ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಲಾಕ್ಡೌನ್ ಆರಂಭವಾದ ನಂತರದಿಂದ ಖಾಸಗಿ ಶಾಲಾ ಶಿಕ್ಷಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶಾಲೆ ಆರಂಭವಾಗದ ಹಿನ್ನೆಲೆಯಲ್ಲಿ ಅವರುಗಳಿಗೆ ವೇತನ ಸಿಗುತ್ತಿಲ್ಲ. ಹೀಗಾಗಿ ಅವರ ನೆರವಿಗೆ ಸರ್ಕಾರಿ ಶಿಕ್ಷಕರು ಆಗಮಿಸಿದ್ದಾರೆ. ತಮ್ಮ ಒಂದು ದಿನದ ವೇತನವನ್ನು ಖಾಸಗಿ ಶಿಕ್ಷಕರಿಗೆ ದೇಣಿಗೆ ನೀಡಲು ಮುಂದಾಗಿದ್ದಾರೆ.
ಲಾಕ್ಡೌನ್ನಿಂದಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಹಣಕಾಸು ಸಮಸ್ಯೆ ಎದುರಿಸುತ್ತಿವೆ. ಆರ್ಥಿಕ ಸ್ಥಿತಿ ಸರಿಯಿಲ್ಲದೆ ಅವರು ಶಿಕ್ಷಕರಿಗೂ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಚ್ಚೆತ್ತುಕೊಂಡ ಸರ್ಕಾರವು ಖಾಸಗಿ ಶಿಕ್ಷಕರಿಗೆ ನೆರವಾಗುವಂತೆ ಸರ್ಕಾರಿ ಶಿಕ್ಷಕರಲ್ಲಿ ಮನವಿ ಮಾಡಿತ್ತು. ಸದ್ಯ ತಮ್ಮ ಒಂದು ದಿನದ ವೇತನವನ್ನು ಸರ್ಕಾರಿ ಶಿಕ್ಷಕರು ನೀಡಲು ಒಪ್ಪಿಕೊಂಡಿರುವುದಾಗಿ ಸ್ಟೇಟ್ ಹೈಸ್ಕೂಲ್ ಅಸಿಸ್ಟೆಂಟ್ ಟೀಚರ್ಸ್ ಎಸೋಸಿಯೇಶನ್ ನ ಅಧ್ಯಕ್ಷ ಎಚ್ ಕೆ ಮಂಜುನಾಥ್ ತಿಳಿಸಿದ್ದಾರೆ.
ಕೊರೋನಾವೈರಸ್ನಿಂದಾದ ಲಾಕ್ಡೌನ್ನಿಂದಾಗಿ ಮಾರ್ಚ್ 25ರಿಂದ ಈವರೆಗೆ ಖಾಸಗಿ ಶಾಲೆಗಳು ಮುಚ್ಚಿವೆ. ಜೊತೆಗೆ ಈ ಬಾರಿ ಶಾಲಾರಂಭ ಆಗದೇ ಇರುವುದರಿಂದ ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹ ಅಸಾಧ್ಯವಾಗಿದ್ದು, ಕಾರ್ಯನಿರ್ವಹಿಸುವ ಶಿಕ್ಷಕರಿಗೆ ವೇತನ ನೀಡುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಎಪ್ರಿಲ್ನಿಂದಲೂ ಸಿಬ್ಬಂದಿಗಳಿಗೆ ಸಂಬಳ ನೀಡಲು ಸಾಧ್ಯವಾಗಿಲ್ಲ ಎಂದೂ ಕೆಲವು ಖಾಸಗಿ ಸಂಸ್ಥೆಗಳು ಅಳಲು ತೋಡಿಕೊಂಡಿವೆ.
ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಯಂತೂ ಶೋಚನೀಯ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಕಳೆದ 3 ತಿಂಗಳಿನಿಂದಲೂ ಸಿಬ್ಬಂದಿಗಳಿಗೆ ವೇತನ ನೀಡಲಾಗದೆ ಒದ್ದಾಟ ನಡೆಸುತ್ತಿದ್ದಾರೆ ಎಂದೂ ಮಂಜುನಾಥ್ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಿಕ್ಷಕರು ತಮ್ಮ ಒಂದು ದಿನದ ವೇತನವನ್ನು ದೇಣಿಗೆ ನೀಡುವ ಮೂಲಕ ಖಾಸಗಿ ಶಿಕ್ಷಕರಿಗೆ ನೆರವಾಗಲು ಮುಂದಾಗಿದ್ದಾರೆ. ಸುರೇಶ್ ಕುಮಾರ್ ಅವರು ಎರಡು ದಿನಗಳ ವೇತನ ನೀಡಲು ಮನವಿ ಮಾಡಿದ್ದರು. ಆದರೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಕೊಡಗು ಮತ್ತು ಉತ್ತರ ಕರ್ನಾಟಕಗಳಿಗೂ ಸರ್ಕಾರಿ ಶಿಕ್ಷಕರು ದೇಣಿಗೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಒಂದು ದಿನದ ಸಂಬಳವನ್ನು ನೀಡುವುದಾಗಿ ಒಪ್ಪಿಗೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಸುಮಾರು 1.4 ಲಕ್ಷಗಳಷ್ಟು ಖಾಸಗಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ಸಿಎಂ ಕೊರೋನಾ ರಿಲೀಫ್ ಫಂಡ್ಗೂ ಸರ್ಕಾರಿ ಶಿಕ್ಷಕರ ಅಸೋಸಿಯೇಷನ್ ಎಪ್ರಿಲ್ ತಿಂಗಳಿನಲ್ಲಿಯೇ ಹಣವನ್ನು ದೇಣಿಗೆಯಾಗಿ ನೀಡಿತ್ತು. ಜೊತೆಗೆ ಕೊರೋನಾ ಲಾಕ್ಡೌನ್ ಮತ್ತು ದೀರ್ಘ ಕಾಲದ ರಜೆಯ ಕಾರಣದಿಂದಾಗಿ ಎಲ್ಲಾ ಶಿಕ್ಷಕರಿಗೂ ಹಲವಾರು ವಿಧದಲ್ಲಿ ಸಮಸ್ಯೆಗಳು ಉಂಟಾಗಿವೆ ಎಂದೂ ಸಂಘ ಹೇಳಿಕೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.