ಬೆಂಗಳೂರು: ಕೊರೋನಾ ಸೋಂಕಿನಿಂದ ಜಾರಿಗೊಳಿಸಲಾದ ಲಾಕ್ಡೌನ್ ಕ್ರಮದ ನಾಲ್ಕನೇ ಹಂತ ಇದೀಗ ಆರಂಭವಾಗಿದ್ದು, ರಾಜ್ಯದಲ್ಲಿಯೂ ನಿಯಂತ್ರಣ ನಿಯಮಗಳನ್ನು ಅನುಸರಿಸಿಕೊಂಡು ಹಲವು ಕ್ಷೇತ್ರಗಳನ್ನು ಇಂದಿನಿಂದಲೇ ಆರಂಭಿಸುವುದಾಗಿ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಅದರಂತೆ ಸಾರ್ವಜನಿಕ ಸಾರಿಗೆಯೂ ಆರಂಭಗೊಳ್ಳಲಿದ್ದು, ರಾಜ್ಯದಲ್ಲಿ 1,500 ಸರ್ಕಾರಿ ಬಸ್ಸುಗಳ ಓಡಾಟ ಕಲ್ಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಕಂಟೈನ್ಮೆಂಟ್ ವಲಯಗಳನ್ನು ಹೊರತು ಪಡಿಸಿ, ಅಂತರರಾಜ್ಯ ಸಾರಿಗೆ ವ್ಯವಸ್ಥೆಯನ್ನು ಹೊರತು ಪಡಿಸಿದಂತೆ ಬೆಳಿಗ್ಗೆ 7 ರಿಂದ ರಾತ್ರಿ 7 ಗಂಟೆಯವರೆಗೆ ಬಸ್ಸು ಸಂಚಾರ ನಡೆಸಲು ನಿರ್ಧರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ ವೇಳೆ ಯಾವುದೇ ರೀತಿಯ ಬಸ್ ಸಂಚಾರ ವ್ಯವಸ್ಥೆ ಇಲ್ಲ ಎಂದು ನಿಗಮ ಸ್ಪಷ್ಟವಾಗಿ ಹೇಳಿದೆ. ಸದ್ಯ ರಾಜ್ಯದ ಪ್ರಮುಖ ಸ್ಥಳಗಳಿಗೆ ಮಾತ್ರವೇ ಬಸ್ಸು ಸಂಚಾರ ಆರಂಭಿಸಲಾಗಿದ್ದು, ಹಂತ ಹಂತವಾಗಿ ಪರಿಸ್ಥಿತಿ ನೋಡಿಕೊಂಡು ಬಸ್ಸುಗಳ ಸಂಖ್ಯೆ ಹೆಚ್ಚಿಸುವುದಾಗಿ ತಿಳಿಸಿದೆ. ಅಲ್ಲದೆ ಟಿಕೆಟ್ ದರದಲ್ಲಿಯೂ ಯಾವುದೇ ವ್ಯತ್ಯಯಗಳನ್ನು ಮಾಡಲಾಗಿಲ್ಲ ಎಂದು ಸಂಸ್ಥೆ ಹೇಳಿದೆ.
ಒಂದು ಬಸ್ಸಿನಲ್ಲಿ ಕೇವಲ ಮೂವತ್ತು ಜನರಿಗಷ್ಟೇ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಗುರುತಿನ ಚೀಟಿ ಕಡ್ಡಾಯ, ನಿರ್ವಾಹಕರು ಪ್ರತಿಯೊಬ್ಬ ಪ್ರಯಾಣಿಕನ ವಿಳಾಸ, ಮೊಬೈಲ್ ಸಂಖ್ಯೆಯ ವಿವರಣೆಯನ್ನು ದಾಖಲಿಸಿಕೊಳ್ಳುವುದಾಗಿಯೂ ಸಾರಿಗೆ ಇಲಾಖೆ ತಿಳಿಸಿದೆ. ಬಸ್ಸು ನಿಲ್ದಾಣಗಳಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮಾರ್ಕಿಂಗ್ ಮಾಡಲಾಗುತ್ತದೆ. ಎಲ್ಲಾ ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನಿಂಗ್ಗೆ ಒಳಪಡಿಸುವುದು, ಚಾಲಕ, ನಿರ್ವಾಹಕರಿಗೆ ಸ್ಯಾನಿಟೈಸರ್, ಗ್ಲೌಸ್, ಮಾಸ್ಕ್ಗಳನ್ನೂ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಆಹಾರ ಸೇವನೆಗೆ ಬಸ್ ನಿಲ್ಲಿಸಲಾಗುವುದಿಲ್ಲ ಎಂದೂ ಸಂಸ್ಥೆ ಈ ಸಂದರ್ಭದಲ್ಲಿ ತಿಳಿಸಿದೆ.
ಚಾಲಕ, ನಿರ್ವಾಹಕರ ಕುರಿತಾಗಿಯೂ ವಿಶೇಷ ಕಾಳಜಿ ವ್ಯಕ್ತಪಡಿಸಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಚಾಲಕ ಅಥವಾ ನಿರ್ವಾಹಕರು ಸೋಂಕಿನಿಂದ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 30 ಲಕ್ಷ ರೂ. ಗಳ ಪರಿಹಾರವನ್ನು ಒದಗಿಸುವ ಭರವಸೆಯನ್ನೂ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.