ಡೆಹ್ರಾಡೂನ್ : ಲಾಕ್ಡೌನ್ ಕಾರಣದಿಂದಾಗಿ ಮನೆಗಳೊಳಗೆ ಸೇರಿಕೊಂಡಿರುವ ಜನರು ಏನಾದರೂ ಹೊಸ ಪ್ರಯೋಗಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಕೆಲವರು ಹೊಸ ರುಚಿಗಳನ್ನು ಮಾಡುವುದರಲ್ಲಿ ನಿರತರಾಗಿದ್ದರೆ ಕೆಲವರು ಓದು, ಬರಹ, ಸೇರಿದಂತೆ ಇತರ ಹವ್ಯಾಸಗಳ ಪೋಷಣೆಯಲ್ಲಿ ನಿರತರಾಗಿದ್ದಾರೆ. ಆದರೆ ಉತ್ತರಾಖಂಡದ ಈ ಹಳ್ಳಿಯ ಜನ ಬೆಟ್ಟ, ಗುಡ್ಡ ಪರ್ತವತಗಳ ಸವಾಲಿನ ಮಧ್ಯೆ ತಮ್ಮ ಹಳ್ಳಿಗೊಂದು ರಸ್ತೆಯನ್ನು ನಿರ್ಮಿಸಿಕೊಂಡಿದ್ದಾರೆ.
ಉತ್ತರಾಖಂಡದ ನೈನಿತಾಲದ ಖಡಕಿ ಎಂಬ ಗ್ರಾಮದಲ್ಲಿ ಸುಮಾರು 40 ಮನೆಗಳಿವೆ. ಒಂದು ದಶಕದ ಹಿಂದೆ ಸರಕಾರ 6 ಲಕ್ಷ ರೂ. ವೆಚ್ಚ ಮಾಡಿ ಈ ಹಳ್ಳಿಗೊಂದು ರಸ್ತೆ ನಿರ್ಮಿಸಿತ್ತು. ಆದರೆ ಕೆಲ ತಿಂಗಳ ನಂತರ ರಸ್ತೆ ಕುಸಿಯಲು ಪ್ರಾರಂಭವಾಗಿ ಸಂಪೂರ್ಣವಾಗಿ ಹದಗೆಟ್ಟು ಹೋಯಿತು. ಬೇರೆ ವಿಧಿ ಇಲ್ಲದೇ ಜನ ಅದೇ ಕಚ್ಚಾ ರಸ್ತೆಯ ಬಳಸಿಯೇ ಓಡಾಡುತ್ತಿದ್ದರು.
ಎಷ್ಟೇ ದೂರುಗಳನ್ನು ನೀಡಿದರೂ ಅಧಿಕಾರಿಗಳು ಇದರ ಬಗ್ಗೆ ಕಿಂಚಿತ್ತು ಗಮನಹರಿಸಲಿಲ್ಲ. ಕೊರೋನಾ ಸಾಂಕ್ರಾಮಿಕದ ಕಾರಣದಿಂದಾಗಿ ಲಾಕ್ಡೌನ್ ಘೋಷಣೆಯಾದ ಪರಿಣಾಮ ಹಳ್ಲಿಯ ಜನರಲ್ಲಿ ಸಾಕಷ್ಟು ಸಮಯವಿತ್ತು. ತಮ್ಮ ಹಳ್ಳಿಯ ರಸ್ತೆಯನ್ನು ತಾವೇ ಸರಿಪಡಿಸಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದ ಗ್ರಾಮಸ್ಥರು 25 ಜನರ ಒಂದು ತಂಡವನ್ನು ರಚಿಸಿ ರಸ್ತೆಯನ್ನು ಭಾಗಗಳನ್ನಾಗಿ ವಿಂಗಡಿಸಿ ಸಣ್ಣ ಸಣ್ಣ ತಂಡಗಳಲ್ಲಿ ಆಯಾ ಭಾಗವನ್ನು ಸಿದ್ದಪಡಿಸಿಸಲು ಪ್ರಾರಂಭಿಸಿದರು.
ರಸ್ತೆ ಕಾಮಗಾರಿಗಾಗಿ ಇವರ ಬಳಿ ವಿಶೇಷ ಉಪಕರಣ, ಸಲಕರಣೆಗಳೇನೂ ಇರಲಿಲ್ಲ. ತಮ್ಮ ಬಳಿಯಲ್ಲಿದ್ದ ಉಪಕರಣಗಳನ್ನೇ ಬಳಸಿ ಪ್ರಾರಂಭಿಸಿದರು. ಇದರ ಮಧ್ಯೆ ಕಾಡು ಪ್ರಾಣಿಗಳ ಹಾವಳಿ ಬೇರೆ. ಇಷ್ಟೆಲ್ಲಾ ಸವಾಲುಗಳ ಮಧ್ಯೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತ ಒಂದು ತಿಂಗಳ ಅವಧಿಯಲ್ಲಿ ಎರಡು ಮೀಟರ್ ಅಗಲದ, ತಗ್ಗು ದಿಣ್ಣೆಗಳಿಲ್ಲದ ಸಮತಟ್ಟವಾದ ರಸ್ತೆಯನ್ನು ಗ್ರಾಮಸ್ಥರು ತಾವೇ ಸಿದ್ಧಪಡಿಸಿಕೊಂಡರು. ಟ್ರಕ್ಗಳು ಓಡಾಡಲು ಕಷ್ಟವಾಗಿದ್ದ ರಸ್ತೆಯಲ್ಲಿ ಈಗ ಮೋಟರ್ಸೈಕಲ್ ಕೂಡ ಆರಾಮಾಗಿ ಓಡಿಸಬಹುದು.
ಗ್ರಾಮಸ್ಥರ ಈ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಿಲ್ಲಾಡಳಿತ, ಕೊರೋನಾ ಸಂಕಷ್ಟದ ನಂತರ ಗ್ರಾಮಸ್ಥರಿಗೆ ಸೂಕ್ತ ಸೌಲಭ್ಯ ಒದಗಿಸಿ ರಸ್ತೆಯನ್ನು ಸಂಪೂರ್ಣವಾಗಿ ಪಕ್ಕಾ ರಸ್ತೆಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.