ಬೆಂಗಳೂರು: ಸಾರ್ವಜನಿಕ ಆರೋಗ್ಯ ಕೇಂದ್ರಗಳಿಂದ ಖಾಸಗಿ ಆಸ್ಪತ್ರೆಗಳಿಗೆ ಕೊರೋನಾ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡಲ್ಪಟ್ಟ ರೋಗಿಗಳ ಚಿಕಿತ್ಸಾ ವೆಚ್ಚದ ಕುರಿತಾದಂತೆ ಕರ್ನಾಟಕ ಸರ್ಕಾರ ಮಹತ್ವದ ಆದೇಶವನ್ನು ಜಾರಿಗೊಳಿಸಿದೆ. ಖಾಸಗಿ ಆಸ್ಪತ್ರೆಗಳ ಕೊರೋನಾ ಚಿಕಿತ್ಸಾ ವೆಚ್ಚಗಳ ಕುರಿತಂತೆ ಸರ್ಕಾರವೇ ದರ ನಿಗದಿ ಪಡಿಸಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ 50% ದಷ್ಟು ಹಾಸಿಗೆಗಳನ್ನು ಪಬ್ಲಿಕ್ ಹೆಲ್ತ್ಕೇರ್ ಅಥಾರಿಟಿಗಳು ಶಿಫಾರಸ್ಸು ಮಾಡಿ, ಚಿಕಿತ್ಸೆಗಾಗಿ ಕಳುಹಿಸಿದ ರೋಗಿಗಳಿಗೆ ಬಳಕೆ ಮಾಡುವಂತೆಯೂ ಸರ್ಕಾರ ಸೂಚಿಸಿದೆ. HDU ಮತ್ತು ICU ಗಳಿಗೆ ಸಂಬಂಧಿಸಿದಂತೆ ವೆಂಟಿಲೇಟರ್ ವ್ಯವಸ್ಥೆ ಇರುವ ಮತ್ತು ಇಲ್ಲದೇ ಇರುವ ಹಾಸಿಗೆಗಳನ್ನೂ ಕೊರೋನಾ ಚಿಕಿತ್ಸೆಗೆ ಬಳಕೆ ಮಾಡಬೇಕೆಂದು ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದೆ. ಉಳಿದಂತೆ ಇತರ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಿಕೊಳ್ಳುವಂತೆಯೂ ರಾಜ್ಯ ಸರ್ಕಾರ ತಿಳಿಸಿದೆ. ಜೊತೆಗೆ ಖಾಸಗಿಯಾಗಿಯೂ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದು ತಿಳಿಸಿದೆ.
ಚಿಕಿತ್ಸಾ ದರಕ್ಕೆ ಸಂಬಂಧಿಸಿದಂತೆಯೂ ರಾಜ್ಯ ಸರ್ಕಾರವೇ ದರ ಪಟ್ಟಿ ನಿಗದಿ ಮಾಡಿದ್ದು, ಪಿಪಿಇ ಮತ್ತು ಇನ್ನಿತರ ಸೌಲಭ್ಯಗಳನ್ನು ಒಳಗೊಂಡಂತೆ ಈ ವೆಚ್ಚದಲ್ಲಿಯೇ ಚಿಕಿತ್ಸೆ ನೀಡುವಂತೆಯೂ ಸೂಚಿಸಿದೆ. ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ (ಎಬಿ-ಎಆರ್ಕೆ) ಯೋಜನೆಯಡಿ ಚಿಕಿತ್ಸೆ ಪಡೆಯುವ ಬಿಪಿಎಲ್ ಕಾರ್ಡ್ದಾರರಿಗೆ ಜನರಲ್ ವಾರ್ಡ್ ರೂ. 5200, HDU- ರೂ.7000, ಐಸೋಲೇಷನ್ ಐಸಿಯು (ವೆಂಟಿಲೇಟರ್ ಇಲ್ಲದ್ದು)-ರೂ. 8500, ಐಸೋಲೇಷನ್ ಐಸಿಯು (ವೆಂಟಿಲೇಟರ್ ಒಳಗೊಂಡಂತೆ)- 10000 ರೂ. ಗಳನ್ನು ಪ್ಯಾಕೇಜ್ 1 ರಲ್ಲಿ ನಿಗದಿ ಮಾಡಿದೆ.
ಪ್ಯಾಕೇಜ್ 2 ಗೆ ಸಂಬಂಧಿಸಿದಂತೆ, ನಗದು ಪಾವತಿ, ವಿಮಾ ಯೋಜನೆಗಳಡಿ ಚಿಕಿತ್ಸೆ ಪಡೆಯುವವರಿಗೆ, ಖಾಸಗಿಯಾಗಿ ಚಿಕಿತ್ಸೆಗೆ ಒಳಪಡುವ ಕೊರೋನಾ ರೋಗಿಗಳಿಗೆ ಸಂಬಂಧಿಸಿದಂತೆ ದರ ಪಟ್ಟಿ ಹೀಗಿದೆ- ಸಾಮಾನ್ಯ ವಾರ್ಡ್-ರೂ 10,000, HDU ರೂ. 12,000, ಐಸೋಲೇಷನ್ ಐಸಿಯು (ವೆಂಟಿಲೇಟರ್ ರಹಿತ)-ರೂ. 15,000, ಐಸೋಲೇಷನ್ ಐಸಿಯು (ವೆಂಟಿಲೇಟರ್ ಸಹಿತ)-ರೂ.25,013 ಗಳನ್ನು ನಿಗದಿ ಮಾಡಲಾಗಿದೆ.
ಆರೋಗ್ಯ ವಿಮೆ, ಕಾರ್ಪೊರೇಟ್ ಕಂಪನಿಗಳೊಂದಿಗಿನ ಒಪ್ಪಂದಗಳನ್ನು ಹೊಂದಿರುವ ರೋಗಿಗಳಿಗೆ ಈ ದರ ಪಟ್ಟಿ ಅನ್ವಯವಾಗುವುದಿಲ್ಲ. ಒಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ 50% ದಷ್ಟು ಹಾಸಿಗೆಗಳನ್ನು ಸರ್ಕಾರಿ ಆರೋಗ್ಯ ಸಂಸ್ಥೆಗಳಿಂದ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲ್ಪಟ್ಟ ರೋಗಿಗಳಿಗೇ ಮೀಸಲಿಡುವಂತೆ ಕಡ್ಡಾಯವಾಗಿ ತಿಳಿಸಲಾಗಿದೆ. ಇದು ಜನರಲ್ ವಾರ್ಡ್ ಮತ್ತು ಪ್ರೈವೇಟ್ ವಾರ್ಡ್ ಗಳಿಗೆ ಸಂಬಂಧಿಸಿದಂತೆಯೂ ಅನ್ವಯವಾಗುವುದಾಗಿ ಸರ್ಕಾರ ತನ್ನ ಸುತ್ತೋಲೆಯಲ್ಲಿ ಮಾಹಿತಿ ನೀಡಿದೆ.
ಈ ದರ ಪಟ್ಟಿ ಜನರಲ್ ವಾರ್ಡ್, ಮಲ್ಟಿ ಶೇರಿಂಗ್ ವಾರ್ಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸಂಬಂಧಿಸಿದ್ದಾಗಿದೆ. ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡುವ ಕೊಠಡಿಗೆ 10%, ಸಿಂಗಲ್ ರೂಂ ಗಳಿಗೆ 25% ಗಳಷ್ಟು ಚಾರ್ಜ್ ಮಾಡಬಹುದಾಗಿದೆ ಎಂದೂ ಸರ್ಕಾರ ತಿಳಿಸಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.