ನವದೆಹಲಿ: ಕೋವಿಡ್-19 ನಿಂದ ಉದ್ಭವವಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರಕಾರವು ಬಿಸಿ ಊಟ ಯೋಜನೆಗಾಗಿನ ತನ್ನ ವಾರ್ಷಿಕ ಕೇಂದ್ರೀಯ ಅನುದಾನವನ್ನು ಶೇಕಡ 11 ರಷ್ಟು ಹೆಚ್ಚಿಸಿ 8,500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಎಲ್ಲ ರಾಜ್ಯಗಳ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ.
ಬಿಸಿಊಟ ತಯಾರಿಕೆಗೆ ಬೇಕಾಗುವ ಆಹಾರ ಧಾನ್ಯಗಳು, ತರಕಾರಿಗಳು, ಖಾದ್ಯತೈಲಗಳು, ಮಸಾಲೆಗಳು ಮತ್ತು ಇಂಧನಗಳನ್ನು ಖರೀದಿ ಮಾಡಲು ಕೇಂದ್ರ ನೀಡುವ ಅನುದಾನ 7300 ಕೋಟಿ ರೂಪಾಯಿಗಳು. ಆದರೆ ಲಾಕ್ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಸಮರ್ಪಕ ಮತ್ತು ಪೌಷ್ಟಿಕ ಆಹಾರಗಳನ್ನು ಮಕ್ಕಳಿಗೆ ಒದಗಿಸುವ ನಿಟ್ಟಿನಲ್ಲಿ ಬಿಸಿಯೂಟ ಯೋಜನೆ ಅಡಿಯಲ್ಲಿ ರೇಷನ್ ಪೂರೈಕೆ ಮಾಡಲು ನಿರ್ಧರಿಸಲಾಗಿದೆ.
ಬಿಸಿಯೂಟ ಯೋಜನೆಯ ಕೇಂದ್ರ ಅನುದಾನದ ಯೋಜನೆಯಾಗಿದ್ದು, ಶಾಲೆಗೆ ಮಕ್ಕಳ ದಾಖಲಾತಿ, ಹಾಜರಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಾರಿಗೆ ತರಲಾದ ಒಂದು ಮಹತ್ವಪೂರ್ಣ ಯೋಜನೆಯಾಗಿದೆ. ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ಒದಗಿಸುವ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ.
ಇದೀಗ ಲಾಕ್ ಡೌನ್ ಹಿನ್ನೆಲೆಯಲ್ಲಿ, ಬೇಸಿಗೆ ರಜೆಯಲ್ಲಿ ಕೂಡ ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ಪೂರೈಕೆ ಮಾಡಲು ನಿರ್ಧರಿಸಲಾಗಿದೆ. ದೇಶದಾದ್ಯಂತದ ಸುಮಾರು 11 ಲಕ್ಷ ಶಾಲೆಗಳಲ್ಲಿ ಕಲಿಯುತ್ತಿರುವ 12 ಕೋಟಿ ಮಕ್ಕಳು ಬಿಸಿಯೂಟ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಒಂದರಿಂದ 5ನೇ ತರಗತಿವರೆಗಿನ ಮಕ್ಕಳ ಬಿಸಿಯೂಟವನ್ನು 4 ರೂಪಾಯಿ 48 ಪೈಸೆಯಿಂದ 4 ರೂಪಾಯಿ 97 ಪೈಸೆಗೆ ಏರಿಸಲಾಗಿದೆ. ಆರರಿಂದ ಎಂಟನೇ ತರಗತಿ ಮಕ್ಕಳಿಗೆ ಬಿಸಿ ಊಟದ ವೆಚ್ಚವನ್ನು 6 ರೂಪಾಯಿ 71 ಪೈಸೆ ಗಳಿಂದ ಏಳು ರೂಪಾಯಿ 45 ಪೈಸೆ ಗಳಿಗೆ ಏರಿಸಲಾಗಿದೆ. ಈ ವರ್ಷದ ಏಪ್ರಿಲ್ 1ರಿಂದಲೇ ಏರಿಕೆ ಅನ್ವಯವಾಗಲಿದೆ.
ಬೇಸಿಗೆ ರಜೆಯಲ್ಲೂ ಮಧ್ಯಾಹ್ನದ ಬಿಸಿಯೂಟವನ್ನು ನೀಡಲು ಅನುಮೋದನೆಯನ್ನು ನೀಡಲಾಗಿದೆ, ಇದಕ್ಕಾಗಿ ಹೆಚ್ಚುವರಿ 1600 ಕೋಟಿಗಳನ್ನು ವ್ಯಯಿಸಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.