ಅಂಕೋಲಾ: ಕೇಂದ್ರ ಮೋದಿ ಸರ್ಕಾರದಿಂದ ಮತ್ಸ್ಯ ಕ್ರಾಂತಿ ಯೋಜನೆಯ ಅಡಿಯಲ್ಲಿ ಸುಮಾರು 20 ಸಾವಿರ ಕೋಟಿ ರೂ. ಗಳಷ್ಟು ಹಣ ಬಿಡುಗಡೆಯಾಗಲಿದ್ದು, ರಾಜ್ಯಕ್ಕೆ 3500 ಕೋಟಿ ರೂ. ಗಳಷ್ಟು ಹಣ ದೊರೆಯುವ ಸಾಧ್ಯತೆ ಇದೆ. ಇದನ್ನು ಬಳಕೆ ಮಾಡಿಕೊಂಡು ಮುಂದಿನ 5 ವರ್ಷ ಮೀನುಗಾರಿಕಾ ಅಭಿವೃದ್ಧಿಗೆ ಶಾಶ್ವತ ಯೋಜನೆಗಳನ್ನು ರೂಪಿಸುವ ಸಲುವಾಗಿ ಕ್ರಮ ಕೈಗೊಳ್ಳಲಾಗುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
ಅವರು ಅಂಕೋಲಾ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಉಂಟಾದ ಕಡಲ್ಕೊರೆತದ ಹಾನಿಯನ್ನು ವೀಕ್ಷಣೆ ಮಾಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಳಂಬಾರ ಪ್ರದೇಶದಲ್ಲಿ ಮೀನುಗಾರಿಕಾ ಜಟ್ಟಿ ನಿರ್ಮಿಸುವ ಕುರಿತಂತೆ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲದೆ ಸುಮಾರು 140 ಕೋಟಿ ರೂ. ವೆಚ್ಚದಲ್ಲಿ ಶೀಘ್ರದಲ್ಲೇ ಈ ಕೆಲಸವನ್ನು ಆರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಕಾಮಗಾರಿ ನಡೆದಲ್ಲಿ, ಪ್ರದೇಶದಲ್ಲಿ ಮೀನುಗಾರಿಕೆಗೆ ಶಾಶ್ವತ ಪರಿಹಾರ ಕಂಡುಕೊಂಡಂತಾಗುತ್ತದೆ ಎಂದು ತಿಳಿಸಿದ್ದಾರೆ. ಜೊತೆಗೆ ತಡೆಗೋಡೆ ನಿರ್ಮಾಣಕ್ಕೂ ಆರ್ಥಿಕ ಪರಿಹಾರದ ಜೊತೆಗೆ ಇನ್ನಿತರ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದಾರೆ.
ತಡೆಗೋಡೆ ನಿರ್ಮಾಣದ ವಿಚಾರದಲ್ಲಿ ಅವ್ಯವಹಾರದ ವಾಸನೆ ಕಂಡು ಬಂದಿದೆ ಎಂಬ ಮಾಹಿತಿ ಇದ್ದು, ಅದಕ್ಕಾಗಿ ತಾತ್ಕಾಲಿಕ ಕಲ್ಲುಗಳನ್ನು ನಿರ್ಮಿಸಲಾಗಿದೆ. ಕರಾವಳಿ ಕಡಲ ಕಿನಾರೆಗಳಲ್ಲಿ ಕಡಲ್ಕೊರೆತದ ಹಾನಿ ಕಡಿಮೆ ಮಾಡಲು ನಬಾರ್ಡ್ ಯೋಜನೆಯಲ್ಲಿ 950 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉಳ್ಳಾಲ ದಿಂದ ಕಾರವಾರದವರೆಗೆ ತಡೆಗೋಡೆ ನಿರ್ಮಿಸುವ ಇರಾದೆ ಸರ್ಕಾರದ್ದಾಗಿದ್ದು, ಆ ಸಂದರ್ಭದಲ್ಲಿ ಈಗ ಹಾಕಲಾದ ಕಲ್ಲುಗಳನ್ನು ಬಳಕೆ ಮಾಡುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ಜೊತೆಗೆ ಬೆಳಂಬಾವಿ ಮದ್ಯ ಖಾರ್ವಿವಾಡದಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ 80 ಲಕ್ಷ, ದಕ್ಷಿಣ ಖಾರ್ವಿವಾಡಕ್ಕಾಗಿ 120 ಲಕ್ಷ, ಹಂದಗೋಡಕ್ಕೆ 60 ಲಕ್ಷ, ಹರಿಕಂತ್ರ ಕೇಣಿಗೆ 5.5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ. ಗಾಭಿತಕೇಣಿಯಲ್ಲಿ ತಡೆಗೋಡೆ ನಿರ್ಮಾಣ ಮತ್ತು ರಸ್ತೆ ದುರಸ್ಥಿಗಾಗಿ ಆದಷ್ಟು ಬೇಗ ಹಣ ಬಿಡುಗಡೆ ಮಾಡುವ ಭರವಸೆಯನ್ನೂ ಕೋಟ ಪೂಜಾರಿ ಅವರು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.