ಚಿಕ್ಕಮಗಳೂರು: ಕಳಸದ ಅರಣ್ಯ ಇಲಾಖೆಯ ನರ್ಸರಿ ಸಮೀಪದಲ್ಲಿ ವಿಜಯನಗರ ಕಾಲದ ವೀರ ಮಹಾಸತಿ ದೇವಾಲಯವನ್ನು ಇತಿಹಾಸ ಸಂಶೋಧಕ ಎಚ್. ಆರ್. ಪಾಂಡುರಂಗ ಅವರು ಪತ್ತೆ ಮಾಡಿದ್ದಾರೆ.
ನಾಲ್ಕು ಅಡಿ ಎತ್ತರವಿರುವ ಕಣಶಿಲೆಯ ಕಲ್ಲಿನಲ್ಲಿ ವೀರ- ಮಹಾಸತಿಯರ ಶಿಲ್ಪ ಕಲಾಕೃತಿ ಇದ್ದು ಹುತ್ತಗಳಿಂದ ಅವೃತವಾಗಿದೆ. ಈ ಶಿಲ್ಪಕಲೆಯ ಕುತ್ತಿಗೆಯವರೆಗೂ ಹುತ್ತ ಬೆಳೆದಿರುವುದಾಗಿಯೂ ಸಂಶೋಧಕರು ಮಾಹಿತಿ ನೀಡಿದ್ದಾರೆ. ಭದ್ರಾ ನದಿಯ ತಟದಲ್ಲಿನ ಪರಮ ಪಾವನ ಪಂಚ ಮಹಾತೀರ್ಥಗಳಲ್ಲಿ ಒಂದು ತೀರ್ಥವಾಗಿರುವ ವಸಿಷ್ಠ ತೀರ್ಥದ ಬಳಿ ಈ ಅಪರೂಪವಾದ ದೇಗುಲ ಪತ್ತೆಯಾಗಿದೆ.
ಈ ಶಿಲ್ಪ ಕಲಾಕೃತಿ 14 ನೇ ಶತಮಾನದ ಭೈರವರಸರ ಕಾಲದ್ದು ಎಂದು ಹೇಳಲಾಗುತ್ತಿದೆ. ಇಲ್ಲಿ ಎರಡು ಫಲಕಗಳನ್ನು ಸಂಶೋಧಕರು ಸಂಶೋಧಿಸಿದ್ದು, ಒಂದು ಫಲಕದಲ್ಲಿ ಖಡ್ಗಧಾರಿಯಾಗಿರುವ ವೀರ ಕಿವಿಯಲ್ಲಿ ಕರ್ಣಕುಂಡಲವನ್ನು ಧರಿಸಿದ್ದು, ಆತನ ಬಲ ಪಕ್ಕದಲ್ಲಿ ಮಹಾಸತಿ ಕೈಗಳಲ್ಲಿ ಕನ್ನಡಿ ಹಾಗೂ ಹಣ್ಣುಗಳನ್ನು ಹಿಡಿದು, ಸರ್ವಾಲಂಕಾರ ಭೂಷಿತೆಯಾಗಿ ಸಿಂಗರಿಸಿಕೊಂಡಂತಿದೆ. ಇನ್ನೊಂದು ಫಲಕದಲ್ಲಿ ಶಿವಲಿಂಗ, ಅದರ ಮುಂದೆ ಮಂಡಿಯೂರಿದ ಶೈಲಿಯಲ್ಲಿ ನಂದಿ, ಶಿವಲಿಂಗಕ್ಕೆ ಗಂಟೆ ಮೊಳಗಿಸುತ್ತಾ ಪೂಜೆ ಸಲ್ಲಿಸುತ್ತಿರುವ ಅರ್ಚಕರು, ದೀಪದ ಕಂಬ, ಶಿವಲಿಂಗದ ಎಡ ಬಲ ಭಾಗಗಳಲ್ಲಿ ಸೂರ್ಯ ಚಂದ್ರರ ಕೆತ್ತನೆಗಳು ಇದೆ ಎಂದು ಹೇಳಲಾಗಿದೆ..
ಈ ದೇವಾಲಯ ವಿಜಯನಗರದ ಆರಂಭದ ಕಾಲಘಟ್ಟದಲ್ಲಿ ನಿರ್ಮಿಸಿದ್ದಾಗಿರಬಹುದು ಎಂಬುದಾಗಿಯೂ ಸಂಶೋಧಕ ಪಾಂಡುರಂಗ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.