ನವದೆಹಲಿ: COVID-19 ಕಾರಣದಿಂದಾಗಿ ದೇಶಾದ್ಯಂತ ಲಾಕ್ಡೌನ್ ಅನ್ನು ವಿಧಿಸಿದ ನಂತರ ವಿವಿಧ ಸ್ಥಳಗಳಲ್ಲಿ ವಲಸಿಗರು, ವಿದ್ಯಾರ್ಥಿಗಳು ಮುಂತಾದವರು ಸಿಲುಕಿ ಹಾಕಿಕೊಂಡಿದ್ದಾರೆ.
ಇದೀಗ ಸಿಲುಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ಜನರನ್ನು ಅವರ ತವರಿಗೆ ವಾಪಸ್ ಕಳುಹಿಸುವ ಸಲುವಾಗಿ ವಿಶೇಷ ರೈಲುಗಳನ್ನು ಸಂಚರಿಸಲು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಅನುಮತಿ ನೀಡಿದೆ.
ಈ ರೈಲುಗಳನ್ನು ರೈಲ್ವೆ ಸಚಿವಾಲಯದ ಅಡಿಯಲ್ಲಿ ಭಾರತೀಯ ರೈಲ್ವೆ ನಿರ್ವಹಿಸಲಿದೆ ಮತ್ತು ಇದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಿದೆ.
ಟ್ವಿಟ್ಟರ್ ಮೂಲಕ ಈ ಬಗ್ಗೆ ಮಾಹಿತಿಯನ್ನು ನೀಡಿರುವ ಕೇಂದ್ರ ಗೃಹ ಸಚಿವಾಲಯದ ವಕ್ತಾರರು, “ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳನ್ನು ಅವರ ಊರುಗಳಿಗೆ ತಲುಪಿಸಲು ರೈಲ್ವೆ ಸಚಿವಾಲಯವು ವಿಶೇಷ ರೈಲುಗಳನ್ನು ನಿರ್ವಹಿಸಲು ಅನುಮತಿಸಲಾಗಿದೆ. ನೋಡಲ್ ಅಧಿಕಾರಿಗಳನ್ನು ರಾಜ್ಯಗಳು / ಯುಟಿಗಳಲ್ಲಿ ರೈಲ್ವೆ ಸಂಚಾರವನ್ನು ಸಮನ್ವಯಗೊಳಿಸಲು ನೇಮಿಸಲಾಗುತ್ತದೆ” ಎಂದಿದ್ದಾರೆ.
ರೈಲ್ವೆ ಸಚಿವಾಲಯವು ಟಿಕೆಟ್ ಮಾರಾಟ ಮತ್ತು ಸಾಮಾಜಿಕ ಅಂತರ ಮತ್ತು ಇತರ ಸುರಕ್ಷತಾ ಕ್ರಮಗಳಿಗಾಗಿ ರೈಲು ನಿಲ್ದಾಣಗಳು, ರೈಲು ಪ್ಲಾಟ್ಫಾರ್ಮ್ಗಳು ಮತ್ತು ರೈಲುಗಳ ಒಳಗೆ ಅನುಸರಿಸಬೇಕಾದ ವಿವರವಾದ ಮಾರ್ಗಸೂಚಿಗಳನ್ನು ನೀಡಲಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎಂಎಚ್ಎ ಹೊರಡಿಸಿದ ಮಾರ್ಗಸೂಚಿಯ ಪ್ರಕಾರ, ಲಾಕ್ಡೌನ್ ಕಾರಣದಿಂದಾಗಿ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳನ್ನು ಸ್ಥಳಾಂತರಿಸಲು “ಕಾರ್ಮಿಕ ದಿನ”ವಾದ ಶುಕ್ರವಾರದಿಂದ “ಶ್ರಮಿಕ್ ವಿಶೇಷ” ರೈಲುಗಳನ್ನು ಓಡಿಸಲು ನಿರ್ಧರಿಸಿದೆ ಎಂದು ರೈಲ್ವೆ ಸಚಿವಾಲಯದ ಕಾರ್ಯನಿರ್ವಾಹಕ ನಿರ್ದೇಶಕ (ಐಪಿ) ರಾಜೇಶ್ ದತ್ ಬಾಜ್ಪೈ ಹೇಳಿದ್ದಾರೆ.
ಅಂತಹ ಸಿಲುಕಿದ ವ್ಯಕ್ತಿಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಪ್ರಮಾಣಿತ ಪ್ರೋಟೋಕಾಲ್ಗಳ ಪ್ರಕಾರ ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಈ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಈ “ಶ್ರಮಿಕ್ ಸ್ಪೆಷಲ್ಸ್”ನ ಸಮನ್ವಯ ಮತ್ತು ಸುಗಮ ಕಾರ್ಯಾಚರಣೆಗಾಗಿ ರೈಲ್ವೆ ಮತ್ತು ರಾಜ್ಯ ಸರ್ಕಾರಗಳು ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸುತ್ತವೆ ಎಂದು ಬಾಜ್ಪೈ ಹೇಳಿದ್ದಾರೆ.
ಪ್ರಯಾಣಿಕರನ್ನು ಪರೀಕ್ಷಿಸಿ ಮತ್ತು ರೋಗ ಲಕ್ಷಣಗಳು ಇಲ್ಲವೆಂದು ಕಂಡುಬರುವವರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ. ರೈಲಿನಲ್ಲಿ ಸ್ಥಳಾವಕಾಶ ಕಲ್ಪಿಸುವಾಗ ಸಾಮಾಜಿಕ ಅಂತರವನ್ನು ತಪ್ಪದೇ ಪಾಲನೆ ಮಾಡಬೇಕು. ರೈಲುಗಳನ್ನು ಸೋಂಕು ಮುಕ್ತಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.
ಈಗಾಗಲೇ ತೆಲಂಗಾಣ ಮತ್ತು ಕೇರಳದಿಂದ ಜಾರ್ಖಂಡ್ಗೆ ಒಂದು ವಿಶೇಷ ರೈಲು ವಲಸಿಗರನ್ನು ಹೊತ್ತು ಪ್ರಯಾಣಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.