ನವದೆಹಲಿ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಇಶಾ ಫೌಂಡೇಶನ್ ಸಹಭಾಗಿತ್ವದಲ್ಲಿ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ನೇರ ವೆಬಿನಾರ್ ಅನ್ನು ಆಯೋಜನೆಗೊಳಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸದ್ಗುರು ಅವರು, ನಮ್ಮೆಲ್ಲರಲ್ಲೂ ಒಬ್ಬ ಸ್ವಚ್ಛತಾ ಯೋಧನಿದ್ದಾನೆ ಎಂದು ಹೇಳಿದರು.
“ಭಾರತವನ್ನು ಶುಚಿಯಾಗಿಟ್ಟುಕೊಳ್ಳಲು ಪೊರಕೆಯೇ ಉಪಕರಣವಲ್ಲ, ನಮ್ಮ ನಗರಗಳು ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ನಾಗರಿಕರ ಕ್ರಿಯಾಶೀಲ ಸಹಭಾಗಿತ್ವ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ’’ ಎಂದು ಅವರು ಹೇಳಿದರು.
“ಸವಾಲಿನ ಸಮಯದಲ್ಲಿ ಸದ್ಗುರು ಅವರೊಂದಿಗೆ ಸ್ವಚ್ಛತಾ ಯೋಧರು’ ಎಂಬ ಶೀರ್ಷಿಕೆಯಡಿ ನೇರ ವೆಬಿನಾರ್ ಅನ್ನು ಆಯೋಜನೆಗೊಳಿಸಲಾಗಿತ್ತು. ಒಂದು ಗಂಟೆಗಳ ಕಾಲ ನಡೆದ ವೆಬಿನಾರ್ನಲ್ಲಿ ಸದ್ಗುರು ಅವರು, ಸೂರತ್ನ ಉಜ್ಜಯನಿ, ಪೂರ್ವ ದೆಹಲಿ ಮಹಾನಗರ ಪಾಲಿಕೆ, ಆಗ್ರಾ ಮತ್ತು ಮಧುರೈನ ಜಿಲ್ಲಾ ಕಲೆಕ್ಟರ್/ಮಹಾನಗರ ಪಾಲಿಕೆಗಳ ಆಯುಕ್ತರೊಂದಿಗೆ ಸಂವಾದ ನಡೆಸಿದರು ಮತ್ತು ಪ್ರಸಕ್ತ ಬಿಕ್ಕಟ್ಟಿನ ಸಮಯವನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಶಕ್ತಿಯುತ ಒಳದೃಷ್ಟಿಯನ್ನು ನೀಡಿದರು.
ಈ ಗೋಷ್ಠಿಯನ್ನು ಕೋವಿಡ್ ಚಾಂಪಿಯನ್ಸ್ ಆಗಿ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ಸಮರ್ಪಿಸಲಾಯಿತು. ಕಾರ್ಯಕ್ರಮವನ್ನು ಎಂಒಎಚ್ ಯುಎ ಕಾರ್ಯದರ್ಶಿ ಶ್ರೀ ದುರ್ಗಾ ಶಂಕರ್ ಮಿಶ್ರಾ ನಿರೂಪಿಸಿದರು. ನೈರ್ಮಲ್ಯ ಕಾರ್ಯಕರ್ತರು ಮುಂದಿಟ್ಟ ಹಲವು ಪ್ರಶ್ನೆಗಳಿಗೆ ಆಧ್ಯಾತ್ಮಿಕ ಗುರು ಉತ್ತರಿಸಿದರು. ಈ ಗೋಷ್ಠಿಯನ್ನು ಯೂಟ್ಯೂಬ್ ಮೂಲಕ (isha.co/MoHUAwithSadhguru) ವೆಬ್ ಕಾಸ್ಟ್ ಲೈವ್ ಮಾಡಲಾಯಿತು. ಅದೇ ಸಮಯದಲ್ಲಿ ಹಿಂದಿ ಅನುವಾದಿತ ಕಾರ್ಯಕ್ರಮ (isha.co/MoHUAwithSadhguruinHindi) ಪ್ರಸಾರವಾಯಿತು.
