ಬೆಂಗಳೂರು: ಕೊರೋನಾ ಸೋಂಕು ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಲೇ ಇದ್ದು, ಸೋಂಕು ತಗುಲದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಪ್ತಾಹ ನಡೆಸಲು ರಾಜ್ಯ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಆರು ಸೂತ್ರಗಳನ್ನು ಅನುಸರಿಸುವ ಮೂಲಕ ಹೇಗೆ ನಮ್ಮನ್ನು ನಾವು ಸೋಂಕಿನಿಂದ ರಕ್ಷಿಸಿಕೊಳ್ಳಬಹುದು ಎಂಬುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ಅಭಿಯಾನಕ್ಕೆ ಮುಂದಾಗಿದೆ.
ಒಂದು ವಾರಗಳ ಕಾಲ ನಡೆಯಲಿರುವ ಈ ಜಾಗೃತಿ ಅಭಿಯಾನದ ರೂಪುರೇಶೆಗಳನ್ನು ಸಿದ್ಧಗೊಳಿಸುವ ಕೆಲಸದಲ್ಲಿಯೂ ಬಿಜೆಪಿ ಈಗಾಗಲೇ ತೊಡಗಿಸಿಕೊಂಡಿದೆ. ಸಾಮಾಜಿಕ ಜಾಲತಾಣಗಳು ಮತ್ತು ಬೂತ್ ಮಟ್ಟದಲ್ಲಿ ಪಾದಯಾತ್ರೆಗಳನ್ನು ನಡೆಸುವ ಮೂಲಕ ಈ ಜಾಗೃತಿ ಸಪ್ತಾಹ ನಡೆಸುವುದಾಗಿಯೂ ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ಈ ಅಭಿಯಾನಕ್ಕೆ ಸದ್ಯದಲ್ಲೇ ಚಾಲನೆಯೂ ದೊರೆಯಲಿದೆ.
ಕಡ್ಡಾಯ ಮಾಸ್ಕ್ ಧಾರಣೆ, ಸಾರ್ವಜನಿಕವಾಗಿ ಅನಗತ್ಯ ಓಡಾಟಕ್ಕೆ ಬ್ರೇಕ್, 6 ಅಡಿಗಳ ಸಾಮಾಜಿಕ ಅಂತರ ಕಾಪಿಟ್ಟುಕೊಳ್ಳುವುದು, ಆಗಾಗ್ಗೆ ಸ್ಯಾನಿಟೈಸರ್, ಸೋಪ್ ಬಳಸಿ ಕೈಗಳನ್ನು ಸ್ವಚ್ಛಗೊಳಿಸುವುದು ,ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಿಸಿ ನೀರು, ಕಷಾಯ ಸೇವನೆ, ಅನಗತ್ಯವಾಗಿ ವ್ಯಕ್ತಿ, ವಸ್ತುಗಳನ್ನು ಸ್ಪರ್ಷಿಸದೆಯೇ ಇರುವುದು ಎಂಬ ಆರು ಸೂತ್ರಗಳ ಜೊತೆಗೆ ಈ ಸಪ್ತಾಹ ನಡೆಯಲಿದೆ. ಜೊತೆಗೆ ಆರೋಗ್ಯ ಮತ್ತು ಕೊರೋನಾ ಸೋಂಕಿನ ಬಗ್ಗೆ ಹಿರಿಯ ನಾಗರಿಕರಿಗೆ ಅರಿವು ಮೂಡಿಸುವ ದೃಷ್ಟಿಯಿಂದಲೂ ಈ ಸಪ್ತಾಹ ನಡೆಸಲು ಮುಂದಾಗಿರುವುದಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಜೊತೆಗೆ ಪಾದಯಾತ್ರೆ ಮೂಲಕವೂ ನಡೆಯುವ ಈ ಸಪ್ತಾಹದಲ್ಲಿ ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕೊರೋನಾ ನಿಯಂತ್ರಣ ನಿಯಮಗಳನ್ನು ಅನುಸರಿಸಿಕೊಂಡು ಕಾರ್ಯಕರ್ತರು ಜಾಗೃತಿ ಮೂಡಿಸಲಿದ್ದಾರೆ. ಜಾಗೃತಿ ಸಂದೇಶಗಳ ಮೂಲಕವೂ ಜನರಲ್ಲಿ ಎಚ್ಚರ ಮೂಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ರಾಜ್ಯ ಬಿಜೆಪಿ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸಿದೆ. ಆರಂಭದಿಂದಲೂ ನಿಯಂತ್ರಣ ನಿಯಮಗಳನ್ನು ಪಾಲನೆ ಮಾಡುವಂತೆ ಜನರಲ್ಲಿ ಮನವಿ ಮಾಡಲಾಗಿದೆ. ಆದರೂ ಸೋಂಕು ನಿಯಂತ್ರಣ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸುವ ಮೂಲಕವೇ ಕೊರೋನಾ ಗೆಲ್ಲಲು ಈ ಸಪ್ತಾಹ ನಡೆಸಲು ಬಿಜೆಪಿ ಪಕ್ಷ ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.