ಮಂಗಳೂರು: ಜಪಾನ್ನಲ್ಲಿ ಹೆಚ್ಚು ಬಳಕೆಯಲ್ಲಿರುವ ತಂತ್ರಜ್ಞಾನವನ್ನು ಬಳಸಿ 7 ವರ್ಷದ ಬಾಲಕನ ಬೋನ್ ಕ್ಯಾನ್ಸರ್ಗೆ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಬಾಲಕನ ಕೈಯ ಮತ್ತು ಭುಜದ ಎಲುಬುಗಳನ್ನು ಸರ್ಜರಿಗಳ ಮೂಲಕ ಹೊರತೆಗೆದು ಕ್ಯಾನ್ಸರ್ ಸೆಲ್ಗಳನ್ನು ತಂತ್ರಜ್ಞಾನ ಬಳಸಿ ನಾಶಗೊಳಿಸಿ, ತದನಂತರದಲ್ಲಿ ಅದನ್ನು ಯಶಸ್ವಿಯಾಗಿ ಆತನ ದೇಹದೊಳಕ್ಕೆ ಮರುಜೋಡಣೆ ಮಾಡುವ ಮೂಲಕ ಇಂಡಿಯನ್ ಹಾಸ್ಪಿಟಲ್ ಆಂಡ್ ಹಾರ್ಟ್ ಇನ್ಸ್ಟಿಟ್ಯೂಟ್ ಸಾಧನೆ ಮೆರೆದಿದೆ.
ಬೋನ್ ಕ್ಯಾನ್ಸರ್ನಿಂದ ಎಪ್ರಿಲ್ 19 ರಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನ ಮೇಲೆ ಆಸ್ಪತ್ರೆ ಈ ಯಶಸ್ವಿ ಪ್ರಯೋಗ ನಡೆಸಿದೆ. ಸಂಪೂರ್ಣ ಕೈಗೆ ಆವರಿಸಿಕೊಂಡು ವಿಪರೀತ ನೋವು ಅನುಭವಿಸುತ್ತಿದ್ದ ಬಾಲಕನನ್ನು ಈ ಅಸಾಮಾನ್ಯ ಚಿಕಿತ್ಸೆ ಮೂಲಕ ಗುಣಪಡಿಸಿದ್ದಾರೆ. ಕೈಯ ಮೂಳೆಗಳನ್ನಾವರಿಸಿಕೊಂಡಿದ್ದ ಕ್ಯಾನ್ಸರ್ನಿಂದಾಗಿ ಕೈ ದಪ್ಪವಾಗುವುದು, ಕೈಗಳು ಚಲನೆಯನ್ನು ನಿಲ್ಲಿಸುವುದು ಮೊದಲಾದ ಸಮಸ್ಯೆಗಳನ್ನು ಈ ಹುಡುಗ ಅನುಭವಿಸುತ್ತಿದ್ದ. ಈತನಿಗೆ ಕಳೆದ 10 ವಾರಗಳಿಂದ ತೊಡಗಿದಂತೆ ಪೀಡಿಯಾಟ್ರಿಕ್ ಆಂಕೋಲಾಜಿಸ್ಟ್ ನವನೀತ್ ಎಸ್ ಕಾಮತ್ ಕಿಮೋಥೆರಪಿ ಚಿಕಿತ್ಸೆಯನ್ನು ನೀಡುತ್ತಿದ್ದರು. ಸದ್ಯ ಸತತ 10 ಗಂಟೆಗಳ ಕಾಲ ಈ ಬಾಲಕನಿಗೆ ಯಶಸ್ವಿಯಾಗಿ ಲಿಂಬ್ ಸಾಲ್ವೇಜ್ ಸರ್ಜರಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಯಾವುದೇ ಅಪಾಯವಿಲ್ಲದೆ ಬಾಲಕ ಚೇತರಿಸಿಕೊಂಡಿದ್ದಾನೆ ಎಂದೂ ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.
ಈ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿರುವ ಡಾ. ನವನೀತ್, ಆಸ್ಪತ್ರೆಯಲ್ಲಿ ಹೊಸದಾಗಿ ಆರಂಭಗೊಂಡಿರುವ ಆರ್ಥೋಪೆಡಿಕ್ ಆಂಕಾಲಜಿ ವಿಭಾಗದ ಸಹಕಾರದಿಂದ ಈ ಶಸ್ತ್ರಚಿಕಿತ್ಸೆ ನಡೆದಿರುವುದಾಗಿ ತಿಳಿಸಿದ್ದಾರೆ. ಈ ಚಿಕಿತ್ಸೆಯ ಮೂಲಕ ಮೂಳೆಯ ಕೇವಲ ಹಾನಿಗೊಳಗಾದ ಅಥವಾ ರೋಗಕ್ಕೆ ತುತ್ತಾದ ಭಾಗವನ್ನು ಮಾತ್ರವೇ ಸರ್ಜರಿ ಮೂಲಕ ತೆಗೆಯಲಾಗುತ್ತದೆ ಎಂಬುದಾಗಿಯೂ ತಿಳಿಸಿದ್ದಾರೆ.
ಈ ಶಸ್ತ್ರಚಿಕಿತ್ಸೆ ನಡೆಸಿದ ತಂಡದಲ್ಲಿ ಡಾ. ನವನೀತ್, ಸೀನಿಯರ್ ಆರ್ಥೋಪೆಡಿಕ್ ಸರ್ಜನ್ ಡಾ. ಜಲಾಲುದ್ದೀನ್, ಡಾ. ಹರಾಂಬ್ ಮಿತ್ತಲ್, ಡಾ. ವಾಸುದೇವ ಭಟ್, ಕಲಾಶೇಖರ್, ಡಾ. ನಿಖಿಲ್, ಡಾ ಹರೀಶಾ ಬಿ.ಸಿ. ಭಾಗವಹಿಸಿದ್ದು, ಮಂಗಳೂರಿನಂತಹ ನಗರಗಳಲ್ಲಿ ಇಂತಹ ಶಸ್ತ್ರಚಿಕಿತ್ಸೆಗಳು ನಡೆಯುವುದು ತೀರಾ ಕಡಿಮೆ ಎಂಬುದಾಗಿ ತಿಳಿಸಿದ್ದಾರೆ. ಇಂತಹ ಸರ್ಜರಿಗಳನ್ನು ನಡೆಸುವಂತಹ ಕೇವಲ ಮೂರು ಮಂದಿ ಸ್ಪೆಷಾಲಿಸ್ಟ್ ಡಾಕ್ಟರ್ಗಳು ಮಾತ್ರವೇ ಕರ್ನಾಟಕದಲ್ಲಿದ್ದು, ಇಬ್ಬರು ಬೆಂಗಳೂರಿನಲ್ಲಿರುವುದಾಗಿಯೂ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.