ಬೆಂಗಳೂರು: ಕೊರೋನಾ ರೋಗಿಗಳ ಆರೋಗ್ಯ ವರ್ಧನೆಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳು ರೋಗಿಗಳಿಗೆ ಗುಣಮಟ್ಟದ ಮತ್ತು ಆರೋಗ್ಯವರ್ಧಕ ಗುಣಗಳನ್ನು ಹೊಂದಿರುವ ಆಹಾರಗಳನ್ನೇ ನೀಡಬೇಕು ಎಂದೂ ರಾಜ್ಯ ಸರ್ಕಾರ ಈ ಮಾರ್ಗಸೂಚಿಯಲ್ಲಿ ಆದೇಶಿಸಿದೆ.
ಈ ಆದೇಶದ ಪ್ರಕಾರ ಕೊರೋನಾ ರೋಗಿಗಳಿಗೆ ಬೆಳಗ್ಗೆ 7 ಗಂಟೆಗೆ ಉಪಹಾರ, ಮಧ್ಯಾಹ್ನ 1 ಗಂಟೆಗೆ ಊಟ, ರಾತ್ರಿ 7 ಗಂಟೆಗೆ ರಾತ್ರಿಯ ಆಹಾರವನ್ನು ಕಡ್ಡಾಯವಾಗಿ ನೀಡುವಂತೆ ಸೂಚಿಸಿದೆ. ರೋಗಿಗಳಿಗೆ ಯಾವ ದಿನ ಯಾವ ಆಹಾರವನ್ನು ನೀಡಬೇಕು ಎಂಬುದಾಗಿಯೂ ಈ ಆದೇಶದಲ್ಲಿ ಸರ್ಕಾರ ಸೂಚಿಸಿದ್ದು, ಸೋಮವಾರ ರವೆ ಇಡ್ಲಿ, ಮಂಗಳವಾರ ಪೊಂಗಲ್, ಬುಧವಾರ ಸೆಟ್ ದೋಸೆ, ಗುರುವಾರ ಇಡ್ಲಿ, ಶುಕ್ರವಾರ ಬಿಸಿ ಬೇಳೆ ಬಾತ್, ಶನಿವಾರ ಚೌ ಚೌ ಬಾತ್, ಭಾನುವಾರ ಸೆಟ್ ದೋಸೆಯನ್ನು ನೀಡಬೇಕು ಎಂದು ತಿಳಿಸಿದೆ.
ಅಲ್ಲದೆ ರೋಗಿಗಳಿಗೆ ಪಪ್ಪಾಯಿ, ಕಲ್ಲಂಗಡಿ, ಮಸ್ಕ್ ಮೆಲನ್ ಹಣ್ಣುಗಳನ್ನು ಒದಗಿಸುವಂತೆಯೂ ತಿಳಿಸಿದೆ. ಪ್ರತಿನಿತ್ಯ 10 ಗಂಟೆಗೆ ತರಕಾರಿಗಳ ಸೂಪ್ ನೀಡಲು ಹೇಳಿದೆ. ಇನ್ನು ಊಟಕ್ಕೆ ರೊಟ್ಟಿ ಅಥವಾ ಚಪಾತಿ, ಪಲ್ಯ, ಅನ್ನ, ದಾಲ್, ಮೊಸರು ಅಥವಾ ಮೊಟ್ಟೆ ನೀಡಬೇಕು. ಸಂಜೆ 5.30 ಕ್ಕೆ ಬಾಳೆಹಣ್ಣು, ಬಿಸ್ಕೇಟ್ ಗಳು, ತಾಜಾ ಖರ್ಜೂರ, ಮ್ಯಾಂಗೋ ಬಾರ್ ಗಳನ್ನು ನೀಡಬೇಕು ಎಂದೂ ಸರ್ಕಾರ ತಿಳಿಸಿದೆ. ರಾತ್ರಿಯ ಊಟಕ್ಕೆ ಮಧ್ಯಾಹ್ನದ ಮೆನುವಿನ ಜೊತೆಗೆ ಹಾಲು ನೀಡುವಂತೆಯೂ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರ ತಿಳಿಸಿರುವಂತೆ ಆರೋಗ್ಯ ಇಲಾಖೆಯ ತಜ್ಞರ ಸಲಹೆ ಸೂಚನೆಯಂತೆಯೇ ಆಹಾರ ವಸ್ತುಗಳನ್ನು ತಯಾರಿಸುವಂತೆಯೂ ಸರ್ಕಾರ ತಿಳಿಸಿದೆ. ಅಲ್ಲದೆ ಪ್ರತಿಯೊಬ್ಬ ರೋಗಿಗೆ ದಿನಕ್ಕೆ 250 ರೂ. ಗಳಷ್ಟು ಆಹಾರ ಒದಗಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಅದನ್ನು ಅನುಸರಿಸುವಂತೆಯೂ ರಾಜ್ಯ ಸರ್ಕಾರ ಆಸ್ಪತ್ರೆಗಳಿಗೆ ಸೂಚಿಸಿದೆ.
ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 1272 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 16514 ಕ್ಕೇರಿದೆ. 253 ಸಾವು ಸಂಭವಿಸಿದ್ದು, 8063 ಮಂದಿ ಚೇತರಿಸಿಕೊಂಡಿರುವುದಾಗಿಯೂ ಸರ್ಕಾರ ವರದಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.