ಬೆಂಗಳೂರು: ಕೊರೋನಾ ಸೋಂಕಿನ ಲಕ್ಷಣಗಳಿಲ್ಲದೇ ಇರುವ ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡುವುದಕ್ಕೆ ಅವಕಾಶ ನೀಡಿರುವ ರಾಜ್ಯ ಸರ್ಕಾರ, ಅದಕ್ಕಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅವರಿಗೆ ಪೂರಕ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉಂಟಾಗಿದೆ. ಆದ್ದರಿಂದ ರೋಗ ಉಲ್ಬಣವಾಗದಂತೆ, ಗಂಭೀರತೆಯತ್ತ ತೆರೆದುಕೊಳ್ಳುವ ಮುನ್ನವೇ ಅವರಿಗೆ ಮನೆಯಲ್ಲಿಯೇ ಪೂರಕ ಚಿಕಿತ್ಸೆಗಳನ್ನು ನೀಡುವುದಕ್ಕೆ ಅನುಮತಿ ನೀಡಿದೆ. ಇದಕ್ಕಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ನಿಂದ ಅನುಮೋದನೆಯನ್ನೂ ಪಡೆದುಕೊಳ್ಳಲಾಗಿದೆ.
ರೋಗ ಆರಂಭದ ಹಂತದಲ್ಲಿರುವವರಿಗೆ ಮತ್ತು ರೋಗ ಲಕ್ಷಣಗಳಿಲ್ಲದ ರೋಗಿಗಳಿಗೆ ಈ ಮಾರ್ಗಸೂಚಿಯ ಪ್ರಕಾರ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದಾಗಿದೆ. ರೋಗಿಗಳಿಗೆ ಚಿಕಿತ್ಸೆಗಾಗಿ ಪ್ರತ್ಯೇಕ ವ್ಯವಸ್ಥೆ ಹೊಂದಿರಬೇಕು. ಈ ವ್ಯವಸ್ಥೆಯನ್ನು ಬಿಬಿಎಂಪಿ ಅಥವಾ ಜಿಲ್ಲಾ ಪ್ರಾಧಿಕಾರದ ಆರೋಗ್ಯ ತಪಾಸಣಾ ತಂಡ ಪರಿಶೀಲನೆ ನಡೆಸಲಿದೆ.
ಇನ್ನು ಚಿಕಿತ್ಸಾ ರೀತಿ ನೀತಿಗಳ ಬಗ್ಗೆ ಟೆಲಿ ಕನ್ಸಲ್ಟೇಷನ್ ಮೂಲಕವೇ ಮಾಹಿತಿ ನೀಡಲಾಗುತ್ತದೆ. ರೋಗಿಯ ಆರೋಗ್ಯ ಪರಿಸ್ಥಿತಿ ಬಗ್ಗೆ ವೈದ್ಯರು ಮತ್ತು ಅಧಿಕಾರಿಗಳಿಗೆ ಪ್ರತಿನಿತ್ಯ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ. ಚಿಕಿತ್ಸೆಗೆ ಬೇಕಾದ ವೆಂಟಿಲೇಟರ್, ಆಕ್ಸಿಮೀಟರ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಮನೆಯಲ್ಲಿ ಹೊಂದಿರಬೇಕು ಎಂದು ಈ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮನೆಯ ಸದಸ್ಯರು ಐಸೋಲೇಷನ್ಗೆ ಸಂಬಂಧಿಸಿದಂತೆ ಎಲ್ಲಾ ನಿಯಮಗಳನ್ನು ತಿಳಿದುಕೊಂಡಿರಬೇಕು. ಮನೆಯಲ್ಲಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇರಬೇಕು. ಚಿಕಿತ್ಸೆಗೆ ಸರಿಯಾಗಿ ಗಾಳಿ ಬೆಳಕು ಬೀಳುವ ಕೊಠಡಿಗಳ ವ್ಯವಸ್ಥೆ ಇರಬೇಕು ಎಂದೂ ಸರ್ಕಾರ ತಿಳಿಸಿದೆ. ಮನೆಯಲ್ಲಿ ಆರೈಕೆ ಪಡೆಯುವ ವ್ಯಕ್ತಿಯ ಕೈಗೆ ಟ್ಯಾಗ್ ಹಾಗೂ ಮನೆಗೆ ಭಿತ್ತಿಪತ್ರ ಅಂಟಿಸಲಾಗುತ್ತದೆ. ಮನೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಮನೆಯವರು ನೆರೆಹೊರೆಯವರ ಸಹಾಯದಿಂದಲೇ ತರಿಸಿಕೊಳ್ಳುವಂತೆಯೂ ಈ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. 10 ದಿನಗಳಲ್ಲಿಯೂ ಆರೋಗ್ಯ ಚೇತರಿಕೆಯಾಗದಿದ್ದಲ್ಲಿ ಕೋವಿಡ್ ಪರೀಕ್ಷೆಗೆ ಸಂಪರ್ಕಿಸಬೇಕು. ರೋಗಿ ಗುಣಮುಖನಾದ ಬಳಿಕ ಆತನಿದ್ದ ಕೋಣೆಯನ್ನು ಸ್ಯಾನಿಟೈಸ್ ಮಾಡಬೇಕೆಂದು ತಿಳಿಸಲಾಗಿದೆ.
ರೋಗಿಯಿಂದ ಹತ್ತು ಅಡಿ ಅಂತರಗಳನ್ನು ಕಾಪಾಡಿಕೊಳ್ಳುವುದು ,ಅವರಿಗೆ ಆಹಾರ ಒದಗಿಸುವುದು, ಅವರು ಬಳಸಿದ ವಸ್ತುಗಳನ್ನು ಉಪಯೋಗಿಸದಂತೆಯೂ ಸರ್ಕಾರ ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 14410 ಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.