ಬೆಂಗಳೂರು: ಕಲ್ಯಾಣ ಕರ್ನಾಟಕ ಎಂಬ ಹೆಸರಷ್ಟೇ ಇದ್ದರೆ ಸಾಲದು. ಅಲ್ಲಿ ನೈಜ ಅಭಿವೃದ್ಧಿಯ ಮೂಲಕ ಈ ಪರಿಕಲ್ಪನೆಗೆ ಸೂಕ್ತವಾದ ಗೌರವ ಸಲ್ಲಿಸುವ ಮೂಲಕ ಕೆಲಸಗಳು ಸಾಗಬೇಕಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ.
ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಎಂದು ಹೆಸರು ಪಡೆದ ಆರು ಜಿಲ್ಲೆಗಳಲ್ಲಿ ನೈಜಾರ್ಥದಲ್ಲಿ ಅಭಿವೃದ್ಧಿ ಆಗಬೇಕು. ಈ ಹೆಸರು ಪಡೆದ 6 ಜಿಲ್ಲೆಗಳ ಜನರಲ್ಲಿ ಕೌಶಲ್ಯ ವೃದ್ಧಿ, ಉತ್ಪಾದನಾ ವಲಯ, ಸೇವಾ ವಲಯಗಳಲ್ಲಿ ಅಭಿವೃದ್ಧಿ ಆದಲ್ಲಿ ಮಾತ್ರವೇ ಕಲ್ಯಾಣ ಕರ್ನಾಟಕ ಹೆಸರಿಗೆ ಮೌಲ್ಯ ದೊರೆಯುತ್ತದೆ. ಈ ಭಾಗದ ಅಭಿವೃದ್ಧಿಯ ದೃಷ್ಟಿಕೋನವನ್ನಿಟ್ಟುಕೊಂಡು ಸಂಘ ಕಾರ್ಯ ನಿರ್ವಹಿಸಬೇಕಾಗಿದೆ. ಹೊಸ ದೃಷ್ಟಿಕೋನಗಳ ಮೂಲಕ ಈ ಪ್ರಾಂತ್ಯದ ಅಭಿವೃದ್ಧಿಗೆ ಒತ್ತು ನೀಡುವುದೇ ರಾಜ್ಯ ಸರ್ಕಾರದ ಮುಖ್ಯ ಗುರಿ ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಜನಾಭಿವೃದ್ಧಿಗೆ ಪೂರಕವೆನಿಸಿದ ಶಿಕ್ಷಣ, ಮಹಿಳಾ ಸಬಲೀಕರಣ, ಕೃಷಿ, ಆರೋಗ್ಯ, ಸ್ವ ಉದ್ಯೋಗ ಮೊದಲಾದವುಗಳ ಮೂಲಕ ಆತ್ಮ ನಿರ್ಭರ ಭಾರತದ ನಿರ್ಮಾಣದತ್ತ ಹೆಜ್ಜೆ ಹಾಕಬೇಕು. ಸ್ಥಳೀಯವಾಗಿ ಹೂಡಿಕೆ ಮತ್ತು ಸ್ವದೇಶೀ ವಸ್ತುಗಳ ಖರೀದಿಯ ಮೂಲಕ ಹೆಚ್ಚೆಚ್ಚು ಉದ್ಯೋಗಕ್ಕೂ ಇದು ಪೂಲಕವಾಗಲಿದೆ. ಜೊತೆಗೆ ಈ ಪ್ರಯತ್ನದಿಂದಾಗಿ ನೌಕರಿ ಹುಟ್ಟಿಕೊಳ್ಳುತ್ತದೆ. ಸ್ವಾವಲಂಬಿ ರಾಷ್ಟ್ರದ ನಿರ್ಮಾಣವೂ ಸಾಧ್ಯ ಎಂದು ಅವರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಘ ಕಾರ್ಯ ನಿರ್ವಹಿಸುವ ಭರವಸೆಯನ್ನೂ ಮುಖ್ಯಮಂತ್ರಿ ವ್ಯಕ್ತಪಡಿಸಿದ್ದಾರೆ.
ಇಂದು ಆರಂಭವಾಗಿರುವ ಸಂಘ, ಭರವಸೆಯ ನಾಳೆಗಳ ಬಗ್ಗೆಯೂ ಚಿಂತನೆ ನಡೆಸಿದೆ. ಅದಕ್ಕಾಗಿ ಗ್ರಾಮ ಸಬಲೀಕರಣ, ಮಹಿಳಾ ಸಬಲೀಕರಣ, ಅದರೊಂದಿಗೆ ಆರ್ಥಿಕತೆಯಲ್ಲಿಯೂ ಮುಂದೆ ಬರುವುದಕ್ಕೆ ಪೂರಕವಾದ ಅನೇಕ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಕಾರ್ಯ ಯೋಜನೆಗಳನ್ನು ಹಾಕಿಕೊಂಡಿದೆ. ಇದು ಅಭಿವೃದ್ಧಿಗೆ ಪೃರಕವಾಗಿ ಕೆಲಸ ಮಾಡುವುದಾಗಿಯೂ ಯಡಿಯೂರಪ್ಪ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 500 ಕೋಟಿ ರೂ. ಗಳನ್ನು ತೆಗೆದಿರಿಸಿರುವುದಾಗಿಯೂ ಮಾಹಿತಿ ನೀಡಿರುವ ಮುಖ್ಯಮಂತ್ರಿ, ಕೊರೋನೋತ್ತರ ದಿನಗಳಲ್ಲಿ ಅಭಿವೃದ್ಧಿ ಕೇಂದ್ರಿತ ಓಟ ನಮ್ಮದಾಗಬೇಕು. ಸ್ಥಳೀಯ ಅಸ್ಮಿತೆಗಳನ್ನು ಉಳಿಸಿಕೊಂಡು, ಪರಿಣಾಮಕಾರಿಯಾಗಿ ಕೆಲಸ ಮಾಡೋಣ ಎಂಬುದಾಗಿಯೂ ಅವರು ಕಿವಿಮಾತು ಹೇಳಿದ್ದಾರೆ.
ಸಂಘದ ಯೋಜನೆಗಳ ಯಶಸ್ವಿ ಅನುಷ್ಟಾನಕ್ಕೆ 3 ಸಾವಿರ ಸಂಪರ್ಕ ಕೇಂದ್ರಗಳನ್ನು ಆರಂಭಿಸುವ ಕ್ರಮವನ್ನೂ ಅವರು ಶ್ಲಾಘಿಸಿದ್ದಾರೆ. ಡಾ. ಬಸವರಾಜ ಪಾಟೀಲ ಸೇಡಂ ಅವರ ಅಧ್ಯಕ್ಷತೆಯಲ್ಲಿ 15 ಜನರ ಆಡಳಿತ ಮಂಡಳಿ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಘಳ ಅಭಿವೃದ್ಧಿಗೆ ಶ್ರಮಿಸಲಿದೆ ಎಂಬುದಾಗಿಯೂ ಯಡಿಯೂರಪ್ಪ ತಿಳಿಸಿದ್ದಾರೆ.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದಂತೆ, ಸಂಘ ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಶ್ರಮಿಸುವಂತಾಗಲಿ ಎಂದೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.