ಬೆಂಗಳೂರು: ದೇಶಾದ್ಯಂತ ಲಾಕ್ಡೌನ್ ನಿಯಮಗಳು ಸಡಿಲಗೊಳ್ಳುತ್ತಿದ್ದಂತೆ ಕೊರೋನಾ ಸೋಂಕು ವ್ಯಾಪಿಸುವ ತೀವ್ರತೆ ಹೆಚ್ಚುತ್ತಲೇ ಇದೆ. ಸೋಂಕು ಹರಡದಂತೆ ತಡೆಗಟ್ಟುವ ನೆಲೆಯಲ್ಲಿ ಅದೆಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನು ಸರ್ಕಾರ ಕೈಗೊಂಡರೂದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮನವಿಯೊಂದನ್ನು ಮಾಡಿಕೊಂಡಿದ್ದು, ಕೊರೋನಾ ಸೋಂಕು ವ್ಯಾಪಕವಾಗಿರುವ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ತಮಿಳುನಾಡು ಮತ್ತು ರಾಜಸ್ಥಾನಗಳಿಗೆ ಕಡಿಮೆ ಪ್ರಮಾಣದಲ್ಲಿ ವಿಮಾನ ಸೇವೆಗಳನ್ನು ಆರಂಭಿಸಲು ಅನುಮತಿಸುವಂತೆ ಕೋರಿಕೊಳ್ಳಲಾಗಿರುವುದಾಗಿ ತಿಳಿದುಬಂದಿದೆ.
ಕಡಿಮೆ ಕಾಲಾವಕಾಶದಲ್ಲಿ ಹೆಚ್ಚು ಮಂದಿ ಸೋಂಕಿತರು ರಾಜ್ಯಕ್ಕೆ ಪ್ರವೇಶಿಸಿದಲ್ಲಿ ಅವರ ಕ್ವಾರಂಟೈನ್ ವ್ಯವಸ್ಥೆಗೆ ಸಮಸ್ಯೆಯಾಗಲಿದೆ. ಈ ವರೆಗೆ ರಾಜ್ಯದಲ್ಲಿ ಸುಮಾರು 2400 ಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗಿದ್ದು ಮುಂಜಾಗ್ರತಾ ದೃಷ್ಟಿಯಿಂದ ಈ ಐದು ರಾಜ್ಯಗಳಿಗೆ ಕಡಿಮೆ ಸಂಖ್ಯೆಯ ವಿಮಾನಗಳ ಸೇವೆ ಒದಗಿಸುವುದಕ್ಕೆ ಅವಕಾಶ ನೀಡುವಂತೆ ಕೇಳಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಅಲ್ಲದೆ ಅಲ್ಲಿನ ಜನರಿಗೆ ರಾಜ್ಯ ಪ್ರವೇಶಿಸುವುದಕ್ಕೆ ಯಾವುದೇ ನಿಷೇಧವನ್ನು ಹೇರುವುದಿಲ್ಲ. ಬದಲಾಗಿ ಕೊರೋನಾ ನಿಯಂತ್ರಣ ಕ್ರಮಗಳನ್ನು ಸರಿಯಾಗಿ ಅನುಸರಿಸಿಕೊಂಡು, ಹೆಚ್ಚು ಜನರ ಕ್ವಾರಂಟೈನ್ಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿಯೂ ಸರ್ಕಾರ ವಿಮಾನಯಾನ ಸಚಿವಾಲಯಕ್ಕೆ ತಿಳಿಸಿದೆ.
ಈ ಹಿಂದೆ ಕೊರೋನಾ ಹೆಚ್ಚಾಗಿರುವ ಐದು ರಾಜ್ಯಗಳಿಗೆ ಯಾವುದೇ ಸಂಚಾರ ಸೌಲಭ್ಯ ಒದಗಿಸಲಾಗುವುದಿಲ್ಲ ಎಂಬುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಆದರೆ ಇದೀಗ ಜನರ ಅನುಕೂಲಕ್ಕಾಗಿ ಈ ಕ್ರಮವನ್ನು ಕೈಗೊಂಡಿದೆ. ವೈರಸ್ ಹರಡದಂತೆ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಇರುವ ಅವಕಾಶಗಳನ್ನು ಬಳಸಿಕೊಂಡು ಇದೀಗ ಸೋಂಕಿತರ ಪ್ರಮಾಣ ಹೆಚ್ಚಿರುವ ರಾಜ್ಯಗಳಿಗೂ ಸಂಚಾರ ವ್ಯವಸ್ಥೆ ಕಲ್ಪಿಸುವುದಾಗಿ ಸರ್ಕಾರ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.