯಾರ್ಥಿಗಳ ಹೊಣೆಯನ್ನು ನೀಡುವಂತೆಯೂ ಸೂಚಿಸಲಾಗಿದೆ. ಪಾಠ ಪ್ರವಚನಗಳು ಆರಂಭವಾಗಿ ಒಂದು ತಿಂಗಳ ಬಳಿಕ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕು ಎಂದೂ ಸರ್ಕಾರ ಶಿಕ್ಷಕರಿಗೆ ಮಾಹಿತಿ ನೀಡಿದೆ.
ಇನ್ನು ಇದಕ್ಕೆ ತಗುಲುವ ಖರ್ಚು ವೆಚ್ಚಗಳ ಬಗೆಗೂ ರಾಜ್ಯ ಸರ್ಕಾರ ಲೆಕ್ಕಾಚಾರ ಮಾಡಿದೆ. 8 ಅವಧಿಗಳನ್ನು ನಡೆಸಲು 30 ನಿಮಿಷಗಳಂತೆ 4 ಗಂಟೆಗಳು ಬೇಕಾಗಿದ್ದು, ಪಾಠ ಪ್ರವಚನ ನಡೆಸಿಕೊಡುವ ಸಂಪನ್ಮೂಲ ವ್ಯಕ್ತಿಗಳ ಸಂಭಾವನೆ, ತಂತ್ರಜ್ಞರ ಸಂಭಾವನೆ, ಸ್ಟುಡಿಯೋ ಖರ್ಚು,ಆಹಾರ ವೆಚ್ಚ ಸೇರಿದಂತೆ ಇನ್ನಿತರ ವೆಚ್ಚಗಳ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.