ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ವ್ಯವಹಾರದಲ್ಲಿಯೂ ‘ದಲಿತ’ ಎಂಬ ಪದವನ್ನು ಬಳಕೆ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.
ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರ ಈ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಡತ, ಪತ್ರ ವ್ಯವಹಾರ, ಆಡಳಿತ ಭಾಷೆ, ಪ್ರಮಾಣ ಪತ್ರ ಸೇರಿದಂತೆ ಇನ್ಯಾವುದೇ ವಿಚಾರಗಳಲ್ಲಿಯೂ ದಲಿತ ಪದ ಬಳಕೆ ಸಲ್ಲ. ಬದಲಾಗಿ ಪರಿಶಿಷ್ಟ ಜಾತಿ/ಪಂಗಡ ಎಂದೇ ಬಳಕೆ ಮಾಡಬೇಕು ಎಂಬುದಾಗಿ ಸಮಾಜ ಕಲ್ಯಾಣ ಇಲಾಖೆ ಇದಕ್ಕೆ ಸ್ಪಷ್ಟೀಕರಣ ನೀಡಿದೆ.
ಈ ಬಗ್ಗೆ ಡಿಸಿಎಂ ಗೋವಿಂದ ಕಾರಜೋಳ ಅವರು ಸಹ ಮಾತನಾಡಿದ್ದು, ಹರಿಜನ, ಗಿರಿಜನ ಎಂಬ ಪದಗಳ ಮೂಲಕವೂ ಪಂಗಡಗಳ ಗುರುತಿಸುವಿಕೆ ಮಾಡಬಾರದು. ಬದಲಾಗಿ ಎಸ್ ಸಿ, ಎಸ್ ಟಿ ಎಂದೇ ಇಂಗ್ಲಿಷ್ ಭಾಷೆಯಲ್ಲಿ ಬಳಕೆ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ದಲಿತ ಎಂಬ ಪದವನ್ನು ಬಳಕೆ ಮಾಡಿ ಜಾತಿ ನಿಂದನೆಯಂತಹ ಪ್ರಕರಣಗಳು ನಡೆಯುತ್ತಲೇ ಇದೆ. ಇಂತಹ ಪ್ರಕರಣಗಳನ್ನು ಕಡಿಮೆ ಮಾಡುವ ಸಲುವಾಗಿ ಈ ಮಹತ್ವದ ಬದಲಾವಣೆಗೆ ಮುಂದಾಗಿರುವುದಾಗಿಯೂ ತಿಳಿದು ಬಂದಿದೆ. ಇತರ ಭಾಷೆಗಳಲ್ಲಿ ಈ ಪದಕ್ಕೆ ಪರ್ಯಾಯವಾಗಿ ಭಾಷಾಂತರ ಮಾಡಲಾದ ಶಬ್ಧಗಳನ್ನು ಬಳಕೆ ಮಾಡುವಂತೆಯು ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.