ಶ್ರೀ ಸದ್ಗುರು ಅವರು, ಸ್ವಚ್ಛ ಭಾರತ್ ಮಿಷನ್ (ಎಸ್ಬಿಎಂ) ಅತ್ಯಂತ ಮಹತ್ವದ ಪಾತ್ರವಹಿಸಿದೆ, ಆದ್ದರಿಂದ ದೇಶದಲ್ಲಿ ಸ್ವಚ್ಛತಾ ಪ್ರಮಾಣ ಗಣನೀಯವಾಗಿ ಸುಧಾರಣೆಯಾಗಿದೆ ಎಂದು ಹೇಳಿದರು. ಕಳೆದ ಐದು ವರ್ಷಗಳಿಂದ ಈ ಯೋಜನೆ ಮುಂಚೂಣಿಯಲ್ಲಿರುವ ನೈರ್ಮಲ್ಯ ಕಾರ್ಯಕರ್ತರ ಪ್ರಯತ್ನಗಳಿಗೆ ವಿಶೇಷವಾಗಿ ಗೌರವ ಸಲ್ಲಿಸುವುದಾಗಿ ಅವರು ಹೇಳಿದರು.
ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನೈರ್ಮಲ್ಯ ಕಾರ್ಯಕರ್ತರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀ ಸದ್ಗುರು ಅವರು, ಸ್ವಚ್ಛತಾ ಯೋಧರನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಪ್ರಮುಖವಾಗಿ ಪ್ರತಿಪಾದಿಸಿದರು. ಅಲ್ಲದೆ ನೈರ್ಮಲ್ಯ ಕಾರ್ಯಕರ್ತರಿಗೆ ಸಮವಸ್ತ್ರ, ಅಗತ್ಯ ವೈಯಕ್ತಿಕ ರಕ್ಷಣಾ ಉಪಕರಣಗಳು ಲಭ್ಯವಾಗುವುದನ್ನು ಖಾತ್ರಿಪಡಿಸುವ ಮೂಲಕ ಅವರಲ್ಲಿ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಯಾವುದೇ ಭಯವಿಲ್ಲದಂತೆ ನೋಡಿಕೊಳ್ಳಬೇಕು ಎಂದರು.
“ನೈರ್ಮಲೀಕರಣ ಎಂಬುದು ಅತಿ ದೊಡ್ಡ ಸವಾಲು ಎಂದು ಹೇಳಬೇಕಿಲ್ಲ. ತ್ಯಾಜ್ಯವನ್ನು ಒಣ ಮತ್ತು ಹಸಿ ತ್ಯಾಜ್ಯವನ್ನಾಗಿ ವಿಂಗಡಿಸುವುದು ಮತ್ತು ಸಂಸ್ಕರಿಸುವುದು, ಕೈಗಾರಿಕೆಗಳ ತ್ಯಾಜ್ಯವನ್ನು ಸಂಸ್ಕರಿಸುವುದು ಹಾಗೂ ಸ್ಥಳೀಯ ಕೈಗಾರಿಕೆಗಳು ಹೊರಹಾಕುವ ತ್ಯಾಜ್ಯವನ್ನು ಸಂಸ್ಕರಿಸುವುದಕ್ಕೂ ಗಮನಹರಿಸಬೇಕಾಗಿದೆ” ಎಂದರು.
ಅಲ್ಲದೇ, “ಒಣ ತ್ಯಾಜ್ಯ ವಿಂಗಡಣೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಆ ಮೂಲಕ ನಾಗರಿಕರು ಅತ್ಯುತ್ಸಾಹದಿಂದ ಆ ಕಾರ್ಯವನ್ನು ಕೈಗೊಳ್ಳಲು ಅವರಿಗೆ ಉತ್ತೇಜನ ನೀಡಬೇಕಾಗಿದೆ” ಎಂದು ಹೇಳಿದರು.
ಈ ಗೋಷ್ಠಿಯಲ್ಲಿ ಭಾರತದಾದ್ಯಂತ 4300 ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ (ಯುಎಲ್ ಬಿ) ಪ್ರತಿನಿಧಿಗಳು ಭಾಗವಹಿಸಿದ್ದರು. ಅದರಲ್ಲಿ ಪೌರಾಡಳಿತ ಆಯುಕ್ತರು, ಮುಖ್ಯ ಕಾರ್ಯಕಾರಿ ಅಧಿಕಾರಿಗಳು ಹಾಗೂ ಮೇಯರ್ ಅವರಂತಹ ರಾಜಕೀಯ ಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು, ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ಕೋವಿಡ್-19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಎಲ್ಲ ಚಾಂಪಿಯನ್ಗಳು ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.