ಬೆಂಗಳೂರು: ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಲ್ಲಿದ್ದಲು ಲಭ್ಯತೆ ಇದ್ದು, ದೇಶದಲ್ಲಿಯೇ ಉತ್ಪಾದನೆ ಹೆಚ್ಚಿಸುವ ಮೂಲಕ ಆಮದು ಪ್ರಮಾಣವನ್ನು ಕಡಿಮೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆಯನ್ನು ವಾಣಿಜ್ಯೀಕರಣಗೊಳಿಸಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ.
ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಂಪನ್ಮೂಲಗಳು ಪ್ರಾಕೃತಿಕವಾಗಿ ದೊರೆಯುತ್ತಿದೆ. ಕಲ್ಲಿದ್ದಲಿನ ವಿಚಾರದಲ್ಲಿಯೂ ಈ ಮಾತು ಸುಳ್ಳಲ್ಲ. ಹೀಗಿರುವಾಗ ಹೊರ ದೇಶಗಳಿಂದ ಕಲ್ಲಿದ್ದಲಿನ ಆಮದು ಮಾಡುವುದನ್ನು ಕಡಿಮೆ ಮಾಡುವುದು ಹಾಗೂ ದೇಶದಲ್ಲಿಯೇ ಉತ್ಪಾದನೆಯ ಪ್ರಮಾಣವನ್ನು ಜಾಸ್ತಿ ಮಾಡುವಂತೆಯೂ ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ. ಇದು ಕೋಲ್ ಇಂಡಿಯಾವನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಅಲ್ಲ. ಬದಲಾಗಿ ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸುವುದಕ್ಕಾಗಿ ಎಂದೂ ಅವರು ತಿಳಿಸಿದ್ದಾರೆ.
ವಾಣಿಜ್ಯೀಕರಣ ಮಾಡುವುದರಿಂದಾಗಿ ಗಣಿಗಾರಿಕೆಗೆ ಹೊಡೆತ ಬೀಳುವುದಿಲ್ಲ. ಇಂತಹ ಸುಳ್ಳುಗಳನ್ನು ಹಬ್ಬಲಾಗುತ್ತಿದೆ, ಆ ಕಾರಣವನ್ನಿಟ್ಟುಕೊಂಡೇ ಕಂಪನಿಯ ಕಾರ್ಮಿಕ ವರ್ಗ ಪ್ರತಿಭಟನೆ ಮಾಡುತ್ತಿದ್ದು, ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲಿದ್ದಾರೆ ಎಂದೂ ಜೋಶಿ ತಿಳಿಸಿದ್ದಾರೆ.
ಪ್ರಸ್ತುತ ನಮ್ಮಲ್ಲಿ 30 ದಿನಗಳ ಕಾಲ ಬಳಕೆ ಮಾಡುವಷ್ಟು ಕಲ್ಲಿದ್ದಲು ಲಭ್ಯವಿದೆ.ಈ ಬಾರಿ ಕೋಲ್ ಇಂಡಿಯಾ 606 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸಿದೆ. ಕಳೆದ ವರ್ಷ 251 ಮಿಲಿಯನ್ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗಿತ್ತು. 2023-24 ರ ವೇಳೆಗೆ ಭಾರತಕ್ಕೆ ಅಗತ್ಯವಿರುವ ಪ್ರಮಾಣದ ಕಲ್ಲಿದ್ದಲನ್ನು ಇಲ್ಲಿಯೇ ಉತ್ಪಾದಿಸಲು ಕೋಲ್ ಇಂಡಿಯಾಗೆ ಸೂಚಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.