ಬೆಂಗಳೂರು: ಕೊರೋನಾ ಬಿಕ್ಕಟ್ಟಿನಿಂದ ರಾಜ್ಯವನ್ನು ರಕ್ಷಿಸಲು ರಾಜ್ಯ ಸರ್ಕಾರ ಅನೇಕ ನಿಯಂತ್ರಣ ನಿಯಮಗಳನ್ನು, ಚಿಕಿತ್ಸಾ ಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಸದ್ಯ ಕೊರೋನಾ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡುವಲ್ಲಿಯೂ ಪ್ರಯತ್ನಗಳನ್ನು ನಡೆಸುತ್ತಿರುವ ರಾಜ್ಯ ಸರ್ಕಾರ, ರೋಗಿಗಳ ಚಿಕಿತ್ಸೆಗೆ ಸೋಂಕಿನಿಂದ ಗುಣಮುಖರಾಗಿರುವವರು ಪ್ಲಾಸ್ಮಾ ದಾನ ಮಾಡುವಂತೆ ಮನವಿಯನ್ನು ಮಾಡಿದೆ. ಜೊತೆಗೆ ಪ್ಲಾಸ್ಮಾ ದಾನಿಗಳಿಗೆ ಗೌರವಪೂರ್ಣವಾಗಿ ಆರೋಗ್ಯ ಭತ್ಯೆ 5000 ರೂ. ಗಳನ್ನು ಸಹ ಸರ್ಕಾರ ನೀಡಲಿದೆ ಎಂದು ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಕೊರೋನಾ ಸೋಂಕಿನಿಂದ ಗುಣಮುಖರಾದವರು 14-28 ದಿನಗಳೊಳಗಾಗಿ ಪ್ಲಾಸ್ಮಾ ದಾನ ಮಾಡಿ ಇನ್ನೊಬ್ಬ ರೋಗಿ ಉಳಿಯುವುದಕ್ಕೆ ನೆರವಾಗುವಂತೆ ಮನವಿ ಮಾಡಿದ್ದಾರೆ. ಅಂತಹ ದಾನಿಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ಅಡಿಯಲ್ಲಿ ಈ ಧನ ಸಹಾಯವನ್ನು ವಿತರಣೆ ಮಾಡಲಾಗುವುದಾಗಿಯೂ ಸುಧಾಕರ್ ತಿಳಿಸಿದ್ದಾರೆ. ಕೊರೋನಾ ಚಿಕಿತ್ಸೆಯಲ್ಲಿ ಪ್ಲಾಸ್ಮಾ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪ್ಲಾಸ್ಮಾ ದಾನ ಮಾಡಲು ಮುಂದೆ ಬರುವಂತೆ ಅವರು ಗುಣಮುಖರಾದವರಿಗೆ ತಿಳಿಸಿದ್ದಾರೆ.
ಜೊತೆಗೆ ಬೆಂಗಳೂರಿನಲ್ಲಿನ ಎಲ್ಲಾ ಬೂತ್ ಗಳ ಕಾರ್ಯಪಡೆಯ ನೊಡಲ್ ಅಧಿಕಾರಿಗಳ ಜೊತೆಗೂ ಮಾತುಕತೆ ನಡೆಸಿರುವ ಸಚಿವರು, 2 ದಿನಗಳೊಳಗಾಗಿ ಕಾರ್ಯಪಡೆಯನ್ನು ರಚಿಸುವಂತೆಯೂ ಸೂಚಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಮನೆಮನೆ ಸಮೀಕ್ಷೆಯ ಮೂಲಕ 60 ವರ್ಷ ಮೇಲ್ಪಟ್ಟವರಿಗೆ ರಿಸರ್ವ್ ಐಸೋಲೇಷನ್, ಚಿಕಿತ್ಸೆಗೆ ಹಾಸಿಗೆ, ಆಂಬ್ಯುಲೆನ್ಸ್ ವ್ಯವಸ್ಥೆಗಳನ್ನು ಮಾಡುವ ಕುರಿತಾಗಿಯೂ ಈ ಕಾರ್ಯಪಡೆ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ಜೊತೆಗೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆಗೂ ಚರ್ಚೆ ನಡೆಸಿರುವ ಅವರು, ಕೊರೋನಾ ಟೆಸ್ಟ್, ಚಿಕಿತ್ಸೆ ಮೊದಲಾದ ವಿಚಾರಗಳಲ್ಲಿ ಸರ್ಕಾರದ ಜೊತೆಗೆ ಕೈ ಜೋಡಿಸುವಂತೆ ತಿಳಿಸಿದ್ದಾರೆ. ಅಂದು ವೇಳೆ ಹಿಂದೇಟು ಹಾಕಿದಲ್ಲಿ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಲ್ಲದೆ ಚಿಕಿತ್ಸೆಗೆ ಬೇಕಾದ ಎಲ್ಲಾ ಉಪಕರಣ, ವ್ಯವಸ್ಥೆಗಳನ್ನೂ ಪೂರೈಸಿಕೊಡುವ ಭರವಸೆಯನ್ನೂ ಸರ್ಕಾರದ ಪರವಾಗಿ ಸಚಿವರು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.