ಬೆಂಗಳೂರು: ಕೊರೋನಾ ಸೋಂಕಿನ ಸಮಸ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಸೋಂಕಿನ ನಿರ್ವಹಣೆ, ಚಿಕಿತ್ಸೆಗೆ ತೆಗೆದುಕೊಳ್ಳಲಾಗುತ್ತಿರುವ ಪೂರಕ ಕ್ರಮಗಳ ಬಗ್ಗೆ ಇಂದು ಸಭೆ ನಡೆಸಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಾಹಿತಿ ಪಡೆದುಕೊಂಡರು.
ನಗರದ ಉಸ್ತುವಾರಿ ವಹಿಸಿಕೊಂಡಿರುವ 8 ಸಚಿವರ ಜೊತೆಗೆ ಸಭೆ ನಡೆಸಿದ ಅವರು, ಕೊರೋನಾ ಸೋಂಕು ತಡೆಯುವುದಕ್ಕೆ ಲಾಕ್ಡೌನ್ ಪೂರಕ ಕ್ರಮವಲ್ಲ. ಅದನ್ನು ಮುಂದುವರಿಸುವ ಯಾವುದೇ ಯೋಚನೆ ರಾಜ್ಯ ಸರ್ಕಾರದ ಮುಂದಿಲ್ಲ ಎಂದೂ ತಿಳಿಸಿದರು. ಮತ್ತೆ ಲಾಕ್ಡೌನ್ ವಿಸ್ತರಣೆ ಮಾಡುವುದಿಲ್ಲ ಎಂಬ ಭರವಸೆಯನ್ನೂ ಅವರು ಈ ಸಂದರ್ಭ ನೀಡಿದ್ದಾರೆ.
ಅಲ್ಲದೆ ಕೊರೋನಾ ರೋಗಿಗಳ ಚಿಕಿತ್ಸೆಗೆ ತೆಗೆದುಕೊಳ್ಳಲಾಗುತ್ತಿರುವ ಪೂರಕ ಕ್ರಮಗಳ ಕುರಿತಾಗಿಯೂ ಮಾತನಾಡಿರುವ ಅವರು, ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ರೋಗಿಗಳು ಚಿಕಿತ್ಸೆಗಾಗಿ ಅಲೆದಾಟ, ಪರದಾಟ ನಡೆಸುವಂತಾಗಬಾರದು ಎಂದೂ ಅವರು ತಿಳಿಸಿದ್ದಾರೆ. ಜೊತೆಗೆ ಸಮರ್ಪಕವಾಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆಯೂ ಅವರು ಸೂಚಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಹಾಸಿಗೆ ನೀಡಲು ಹಿಂದೇಟು ಹಾಕಿದರೆ ಕ್ರಮ ಕೈಗೊಳ್ಳುವಂತೆಯೂ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ದಾಖಲಾತಿ, ಹಾಸಿಗೆಗಳ ಲಭ್ಯತೆ ಮೊದಲಾದವುಗಳನ್ನು ಗಮನಿಸಲು ನೋಡಲ್ ಅಧಿಕಾರಿಗಳು, ಸ್ವಯಂಸೇವಕರನ್ನು ನಿಯೋಜನೆ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.
ಕೊರೋನಾ ರೋಗಿಗಳಿಗೆ ಪರೀಕ್ಷೆ ನಡೆಸಿ ವರದಿ ಬಂದ ಕೂಡಲೇ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಸಿದ್ಧವಾಗಿರಿಸಿಕೊಳ್ಳಬೇಕು ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ರೋಗ ಲಕ್ಷಣಗಳು ಇಲ್ಲದೇ ಇರುವ ರೋಗಿಗಳನ್ನು ಹೋಂ ಕ್ವಾರಂಟೈನ್ ಗೊಳಪಡಿಸಿ, ಚಿಕಿತ್ಸೆ ನೀಡಬೇಕು. ತೀವ್ರವಾಗಿ ಸೋಂಕಿಗೆ ತುತ್ತಾಗಿ ಗಂಭೀರ ಪರಿಣಾಮಗಳನ್ನು ಎದುರಿಸುತ್ತಿರುವವರಿಗೆ ಸೂಕ್ತ ಚಿಕಿತ್ಸೆ, 65 ವರ್ಷ ಮೇಲ್ಪಟ್ಟ ರೋಗಿಗಳಿಗೆ ಆದ್ಯತೆಯ ಮೇರೆಗೆ ಹಾಸಿಗೆಗಳ ಹಂಚಿಕೆ, ಸೋಂಕಿನಿಂದ ಮೃತಪಟ್ಟವರ ಆಂಟಿಜೆನ್ ಪರೀಕ್ಷೆ ನಡೆಸಿ ಶವದ ಶೀಘ್ರ ಹಸ್ತಾಂತರ, ನಿಯಮಕ್ಕನುಗುಣವಾಗಿ ಅಂತ್ಯಸಂಸ್ಕಾರ ನಡೆಸಬೇಕು ಎಂದೂ ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಜನರು ಹೆಚ್ಚಿನ ಗುಂಪು ಸೇರದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೂ ಸೂಚನೆ ನೀಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಸೋಂಕಿತರ ಚಿಕಿತ್ಸೆಗೆ ವೈದ್ಯರ ಕೊರತೆ ಇದ್ದು, ಅದನ್ನು ನಿವಾರಿಸಲು ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ. ಜೊತೆಗೆ ಪ್ರತಿ ವಾರ್ಡ್ನಲ್ಲಿ ಕ್ವಾರಂಟೈನ್ ವ್ಯವಸ್ಥೆಗಾಗಿ ಕಲ್ಯಾಣ ಮಂಟಪ, ವಸತಿ ಗೃಹಗಳನ್ನು ಗುರುತಿಸುವಂತೆಯೂ ಉಸ್ತುವಾರಿ ಸಚಿವರುಗಳಿಗೆ ಯಡಿಯೂರಪ್ಪ ಅವರು ಆದೇಶ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ. ವಿ. ಸದಾನಂದ ಗೌಡ ಅವರು ರಾಜ್ಯ ಸರ್ಕಾರಕ್ಕೆ ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧ. ರಾಜ್ಯ ಕೇಳುವ ಎಲ್ಲ ರೀತಿಯ ಸಹಾಯ ಮಾಡಲು ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.