ತುಮಕೂರು: ಒಂದೆಡೆ ಕೊರೋನಾ ರಾಜ್ಯದ ರೈತರ ನಿದ್ದೆಗೆಡಿಸಿದ್ದರೆ, ಇತ್ತ ಮಿಡತೆಗಳ ಹಾವಳಿ ಮತ್ತಷ್ಟು ಚಿಂತೆಗೊಳಗಾಗುವಂತೆ ಮಾಡಿದೆ. ಭಾರತದ ಬೇರೆ ಬೇರೆ ಭಾಗಗಳಲ್ಲಿ ರೈತರು ಬೆಳೆದ ಬೆಳೆಯನ್ನು ನಾಶ ಮಾಡುತ್ತಿರುವ ಹಿಂಡು ಹಿಂಡು ಮಿಡತೆಗಳ ನಿಯಂತ್ರಣಕ್ಕೆ ತುಮಕೂರಿನ ಯುವ ರೈತರು ಹೊಸ ಉಪಾಯವೊಂದನ್ನು ಕಂಡುಹಿಡಿದಿದ್ದು, ಅದರ ಪ್ರಯೋಗದಲ್ಲಿಯೂ ಯಶಸ್ಸು ಗಳಿಸಿದ್ದಾರೆ.
ಅಂದ ಹಾಗೆ ತುಮಕೂರಿನ ಬ್ಯಾಲ್ಯ ಪ್ರದೇಶದ ಯುವ ರೈತರಾದ ಪ್ರತಾಪ್, ಅಭಿಲಾಷ್, ಸುರೇಶ್ ಎಂಬವರು ಈ ಮಿಡತೆಗಳನ್ನು ನಾಶ ಮಾಡುವ ದ್ರಾವಣವನ್ನು ಸಿದ್ಧಪಡಿಸಿದ್ದಾರೆ.
ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡದೆ ಇದ್ದಿಲು, ಮರಳು ಮತ್ತು ಸೀಮೆ ಸುಣ್ಣವನ್ನು ಬಳಸಿ ಔಷಧವೊಂದನ್ನು ತಯಾರು ಮಾಡಿ ಅದನ್ನು ಸಿಂಪಡಣೆ ಮಾಡಿದ್ದಾರೆ. ಆ ಮೂಲಕ ಸಾಲುಗಟ್ಟಿ ಬರುವ ಮಿಡತೆಗಳಿಂದ ಬೆಳೆ ರಕ್ಷಣೆ ಮಾಡಿದ್ದಾರೆ. ಶೂನ್ಯ ಬಂಡವಾಳದಲ್ಲಿಯೇ ಈ ಯುವ ರೈತರು ಮಿಡತೆಗಳಿಂದ ಬೆಳೆ ರಕ್ಷಣೆ ಮಾಡಿದ್ದಾರೆ. 15 ದಿನಗಳಿಗೊಮ್ಮೆ ಈ ದ್ರಾವಣವನ್ನು ಬೆಳೆಗಳ ಮೇಲೆ ಸಿಂಪಡಣೆ ಮಾಡುವುದರಿಂದ ಮಿಡತೆಗಳು ದಾಳಿ ಮಾಡುವುದಿಲ್ಲ ಎಂಬುದನ್ನು ರೈತರು ಪ್ರಯೋಗದ ಮೂಲಕವೇ ಕಂಡುಕೊಂಡಿದ್ದಾರೆ.
ಈ ಮಿಶ್ರಣವನ್ನು ಸ್ವತಃ ರೈತನೇ ಸಿದ್ಧ ಮಾಡಬಹುದಾಗಿದ್ದು, ಮರಳು ಮಿಡತೆಗಳ ಜೀರ್ಣ ಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗೆಯೇ, ಅವುಗಳಿಗೆ ಹಾರುವುದಕ್ಕೆ ಸಾಧ್ಯವಾಗದಂತೆ ಇದ್ದಿಲು ಹಾಗೂ ಸುಣ್ಣ ತಡೆಯುತ್ತದೆ. ಈ ಔಷಧವನ್ನು ಬಳಕೆ ಮಾಡುವುದರಿಂದ ಮಿಡತೆ ದಾಳಿಯನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂಬುದು ಇದನ್ನು ಸಿದ್ಧಪಡಿಸಿರುವ ಯುವ ರೈತರ ಅಭಿಪ್ರಾಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.