ಬೆಂಗಳೂರು: ಮರ ಗಿಡಗಳನ್ನು ನೆಟ್ಟು, ಪೋಷಣೆ ಮಾಡಿದರೆ ದೇವಾಲಯ ಕಟ್ಟಿದ ಪುಣ್ಯ ದೊರೆಯುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದ ಜನತೆಗೆ ವಿಶ್ವ ಪರಿಸರ ದಿನದ ಶುಭಾಶಯ ತಿಳಿಸಿದ ಅವರು, ನಿಸರ್ಗ ಮತ್ತು ಮನುಷ್ಯನ ನಡುವೆ ಸಮತೋಲನ ಸಾಧಿಸಲು ಪರಿಸರವನ್ನು ಕಾಪಾಡುವುದು, ಬೆಳೆಸುವುದು ಬಹು ಮುಖ್ಯ. ಜೊತೆಗೆ ಜೀವ ವೈವಿಧ್ಯಗಳ ಉಳಿಕೆಯ ದೃಷ್ಟಿಯಿಂದಲೂ ಮರ ಗಿಡಗಳನ್ನು ಪೋಷಿಸುವ ಕರ್ತವ್ಯವನ್ನು ನಾವು ನಿಭಾಯಿಸಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.
ಪ್ರಕೃತಿಯ ಹೊರತಾಗಿ ಮನುಷ್ಯನ ಜೀವನದ ಕಲ್ಪನೆ ಮಾಡಿಕೊಳ್ಳುವುದು ಅಸಾಧ್ಯ. ನಿಸರ್ಗದ ಕೊಡುಗೆಗಳಾದ ಗಾಹಿ, ಮಳೆ ,ನೀರು, ಮರ, ಗಿಡ, ಕಲ್ಲು ಹೀಗೆ ಪ್ರತಿಯೊಂದು ವಸ್ತುವೂ ನಮ್ಮ ಜೀವನದ ಭಾಗವೇ ಆಗಿದ್ದು, ಅವುಗಳನ್ನು ಉಳಿಸುವತ್ತ ನಾವು ಗಮನಹರಿಸಬೇಕಿದೆ. ಅದರಂತೆ ಈ ಬಾರಿಯ ಪರಿಸರ ದಿನದ ಘೋಷ ವಾಕ್ಯ ‘ಜೀವವೈವಿಧ್ಯ’ ಬಹಳ ಅರ್ಥಪೂರ್ಣ ಹಾಗೂ ಮಹತ್ವಪೂರ್ಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಸುತ್ತಮುತ್ತಲಿನ ಪರಿಸರ ನಿರ್ಮಲ, ಮಾಲಿನ್ಯರಹಿತವಾಗಿದ್ದರೆ ನಾವೂ ಆರೋಗ್ಯಪೂರ್ಣ ಜೀವನ ನಡೆಸಬಹುದು. ಶುದ್ಧ ಗಾಳಿ ಬೇಕಾದರೆ, ಸ್ವಸ್ಥ ಸಮಾಜ ಬೇಕಾದರೆ ಗಿಡಗಳನ್ನು ನೆಟ್ಟು, ಅವುಗಳನ್ನು ಬೆಳೆಸಬೇಕು. ಆ ಮೂಲಕ ನಮ್ಮ ಮುಂದಿನ ಜನಾಂಗಕ್ಕೆ ಉತ್ತಮ ಜೀವನಸ್ನೇಹಿ ವಾತಾವರಣವನ್ನು ನಿರ್ಮಿಸಿ ಬಹುದೊಡ್ಡ ಉಡುಗೊರೆಯನ್ನು ನೀಡಬೇಕು. ಪ್ರಕೃತಿಯನ್ನು ನಮ್ಮ ದುರಾಸೆಗಾಗಿ ಕಾಡುವುದು, ಪೀಡಿಸುವುದರ ಜೊತೆಗೆ ಅದನ್ನು ನಾಶ ಪಡಿಸಿದರೆ ನಮ್ಮನ್ನು ನಾವೇ ಸಾವಿನ ದವಡೆಗೆ ದೂಡಿದಂತೆ ಎಂದು ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಕೃತಿ ಮತ್ತು ನಮ್ಮ ನಡುವೆ ಸಮನ್ವಯ ಸಾಧಿಸಿದಲ್ಲಿ ಮಾತ್ರವೇ ಬದುಕು ಸಾಧ್ಯ. ಜೊತೆಗೆ ಪ್ಲಾಸ್ಟಿಕ್ನಂತಹ ತ್ಯಾಜ್ಯಗಳನ್ನು ಪ್ರಕೃತಿಗೆ ಚೆಲ್ಲಿ ಆ ಮೂಲಕ ಪ್ರಕೃತಿಯನ್ನು ಹಾಳು ಮಾಡುವುದನ್ನು ನಿಲ್ಲಿಸಬೇಕು. ಆ ಮೂಲಕ ನಿಸರ್ಗವನ್ನು ಸಂರಕ್ಷಣೆ ಮಾಡಬೇಕು ಎಂದು ಹೇಳಿದ್ದಾರೆ. ಲಾಕ್ಡೌನ್ನಿಂದಾಗಿ ಪರಿಸರ ಮಾಲಿನ್ಯ ಕೊಂಚ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ನಾವು ಹಸಿರನ್ನೇ ಉಸಿರೆಂದು ನಂಬಿ ಬದುಕು ನಡೆಸಿದಲ್ಲಿ ಮತ್ತು ಪ್ರಕೃತಿಯ ಮೇಲೆ ವಿಕೃತಿ ಮೆರೆಯದೇ, ಅದನ್ನು ಬೆಳೆಸುವ, ಆ ಮೂಲಕ ಅದನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರಷ್ಟೇ ಪರಿಸರ ದಿನಾಚರಣೆ ಅರ್ಥಪೂರ್ಣವಾಗುವುದಾಗಿಯೂ ಮುಖ್ಯಮಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಬಳಕೆದಾರ ಸ್ನೇಹಿ ವೆಬ್ಸೈಟ್ಗೆ ಚಾಲನೆ ನೀಡಿದರು.
ಮಾನ್ಯ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಮುಖ್ಯಾಂಶಗಳು.#worldenvironmentday2020@BSYBJP pic.twitter.com/4JquO9P3tl
— CM of Karnataka (@CMofKarnataka) June 5, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.