ಬೆಂಗಳೂರು: ಗುಜರಾತ್ ಮತ್ತು ಉತ್ತರ ಪ್ರದೇಶದ ಗೋಹತ್ಯೆ ಮತ್ತು ಗೋ ರಕ್ಷಣಾ ಮಸೂದೆಯನ್ನು ಅಧ್ಯಯನ ನಡೆಸಿಕೊಂಡು ಕರ್ನಾಟಕದಲ್ಲಿಯೂ ಈ ಕಾಯ್ದೆಯನ್ನು ಮತ್ತೆ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬುದಾಗಿ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಮಾಹಿತಿ ನೀಡಿದ್ದಾರೆ.
ಇದರ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡವೊಂದನ್ನು ಗುಜರಾತ್, ಉತ್ತರ ಪ್ರದೇಶಗಳಿಗೂ ಕಳುಹಿಸಿಕೊಡಲಾಗುತ್ತಿದ್ದು, ಅಲ್ಲಿ ಮಸೂದೆ ಹೇಗೆ ಜಾರಿಗೆ ತರಲಾಗುತ್ತಿದೆ ಎಂಬುದನ್ನು ಗಮನಿಸಿಕೊಂಡು ,ರಾಜ್ಯದಲ್ಲಿಯೂ ಗೋ ಹತ್ಯೆ ಮತ್ತು ರಕ್ಷಣಾ ಕಾಯ್ದೆ 2012ನ್ನು ಜಾರಿಗೆ ತರುವಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. ಈ ಕಾಯ್ದೆ ಜಾರಿಯಾದ ಬಳಿಕ ಗೋ ಹತ್ಯೆ, ಮಾರಾಟ, ಬೇರೆ ರಾಜ್ಯಗಳಿಗೆ ಗೋವುಗಳ ಮಾರಾಟ ನಿಷೇಧ ಮಾಡಲಾಗುತ್ತದೆ ಎಂದೂ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸ್ಥಳೀಯ ಗೋ ತಳಿಗಳ ರಕ್ಷಣೆ ಮತ್ತು ವೃದ್ಧಿಗಾಗಿಯೂ ಕ್ರಮ ಕೈಗೊಳ್ಳಲಾಗುವುದು. ಗೋ ರಕ್ಷಣೆ ಮತ್ತು ಅವುಗಳಿಗೆ ಆಶ್ರಯ ನೀಡುವ ಕಾರಣಕ್ಕೆ ಗೋ ಶಾಲೆಗಳನ್ನು ನಿರ್ಮಿಸುವುದು, ಗೋ ಸೇವಾ ಆಯೋಗ ಸ್ಥಾಪನೆ ಮೊದಲಾದ ಅನೇಕ ವಿಚಾರಗಳ ಬಗ್ಗೆಯೂ ಬಿಜೆಪಿ ಸರ್ಕಾರ ಚಿಂತನೆ ನಡೆಸುತ್ತಿದೆ. ಆ ಮೂಲಕ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸುವುದಾಗಿಯೂ ಅವರು ತಿಳಿಸಿದ್ದಾರೆ.
2010ರ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಕಾನೂನನ್ನು ಮಂಡಿಸಲಾಗಿತ್ತು. ಈ ಕಾಯ್ದೆಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡುವಂತೆಯೂ ಆಗಿನ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿತ್ತು. ಇದಾದ ಬಳಿಕ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಈ ಕಾಯ್ದೆ ಜಾರಿಯಾಗಲಿಲ್ಲ ಎಂದೂ ಚೌಹಾಣ್ ಮಾಹಿತಿ ನೀಡಿದ್ದಾರೆ. ಕೊರೋನಾ ಸೋಂಕಿನ ಸಮಸ್ಯೆ ಬಗೆಹರಿದ ಬಳಿಕ ರಾಜ್ಯದಿಂದ ನಿಯೋಜಿಸಲ್ಪಟ್ಟ ಅಧಿಕಾರಿಗಳ ತಂಡ ಅಧ್ಯಯನಕ್ಕೆ ತೆರಳಲಿರುವುದಾಗಿಯೂ ಚೌಹಾಣ್ ಮಾಹಿತಿ ನೀಡಿದ್ದಾರೆ.
ಈಗಾಗಲೇ ಭಾರತದ ಬಿಹಾರ, ತೆಲಂಗಾಣ, ಅಸ್ಸಾಂ, ದೆಹಲಿ, ಹರಿಯಾಣ, ಗುಜರಾತ್, ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಒರಿಸ್ಸಾ, ಪಂಜಾಬ್ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿಯೂ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಕರ್ನಾಟಕದಲ್ಲಿಯೂ ಇನ್ನೂ ಕೆಲವು ಸಮಯದಲ್ಲೇ ಈ ಕಾಯ್ದೆ ಜಾರಿಗೆ ಬರಲಿದೆ ಎಂದೂ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.