ಬೆಂಗಳೂರು: ಕೊರೋನಾ ಶಂಕಿತ/ ಸೋಂಕಿತರ ಮೇಲೆ ಗಮನವಿಡಲು ಪೂರಕವಾಗಿ ಆಯ್ಕೆ ಮಾಡಿಕೊಂಡಿದ್ದ ಕ್ವಾರಂಟೈನ್ ಪದ್ಧತಿಯಲ್ಲಿ ಬದಲಾವಣೆ ಮಾಡುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.
ಈ ವರೆಗೆ ಹೊಟೇಲ್, ಇನ್ನಿತರ ಸಂಸ್ಥೆಗಳನ್ನು ಕೊರೋನಾ ಕ್ವಾರಂಟೈನ್ ಗಾಗಿ ಬಳಸಲಾಗುತ್ತಿತ್ತು. ಆದರೆ ಸದ್ಯ ನಿಧಾನವಾಗಿ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ವಾರಂಟೈನ್ಗೆ ಬಳಸುತ್ತಿದ್ದ ಸಂಸ್ಥೆಗಳನ್ನು ಬಿಟ್ಟು ಕೊಡಬೇಕಾಗಿದ್ದು, ಮುಂದಿನ ದಿನಗಳಲ್ಲಿ ಹೋಂ ಕ್ವಾರಂಟೈನ್ ಕ್ರಮವನ್ನು ಅನುಸರಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ವಿದೇಶದಿಂದ ಬಂದವರಿಗೆ ಕೊರೋನಾ ನೆಗೆಟಿವ್ ಇದ್ದರೂ ಹೋಂ ಕ್ವಾರಂಟೈನ್ ಮಾಡಲಾಗುವುದು. ಜೊತೆಗೆ ಮಹಾರಾಷ್ಟ್ರ ದಿಂದ ರಾಜ್ಯಕ್ಕೆ ಬರುವವರಿಗೆ 7 ದಿನಗಳ ವರೆಗೆ ಸಾಂಸ್ಥಿಕ ಕ್ವಾರಂಟೈನ್ ಕ್ರಮ ಅನುಸರಿಸಬೇಕೋ, ಬೇಡವೋ ಎಂಬುದರ ಕುರಿತಂತೆ ಆಲೋಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೆ ಹೋಂ ಕ್ವಾರಂಟೈನ್ ಕ್ರಮವನ್ನು ವಿದೇಶಗಳಲ್ಲಿಯೂ ಅನುಸರಿಸಲಾಗುತ್ತಿದ್ದು, ಇದು ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ರಾಜ್ಯದ 98% ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳಿಲ್ಲ. ಕೊರೋನಾ ವೈರಸ್ ಕೇವಲ 14 ದಿನಗಳ ಕಾಲವಷ್ಟೇ ಮನುಷ್ಯನ ದೇಹದಲ್ಲಿ ಇರುತ್ತದಾದ್ದರಿಂದ, ಅಷ್ಟು ದಿನಗಳ ಕ್ವಾರಂಟೈನ್ ಕಡ್ಡಾಯ ಎಂದೂ ಅವರು ತಿಳಿಸಿದ್ದಾರೆ. ಈಗಾಗಲೇ ರಾಜ್ಯಾದ್ಯಂತ 64 ಪ್ರಯೋಗಾಲಯ ಆರಂಭಿಸಲಾಗಿದ್ದು, ವೈದ್ಯಕೀಯ ಕಾಲೇಜುಗಳಲ್ಲಿ ಪ್ರಯೋಗಾಲಯ ಆರಂಭ ಮಾಡುವುದನ್ನೂ ಕಡ್ಡಾಯಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಸದ್ಯದ ಪರಿಸ್ಥಿತಿಯಲ್ಲಿ ಸೋಂಕಿನ ಮೂಲ ಪತ್ತೆ ಮಾಡುವುದಕ್ಕಿಂತ ಮುಖ್ಯ, ಸೋಂಕಿತರಿಗೆ ಚಿಕಿತ್ಸೆ ನೀಡುವುದಾಗಿದ್ದು ಆ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.